ಆಂತರಿಕ ಜಗಳವಿಲ್ಲ

ಕೆಂಪೇಗೌಡ ಜಯಂತಿ ಅಂಗವಾಗಿ ವಿಧಾನಸೌಧದ ಎದಿರು ಕೆಂಪೇಗೌಡರ ಪ್ರತಿಮೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.ಸಿಎಂ ಸಿದ್ದರಾಮಯ್, ಸಚಿವರಾದ ಎಚ್ ಸಿ ಮಹದೇವಪ್ಪ, ಶಿವರಾಜ್ ತಂಗಡಗಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಬಸನಗೌಡ ದದ್ದಲ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು, ಜೂ. ೨೭- ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕದನ, ಒಳ ಜಗಳ ನಡೆದಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ.


ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಆಂತರಿಕ ಜಗಳವಿಲ್ಲ . ಎಲ್ಲಿದೆ ಜಗಳ ತೋರಿಸಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.


ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಸಚಿವ ರಾಜಣ್ಣ ಅವರು ರಾಜ್ಯ ರಾಜಕೀಯದಲ್ಲಿ ಬೆಳವಣಿಗೆ ಆಗಬಹುದು ಎಂದು ಹೇಳಿದ್ದಾರೆ ಅಷ್ಟೆ. ಇಂತಹದ್ದೆ ಆಗುತ್ತದೆ ಎಂದು ಅವರು ಹೇಳಿಲ್ಲ. ನೀವೆಲ್ಲಾ ಏನೆನೋ ಊಹೆ ಮಾಡಿಕೊಂಡು ವರದಿ ಮಾಡುವುದು ಸರಿಯಲ್ಲ ಎಂದರು.


ರಾಜಣ್ಣ ಅವರ ಹೇಳಿಕೆಯನ್ನು ವಿಶ್ಲೇಷಿಸಲು ನಾನು ಪತ್ರಕರ್ತನಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು, ರಾಜಣ್ಣ ಹೇಳಿಕೆಯನ್ನು ನಿರ್ಲಕ್ಷಿಸಿ ಎಂದರು.


ಸಚಿವ ರಾಜಣ್ಣ ಅವರ ಹೇಳಿಕೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬ ಪ್ರಶ್ನೆಗೂ ಮುಖ್ಯಮಂತ್ರಿಗಳು ರಾಜಣ್ಣ ಅವರ ಹೇಳಿಕೆ ನಿರ್ಲಕ್ಷಿಸಲು ಸೂಕ್ತವಾಗಿದೆ. ಅದನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಎಂದು ಪುನರುಚ್ಚರಿಸಿದರು.


ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರುಗಳೇ ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸಿದ್ದರು. ನಂತರ ನಿನ್ನೆ ಸಚಿವ ರಾಜಣ್ಣ ಅವರು ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಹೇಳಿಕೆ ನೀಡಿದ್ದು ಸುದ್ದಿಗೆ ಗ್ರಾಸವಾಗಿ, ನಾನಾ ಚರ್ಚೆಗಳಿಗೆ ಎಡೆ ಮಾಡಿತ್ತು.


ಈ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟನೆ ನೀಡವ ಮೂಲಕ ಯಾವ ಬೆಳವಣಿಗೆಗಾಳಬೇಕು ಎಂಬುದುನ್ನು ರಾಜಣ್ಣ ಹೇಳಿಲ್ಲ. ಅದನ್ನು ನಿರ್ಲಕ್ಷಿಸಿ. ರಾಜಣ್ಣ ಅವರ ಹೇಳಿಕೆಗಳ ಬಗೆಗಿನ ಚರ್ಚೆಗಳಿಗೆ ತೆರೆ ಎಳೆಯುವ ಯತ್ನ ನಡೆಸಿ, ರಾಜಣ್ಣ ಹೇಳಿಕೆಯನ್ನು ನಿರ್ಲಕ್ಷಿಸಿ ಎಂದು ೨-೩ ಬಾರಿ ಪುನರುಚ್ಛರಿಸಿದರು.


ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಡಾ.ಹೆಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ ಮತ್ತಿತರರು ಮುಖ್ಯಮಂತ್ರಿಗಳ ಜತೆ ಇದ್ದರು.

