
ಮೈಸೂರು, ಅ. ೧೮- ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಪೂರ್ವಾನುಮತಿ ಪಡೆಯಬೇಕು ಎಂಬ ಆದೇಶವನ್ನು ಆರ್ಎಸ್ಎಸ್ ಸೇರಿದಂತೆ ಯಾವುದೇ ನಿರ್ಧಿಷ್ಟ ಸಂಘ ಸಂಸ್ಥೆಗಳನ್ನು ಗುರಿಯಾಗಿಸಿ ಹೊರಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಡಾದ ಅವರು, ಯಾವುದೇ ಸಂಘ ಸಂಸ್ಥೆಗಳು ಚಟುವಟಿಕೆಗಳನ್ನು ನಡೆಸುವಾಗ ಜನರಿಗೆ ತೊಂದರೆಯಾಗಬಾರದು. ಆ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳು ನಡೆಯುವಾಗ ಪೂರ್ವಾನುಮತಿ ಪಡೆಯಬೇಕು ಎಂಬ ಆದೇಶವನ್ನು ಹೊರಡಿಸಲಾಗಿದೆ. ಇದರಲ್ಲಿ ಯಾವುದೇ ಸಂಘ ಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದರು.
ಈ ಆದೇಶವನ್ನು ಈ ಹಿಂದೆಯೇ ಜಗದೀಶ್ ಶೆಟ್ಟರ್ರವರು ಮುಖ್ಯಮಂತ್ರಿಯಾಗಿದ್ದಾಗ ಹೊರಡಿಸಲಾಗಿತ್ತು. ಆಗ ಈ ಆದೇಶವನ್ನು ಯಾರೂ ಪ್ರಶ್ನಿಸಲಿಲ್ಲ. ಅದೇ ಆದೇಶವನ್ನು ನಾವು ಈಗ ಪುನರ್ ಹೊರಡಿಸಿದ್ದೇವೆ ಅಷ್ಟೇ. ಈಗ ಏಕೆ ಈ ಬಗ್ಗೆ ವಿರೋಧ, ಚರ್ಚೆ ಎಂದು ಪ್ರಶ್ನಿಸಿದರು.
ಕಲ್ಬುರ್ಗಿಯ ಚಿತ್ತಾಪುರದಲ್ಲಿ ನಾಳೆ ನಡೆಯಲಿರುವ ಆರ್ಎಸ್ಎಸ್ ಪಥಸಂಚಲನದ ಬಗ್ಗೆ ಕೇಳಲಾದ ಪ್ರಶ್ನೆಗೆ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ. ಇಲ್ಲಿ ಶಾಂತಿಗೆ ಭಂಗವಾಗದಂತೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.
ಬಿಜೆಪಿ ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ. ಜನರ ಹಿತ ಚಿಂತನೆಯನ್ನು ಮರೆತಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾಗದ ಬಗ್ಗೆ ಹಾಗೂ ಕಮೀಷನ್ ಹಾವಳಿ ಬಗ್ಗೆ ಗುತ್ತಿಗೆದಾರರ ಸಂಘ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿರುವ ಕುರಿಚು ಪ್ರತಿಕ್ರಿಯಿಸಿದ ಅವರು, ಇದನ್ನು ಸಂಬಂಧಪಟ್ಟ ಸಚಿವರು ನೋಡಿಕೊಳ್ಳುತ್ತಾರೆ. ಅವರೇ ಈ ಬಗ್ಗೆ ಕ್ರಮ ಕೈಗೊಳ್ಳುವರು ಎಂದರು.
ಮೈಸೂರಿನಲ್ಲಿ ನಿನ್ನೆ ನಡೆದ ಉದ್ಯೋಗ ಮೇಳ ಯಶಸ್ವಿಯಾಗಿದೆ. ಈ ಉದ್ಯೋಗ ಮೇಳವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.