ಕೋಲಾರ,ಮೇ,೨೩-ನಗರದ ಹೊರವಲಯದ ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ಎತ್ತಿ ಹಿಡಿದ ವಾರ್ಷಿಕ ಇಂಜಿನಿಯರಿಂಗ್ ಪ್ರಾಜೆಕ್ಟ್ ಪ್ರದರ್ಶನ ನಡೆಯಿತು.
ಇ.ಸಿ, ಸಿ.ಎಸ್, ಎ.ಐ.ಎಂ.ಎಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಜ್ಞಾನವನ್ನು ಆಧಾರವಾಗಿಸಿಕೊಂಡು ವಿನ್ಯಾಸಗೊಳಿಸಿದ ಆಧುನಿಕ ತಂತ್ರಜ್ಞಾನ ಆಧಾರಿತ ಆಕರ್ಷಕ ಯೋಜನೆಗಳನ್ನು ಪ್ರದರ್ಶಿಸಿದರು.
ಪ್ರದರ್ಶನದಲ್ಲಿ ಅರೋಗ್ಯ, ಕೃಷಿ, ಭದ್ರತೆ, ಸ್ವಚ್ಛತೆ, ಮಿಲಿಟರಿ ಮುಂತಾದ ಕ್ಷೇತ್ರಗಳ ವಿಷಯಾಧಾರಿತ ನವೀನ ಆವಿಷ್ಕಾರಗಳು ಗಮನ ಸೆಳೆದವು.
ಪ್ರದರ್ಶನವನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಎನ್. ಚಂದ್ರಶೇಖರ ಉದ್ಘಾಟಿಸಿ, “ಪ್ರತಿಯೊಂದು ಯೋಜನೆಯಲ್ಲೂ ವಿದ್ಯಾರ್ಥಿಗಳ ಶ್ರಮ, ಕ್ರಿಯಾತ್ಮಕ ಚಿಂತನೆ ಮತ್ತು ನವೀನತೆಯ ಸ್ಪಷ್ಟ ಪ್ರತಿಬಿಂಬ ಇದೆ.
ನಿಮ್ಮೆಲ್ಲರ ಶ್ರಮ, ಸೃಜನಾತ್ಮಕತೆ, ಅಧ್ಯಾಪರುಗಳ ಮಾರ್ಗದರ್ಶನ ಮತ್ತು ತಂಡದ ಒಗ್ಗಟ್ಟಿನಿಂದ ಇಂತಹ ಸಾಧನೆಗಳು ಆವಿಷ್ಕಾರಗೊಂಡಿವೆ ಹಾಗು ಇಂತ ಕಾರ್ಯ ಸಾಧನೆಗಳು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶ ನೀಡುತ್ತವೆ” ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯಿಂದ ಆಕರ್ಷಕ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಅತ್ಯುತ್ತಮ ಪ್ರಾಜೆಕ್ಟ್ ಗಳಿಗೆ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರಶಂಸಿಸಲಾಯಿತು.
ಈ ತಾಂತ್ರಿಕ ಮೇಳದಲ್ಲಿ ಪೋಷಕರು, ಅಧ್ಯಾಪಕರು ಮತ್ತು ಇತರ ವಿದ್ಯಾರ್ಥಿಗಳು ಪಾಲ್ಗೊಂಡು ಅದೊಂದು “ಸಾಧನಾ ಸಮಾವೇಶ” ಎಂಬುದಕ್ಕೆ ಸಾಕ್ಷಿಯಾದರು.