Home ಜಿಲ್ಲೆ ಕಲಬುರಗಿ ಸಿಡಿಲಿನ ಅಟ್ಟಹಾಸ: ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎತ್ತುಗಳ ಸಾವು

ಸಿಡಿಲಿನ ಅಟ್ಟಹಾಸ: ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎತ್ತುಗಳ ಸಾವು

ಆಳಂದ:ಏ.21: ತಾಲೂಕಿನ ಹಿರೋಳಿ ವಲಯದಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯ ವೇಳೆ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟ ಘಟನೆ ನಡೆದಿದೆ. ಈ ದುರ್ಘಟನೆ ಹಿರೋಳಿ ಗ್ರಾಮದ ರೈತ ಸೋಮಲಿಂಗ ವಿಠ್ಠಲ ಜೊಗದೆ ಅವರಿಗೆ ಸೇರಿದ ಎತ್ತುಗಳಿಗೆ ಸಂಭವಿಸಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಮಧ್ಯಾಹ್ನ ಹೊತ್ತಿನಲ್ಲಿ ಹೊಲದಲ್ಲಿ ಕಟ್ಟಿದ್ದ ಎತ್ತುಗಳ ಮೇಲೆ ಸಿಡಿಲು ಬಡಿದು ಅವು ಸ್ಥಳದಲ್ಲೇ ಸಾವನ್ನಪ್ಪಿದವು ಎಂದು ತಿಳಿದು ಬಂದಿದೆ. ಏಕಾಏಕಿ ಸಂಭವಿಸಿದ ಈ ಘಟನೆ ರೈತನ ಕುಟುಂಬಕ್ಕೆ ಆಘಾತ ತಂದಿದೆ.

ಇದೇ ವೇಳೆ, ತಾಲೂಕಿನ ಇತರ ಗ್ರಾಮಗಳಲ್ಲಿಯೂ ಸಿಡಿಲಿನ ಅಟ್ಟಹಾಸ ಮುಂದುವರಿದಿದೆ. ಬಂಗರಗಾ ಗ್ರಾಮದಲ್ಲಿ ಏಪ್ರಿಲ್ 17ರಂದು ರೈತ ಅರುಣ ಚಿಟಗೋಟೆ ಅವರಿಗೆ ಸೇರಿದ ಹೂರಿಯೊಂದು ಸಿಡಿಲಿಗೆ ಬಲಿಯಾದರೆ, ಗೋಳಾ ಬಿ. ಗ್ರಾಮದಲ್ಲಿ ಈರಣ್ಣಾ ವಿಠೋಬಾ ಸಜ್ಜನ್ ಅವರಿಗೆ ಸೇರಿದ ಎತ್ತು ಕೂಡ ಸಿಡಿಲು ಬಡಿದು ಸಾವನ್ನಪ್ಪಿದೆ.
ಘಟನೆಗಳ ಕುರಿತು ಮಾಹಿತಿ ಪಡೆದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಹಾಗೂ ಸಿಬ್ಬಂದಿಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದಿಂದ ಪರಿಹಾರ ದೊರಕಬೇಕೆಂದು ರೈತರು ಆಗ್ರಹಿಸಿದ್ದಾರೆ.