ಜಿಲ್ಲಾವಾರು ಶಾಸಕರ ಸಭೆಗೆ ಚಿಂತನೆ


ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರುಗಳೇ ಅಸಮಾಧಾನ, ಅತೃಪ್ತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ. ಅನುದಾನ ಮತ್ತು ಬಡವರಿಗೆ ಮನೆಗಳನ್ನು ಪಡೆಯಲು ಹಣ ನೀಡಬೇಕು ಎಂದು ಹೇಳಿಕೆ ನೀಡಿರುವ ಬೆನ್ನಲ್ಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಅತೃಪ್ತಿ, ಅಸಮಾಧಾನ ಶಮನಕ್ಕೆ ಮುಂದಾಗಿದ್ದು ಜಿಲ್ಲಾವಾರು ಶಾಸಕರ ಸಭೆ ಕರೆದು ಅಹವಾಲು ಆಲಿಸಲು ಮುಂದಾಗಿದ್ದಾರೆ.


ಕಾಂಗ್ರೆಸ್ ಶಾಸಕರಲ್ಲಿನ ಅತೃಪ್ತಿ, ಅಸಮಾಧಾನ ಸರಿಪಡಿಸಿ. ಯಾವುದೇ ಶಾಸಕರು ಬಹಿರಂಗವಾಗಿ ರಾಜ್ಯ ಸರ್ಕಾರದ ವಿರದ್ಧ ಹೇಳಿಕೆ ನೀಡುವುದಕ್ಕೆ ಕಡಿವಾಣ ಹಾಕಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಿಲ್ಲಾವಾರು ಕಾಂಗ್ರೆಸ್ ಶಾಸಕರನ್ನು ಕರೆದು ಅವರ ಜತೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಚರ್ಚಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ಹೇಳಿವೆ.


ಬರುವ ಜುಲೈ ೧ ರಿಂದ ಬೆಂಗಳೂರಿಲ್ಲಿ ಜಿಲ್ಲಾವಾರು ಶಾಸಕರ ಸಭೆ ಕರೆದು ಅವರ ಸಮಸ್ಯೆಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಮದ್ದು ಅರೆಯುವ ಕೆಲಸ ಮಾಡಲಿದ್ದಾರೆ.
ಜಿಲ್ಲಾವಾರು ಶಾಸಕರ ಸಭೆಯ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರನ್ನೂ ಕರೆದು ಶಾಸಕರ ಕೆಲಸ ಮಾಡಿಕೊಡುವಂತೆ ಮುಖ್ಯಮಂತ್ರಿಗಳು ತಾಕೀತು ಮಾಡುವರು ಎಂದು ಹೇಳಲಾಗಿದೆ.


ವಸತಿ ಇಲಾಖೆಯಲ್ಲಿ ಮನೆಗಳನ್ನು ಪಡೆಯಲು ಹಣ ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇವರ ಜತೆಗೆ ಶಾಸಕರುಗಳಾದ ರಾಜು ಕಾಗೆ, ಎನ್.ವೈ. ಗೋಪಾಲಕೃಷ್ಣ ಇವರುಗಳು ಸಹ ಕಾಂಗ್ರಸ್ ಸರ್ಕಾರದಲ್ಲಿ ಅನುದಾನ ಸಿಗುತ್ತಿಲ್ಲ, ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ.

ಪಾಟೀಲ್ ಅವರು ಹೇಳಿರುವುದು ಸತ್ಯವಿದೆ ಎಂದು ಬಹಿಂರಗವಾಗಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಗಳು ಸರ್ಕಾರಕ್ಕೆ ಮುಜುಗರ ತಂದಿದ್ದು. ಪಕ್ಷದ ಹೈಕಮಾಂಡ್ ಸಹ ಶಾಸಕರ ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಸಕರ ಸಮಸ್ಯೆಗಳನ್ನು ಆಲಿಸಿ ಎಂದು ಸೂಚನೆ ನೀಡಿತ್ತು.


ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸದಿಂದ ವಾಪಸ್ಸಾದ ತಕ್ಷಣವೇ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ ಇವರುಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಸಮಾಧಾನಪಡಿಸಿದ್ದರು .ಈಗ ಜಿಲ್ಲಾವಾರು ಶಾಸಕರ ಸಭೆ ಕರೆದು ಶಾಸಕರ ಅಹವಾಲುಗಳನ್ನು ಆಲಿಸಲು ನಿರ್ಧರಿಸಿದ್ದಾರೆ.


ಜುಲೈ ೧ ರಿಂದ ಪ್ರತಿದಿನ ಒಂದು ಜಿಲ್ಲೆಯ ಶಾಸಕರ ಸಭೆಗಳು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿದೆ.