
ಬೆಂಗಳೂರು,ಅ.೧೯-ನನ್ನ ಮಗಳನ್ನು ಕಳೆದ ವರ್ಷದ ಅಕ್ಟೋಬರ್ನಿಂದಲೇ ಕೊಲೆ ಮಾಡಲು ಮಹೇಂದ್ರ ರೆಡ್ಡಿ ಪ್ರಯತ್ನಿಸುತ್ತಿದ್ದು,ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಪತಿಯಿಂದ ಕೊಲೆಯಾದ ಡಾ. ಕೃತ್ತಿಕಾ ರೆಡ್ಡಿ ತಾಯಿ, ವಕೀಲೆ ಸೌಜನ್ಯ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಯಾದ ದಿನದಿಂದಲೂ ಮಹೇಂದ್ರ ರೆಡ್ಡಿಯು ನಮ್ಮ ಕುಟುಂಬದವರಿಗೆ ಸಣ್ಣ ಅನುಮಾನ ಬಾರದಂತೆ ನಡೆದುಕೊಂಡಿದ್ದ. ೨೦೨೪ ಅಕ್ಟೋಬರ್ ನಿಂದಲೇ ಮಗಳ ಹತ್ಯೆಗೆ ಪ್ಲ್ಯಾನ್ ಮಾಡುತ್ತಿದ್ದ ಎಂದು ಹೇಳಿದರು.
ನಮ್ಮ ಮಗಳು ಆಗಾಗ ಮನೆಗೆ ಬರುತ್ತಿದ್ದಳು. ದಿನ ಬಿಟ್ಟು ದಿನ ಅಳಿಯ ರಾತ್ರಿ ಪಾಳಯ ಕೆಲಸ ಎನ್ನುತ್ತಿದ್ದ, ಹಲವು ದಿನಗಳ ಕಾಲ ನಮಗೆ ತಿಳಿಯದಂತೆ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ. ಏಪ್ರಿಲ್ ೨೧ ರಂದು ಮಗಳಿಗೆ ಅವರ ಮನೆಯಲ್ಲಿ ಚಿಕಿತ್ಸೆ ನೀಡಿದ್ದ ಎಂದು ತಿಳಿಸಿದರು.
ಏಪ್ರಿಲ್ ೨೨ ರಂದು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬರುವಾಗ ಐವಿ ಡ್ರಿಪ್ಸ್ ಹಾಕಿಕೊಂಡು ಬಂದಿದ್ದ. ಬಳಿಕ ಏಪ್ರಿಲ್ ೨೩ ರಂದು ನಾನು ನನ್ನ ಮಗಳು ಜೊತೆಯಲ್ಲಿ ಊಟ ಮಾಡಿದ್ದೆವು. ನಂತರ ರಾತ್ರಿ ೯:೩೦ ಕ್ಕೆ ರೂಂಗೆ ಹೋಗಿದ್ದರು. ಮರುದಿನ ಬೆಳಗ್ಗೆ ೭:೩೦ ಕ್ಕೆ ಅಳಿಯ ರೂಂನಿಂದ ಕಿರುಚಿಕೊಂಡಿದ್ದ. ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟ ವಿಚಾರ ಗೊತ್ತಾಯಿತು ಎಂದು ವಿವರಿಸಿದರು.
ವೈದ್ಯನಾಗಿರುವ ನಾನು ಮರಣೋತ್ತರ ಪರೀಕ್ಷೆಯನ್ನು ನೋಡಬೇಕು ಎಂದು ಮಹೇಂದ್ರ ರೆಡ್ಡಿ ಹಠ ಹಿಡಿದಿದ್ದ. ಆದರೆ ವರದಿ ಬಂದ ಬಳಿಕವಷ್ಟೇ ನಮಗೆ ಈ ವಿಚಾರ ಗೊತ್ತಾಗಿತ್ತು. ಅವನ್ನೊಬ್ಬ ಗೋಮುಖ ವ್ಯಾಘ್ರ ಎಂದು ತಾಯಿ ಆಕ್ರೋಶ ವ್ಯಕ್ತಪಡಿಸಿದರು.