ವಿಜಯಪುರದ ಕುಖ್ಯಾತ ರೌಡಿ ಯುನಸ್ ಎನ್‌ಕೌಂಟರ್ ಗೆ ಬಲಿ

ವಿಜಯಪುರ,ಅ.೧೮-ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿಯುನಸ್ ಪಟೇಲ್ ಎನ್‌ಕೌಂಟರ್ ಗೆ ಬಲಿಯಾಗಿರುವ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ಹೊರ ಭಾಗದಲ್ಲಿ ನಡೆದಿದೆ.


ನಗರದ ನಟೋರಿಯಸ್ ರೌಡಿ ಯುನಸ್ ಪಟೇಲ್ (೩೫) ಪೊಲೀಸರು ಆತ್ಮರಕ್ಷಣೆಗೆ ಹಾರಿಸಿದ ಗುಂಡೇಟಿಗೆ ಬಲಿಯಾಗಿದ್ದಾನೆ.


ನಗರದ ಗಾಂಧಿ ಚೌಕ್ ವ್ಯಾಪ್ತಿಯಲ್ಲಿ ಅ.೧೭ ರಂದು ಓರ್ವನಿಗೆ ಚಾಕು ತೋರಿಸಿ ೨೫ ಸಾವಿರ ಹಣ ಸುಲಿಗೆ ಮಾಡಿ, ಆತನ ಸ್ಕೂಟಿಯನ್ನೇ ದೋಚಿ ರೌಡಿ ಯುನಸ್ ಪಟೇಲ್ ಪರಾರಿಯಾಗಿದ್ದು,ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಆರೋಪಿ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರುವ ಖಚಿತವಾದ ಮಾಹಿತಿಯನ್ನು ಇಂದು ಬೆಳಿಗ್ಗೆ ಆಧರಿಸಿ ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.


ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯುನಸ್‌ನನ್ನು ಬೆನ್ನತ್ತಿ ಬಂಧಿಸಲು ಮುಂದಾದಾಗ ಇಬ್ಬರು ಕಾನ್ಸ್‌ಟೇಬಲ್ ಹಾಗೂ ಇನ್ಸ್‌ಪೆಕ್ಟರ್ ಮೇಲೆ ಆರೋಪಿ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.


ಆಗ ಆಯತಪ್ಪಿ ಇನ್ಸ್‌ಪೆಕ್ಟರ್ ಪ್ರದೀಪ್ ತಳಕೇರಿ ಬಿದ್ದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಇನ್ಸ್‌ಪೆಕ್ಟರ್
ಎಚ್ಚರಿಕೆ ನೀಡಿದ್ದಾರೆ.


ಆದರೂ ಯುನಸ್ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆರೋಪಿ ಯುನಸ್ ನತ್ರ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದಾಗ ಗುಂಡೇಟು ತಗುಲಿ ಕುಸಿದು ಬಿದ್ದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಆತನನ್ನು ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾಸ್ಪತ್ರೆಯ ವೈದ್ಯರು ಆರೋಪಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.


ಯುನಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ, ಸೇರಿದಂತೆ ಒಟ್ಟು ೧೨ ಪ್ರಕರಣಗಳಿವೆ. ಈ ಕುರಿತು ತನಿಖೆ ಮುಂದುವರಿಯುತ್ತಿದೆ.