ಬೀದರ್: ಜೂ.27:ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿಯಂಚಿನ ಹತ್ತಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬರೂರ್-ಮೆಟಲಕುಂಟಾ ನಡುವಿನ ರೈಲ್ವೆ ಕೆಳ ಸೇತುವೆ (ಆರ್ಯುಬಿ) ನಿರ್ಮಾಣ ಕುರಿತು ಮಾಜಿ ಶಾಸಕ ಅಶೋಕ ಖೇಣಿ ಅವರು ಅಗ್ಗದ ಪ್ರಚಾರ ಪಡೆಯಲು ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ದೂರಿದ್ದಾರೆ.
ದಕ್ಷಿಣ ಕ್ಷೇತ್ರದ ಜನರ ಸುದೀರ್ಘ ಬೇಡಿಕೆ ಹಿನ್ನಲೆಯಲ್ಲಿ ಬರೂರ್-ಮೆಟಲಕುಂಟಾ ಹತ್ತಿರ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕಾಗಿ ಆಗಿನ ಸಂಸದರು, ಕೇಂದ್ರ ಸಚಿವರಿದ್ದ ಭಗವಂತ ಖೂಬಾ ಅವರಿಗೆ ಸತತ ಮನವಿ ಮಾಡಿದ್ದೇನೆ. ಕ್ಷೇತ್ರದ ಜನರ ಹಿತದ ಈ ಬೇಡಿಕೆಗೆ ಸ್ಪಂದಿಸಿದ ಖೂಬಾ ಅವರು ರೈಲ್ವೆ ಸಚಿವರಿಗೆ ಭೇಟಿಯಾಗಿ, ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಈ ಕಾಮಗಾರಿಗೆ ಒಪ್ಪಿಗೆ ನೀಡುವ ಅಗತ್ಯತೆ ಬಗ್ಗೆ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ 7.65 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ 2024ರ ಮಾರ್ಚ್ 12ರಂದು ಸಮ್ಮತಿಸಿತ್ತು. ಖೂಬಾ ಅವರು ಈ ಕಾಮಗಾರಿಗೆ 2024ರ ಮಾರ್ಚ್ 14ರಂದು ಭೂಮಿಪೂಜೆ ಸಹ ಮಾಡಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ತಮ್ಮ ಪ್ರಸ್ತಾವನೆಯ ಮೇಲೆ ಇದಕ್ಕೆ ಅನುಮೋದನೆ ಸಿಕ್ಕಿದೆ ಎಂದು ಅಶೋಕ ಖೇಣಿ ಹೇಳುತ್ತಿರುವುದು, ಖೇಣಿ ಕಾರ್ಯಕ್ಕೆ ಮೆಚ್ಚುಗೆ ಎಂದು ಕಾಂಗ್ರೆಸ್ನ ಕೆಲವರು ಬಡಾಯಿ ಕೊಚ್ಚಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಶಾಸಕರಾದ ಬೆಲ್ದಾಳೆ ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.
ಬರೂರ್, ಮನ್ನಳ್ಳಿ, ಭಂಗೂರ, ಸಿಂದೋಲ್, ಚಿಂತಲಗೇರಾ, ಧರ್ಮಾಪುರ, ಹೊಕ್ರಾಣಾ(ಬಿ), ಹೊಕ್ರಾಣಾ(ಕೆ), ನಾಗೋರಾ, ಯಾಕತಪುರ, ಸಾತೋಳಿ ಇನ್ನಿತರೆ ಗ್ರಾಮಸ್ಥರಿಗೆ ಜಹೀರಾಬಾದ್ ಅಥವಾ ಮೆಟಲಕುಂಟಾ ರೈಲ್ವೆ ನಿಲ್ದಾಣಕ್ಕೆ ಹೋಗಬೇಕಾದರೆ ರೈಲ್ವೆ ಹಳಿ ದಾಟಬೇಕಿತ್ತು. ಇದಲ್ಲದೆ 10-12 ಕಿಮೀ ಸುತ್ತಿ ಬಳಸಿ ಹೋಗಬೇಕಾಗಿತ್ತು. ಜನರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು ಆರ್ಯುಬಿ ನಿರ್ಮಾಣದ ಬೇಡಿಕೆ ಮಂಡಿಸಲಾಗಿತ್ತು. ನಾನು ಖೂಬಾ ಅವರಿಗೆ ಕೋರಿದ ನಂತರ ಹಾಗೂ ಖೂಬಾ ಅವರು ಸಲ್ಲಿಸಿದ ಪ್ರಸ್ತಾವನೆ ಮೇಲೆ ಈ ಕೆಲಸ ಆಗಿದೆ. ಇದರ ಭೂಮಿಪೂಜೆ ಸಹ ನೆರವೇರಿದೆ. ಇದೀಗ ಖೇಣಿ ಮತ್ತು ಅವರ ಕೆಲವು ಹಿಂಬಾಲಕರು ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿರುವುದು ಖಂಡನೀಯ. ಅಗ್ಗದ ಪ್ರಚಾರ ಪಡೆಯಲು ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕ್ಷೇತ್ರದ ಜನರಿಗೆ ಉತ್ತಮ ಹಾಗೂ ಸತ್ಯ ಸಂದೇಶ ನೀಡಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಕ್ಷೇತ್ರದಲ್ಲಿ ಸುತ್ತಾಡುವಾಗ ಆಗಾಗ್ಗೆ ಇಲ್ಲಸಲ್ಲದ, ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಮೆಟಲಕುಂಟಾ ರೈಲ್ವೆ ಕೆಳ ಸೇತುವೆ ಕಾಮಗಾರಿ ವಿಷಯದಲ್ಲಿ ಹಸಿ ಸುಳ್ಳು ಹೇಳಿದ್ದಾರೆ. ಯಾವ ವಿಷಯದ ಬಗ್ಗೆ ಏನು ಹೇಳಬೇಕು ಎನ್ನವಷ್ಟು ಪರಿಜ್ಞಾನ ಹೊಂದದಿರುವುದು ಸೋಜಿಗದ ಸಂಗತಿ. ಇನ್ನಾದರೂ ಹೇಳಿಕೆ ನೀಡುವಾಗ ಖೇಣಿ ಅವರು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಶಾಸಕ ಬೆಲ್ದಾಳೆ ಸಲಹೆ ನೀಡಿದ್ದಾರೆ.
ಮೆಟಲಕುಂಟಾ ರೈಲ್ವೆ ಕೆಳ ಸೇತುವೆ ನಿರ್ಮಾಣ ಸಂಬಂಧ ಖೂಬಾ ಅವರು ಬರೆದಿರುವ ಪತ್ರ, ಕೇಂದ್ರದಿಂದ ಬಂದ ಉತ್ತರ, ರೈಲ್ವೆ ಇಲಾಖೆ ಅನುಮೋದನೆ ಪತ್ರಗಳನ್ನು ಸಹ ಡಾ.ಬೆಲ್ದಾಳೆ ಅವರು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.