ಕೋಲಾರ ನಗರ ಸಾರಿಗೆ ಜನಪ್ರಿಯತೆ ಗಳಿಸಿದರೂ ನಷ್ಟದ ಆತಂಕ

ಕೋಲಾರ,ಅ,೨೧- ನಗರ ಸಾರಿಗೆ ಪ್ರಾರಂಭಿಸಿ ಈಗ ಮೂರು ತಿಂಗಳು ಕಳೆದಿದೆ, ನಗರ ಸಾರಿಗೆ ಸೇವೆಯು ಪ್ರಾರಂಭವಾದ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರತಿ ದಿನ ನಾಲ್ಕು ಮಾರ್ಗಗಳಲ್ಲಿ ೯೦ ರಿಂದ ೧೦೦ ಪ್ರಯಾಣಗಳನ್ನು (ಟ್ರಿಪ್‌ಗಳನ್ನು) ನಡೆಸಲಾಗುತ್ತಿದೆ.ಅದರೆ ನಗರ ಸಾರಿಗೆ ಜನಪ್ರಿಯತೆ ಹೆಚ್ಚಾದರೂ ನಷ್ಟದ ಆತಂಕ ಉಂಟಾಗಿದೆ.


ನಗರ ಬಸ್ ನಿಲ್ದಾಣದಿಂದ ಸಂಗೊಂಡನಹಳ್ಳಿ, ಹಸಾಳ ಗೇಟ್, ವಡಗೂರು ಗೇಟ್ ಮತ್ತು ಬೆಗ್ಲಿಹೊಸಹಳ್ಳಿ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಯುವಕರು ಸೇರಿದಂತೆ ಸಾಮಾನ್ಯ ಸಾರ್ವಜನಿಕರು ಈ ಸೇವೆ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕಾಗಿ ನಗರ ಸಾರಿಗೆ ಬಸ್ ಸಂಚರಿಸುವ ವೇಳಾಪಟ್ಟಿಯನ್ನೆ ಹಾಕಿಲ್ಲ.


ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಇದು ನಗರ ಸಾರಿಗೆ ಎನ್ನುವುದಕ್ಕಿಮತ ನಗರ-ಗ್ರಾಮಾಂತರ ಸಾರಿಗೆ ವ್ಯವಸ್ಥೆಯಿಂದ ಹಣ ಗಳಿಕೆಯಾಗುತ್ತಿದೆ. ಆದರೂ ನಗರ ಸಾರಿಗೆ ನಷ್ಠದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಕಿ.ಮೀ.ಗೆ ಸಾರಿಗೆ ಸಂಚಾರಕ್ಕೆ ೫೦ ರೂಗಳ ವೆಚ್ಚವಾಗುತ್ತಿದೆ. ಆದಾಗ್ಯೂ, ಹೆಚ್ಚಿನ ನಷ್ಟ ಉಂಟಾದಲ್ಲಿ ನಗರ ಸಾರಿಗೆ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂಬ ಆತಂಕ ವ್ಯಕ್ತವಾಗಿದೆ.


ಹಿಂದಿನ ವರ್ಷಗಳಲ್ಲಿಯೂ ಕೋಲಾರದಲ್ಲಿ ನಗರ ಸಾರಿಗೆ ಪ್ರಾರಂಭಿಸಲಾಯಿತು, ಆದರೆ ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟದ ಕಾರಣದಿಂದ ಬಸ್ ಸಂಚಾರ ಅನೇಕ ಬಾರಿ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಜನಸ್ಪಂದನೆ ಉತ್ತಮವಾಗಿರುವುದರಿಂದ, ಸಾರ್ವಜನಿಕರು ನಗರ ಸಾರಿಗೆಯ ನಿರಂತರತೆ ಕಾಪಾಡುವತ್ತ ಆಶಾವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ.

ನಮಗೆ ನಗರ ಸಾರಿಗೆ ವ್ಯವಸ್ಥೆಯಾಗಬೇಕೆಂದು ಹೋರಾಟ ಮಾಡಲಾಗಿತ್ತು, ಆದರೆ ಸಾರಿಗೆ ಇಲಾಖೆಯು ನಗರ ಮತ್ತು ಗ್ರಾಮಾಂತರ ಸಾರಿಗೆ ಒಗ್ಗೂಡಿಸಿದ್ದಾರೆ, ನಗರದ ವಿಸ್ತೀಣ ಇರುವುದೇ ೨ ಕಿ.ಮೀ ನಗರದಲ್ಲಿ ಆಟೋಗಳಲ್ಲಿ ಕನಿಷ್ಠ ೪೦ ರೂ. ಮಾಡಿದ್ದಾರೆ, ಆಟೋಗಳಿಗೆ ಮೀಟರ್ ಇರೋಲ್ಲ, ಅದರೆ ಸಾರಿಗೆ ಸಂಚಾರದಲ್ಲಿ ಪ್ರತಿ ಕಿ.ಮೀಗೆ ೬ ರೂ. ತಗಲುತ್ತದೆ. ನಮಗೆ ನಗರದ ೩೫ ವಾರ್ಡುಗಳಿಗೆ ಸಾರಿಗೆ ಸಂಚಾರ ವ್ಯವಸ್ಥೆ ಇರಬೇಕು, ನಗರದ ಸುತ್ತ ವರ್ತುಲ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಎಪಿಎಂಸಿ ಮಾರುಕಟ್ಟೆ, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಮಾರ್ಗಗಳಲ್ಲಿ ಬಸ್ ಸಂಚಾರ ಅತ್ಯಗತ್ಯ.

  • ನಾಗರಾಜ ಶೆಣೈ, ನಾಗರಿಕರು ಕೋಲಾರ.