ಬೀದರ್ ಅಭಿವೃದ್ಧಿಗೆ ಕೆಕೆಆರ್.ಡಿ.ಬಿ.ಯಿಂದಕಳೆದ 3 ವರ್ಷದಲ್ಲಿ 1500 ಕೋಟಿ ರೂ. ಹಂಚಿಕೆ: ಈಶ್ವರ ಖಂಡ್ರೆ

ಬೀದರ್:ಅ.25: ಕಾಂಗ್ರೆಸ್ ಸರ್ಕಾರ ಬಂದ ಬಳಿಕ 2023-24 ಮತ್ತು 2024-25ರಲ್ಲಿ ವಿವಿಧ ಕಾಮಗಾರಿಗಳಿಗೆ 1000 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಶೇ.63ರಷ್ಟು ವೆಚ್ಚ ಮಾಡಲಾಗಿದೆ, ಈ ವರ್ಷಕ್ಕೆ 500 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಯನ್ನು ಇಂದು ಅನುಮೋದಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಅವರು ಬುಧವಾರ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಕೆಆರ್.ಡಿಬಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, 2023-24ರಲ್ಲಿ ವಿವಿಧ ಕಾಮಗಾರಿಗಳಿಗೆ 452 ಕೋಟಿ ರೂ. ಹಂಚಿಕೆಯಾಗಿದ್ದರೆ, 2024-25ರ ಸಾಲಿನಲ್ಲಿ 545 ಕೋಟಿ ರೂ. ಹಂಚಿಕೆಯಾಗಿದೆ. ಈ ವರ್ಷ ಅಂದರೆ 2025-26ರ ಸಾಲಿನಲ್ಲಿ ಮತ್ತೆ 500 ಕೋಟಿ ರೂ. ಬರಲಿದ್ದು, ಒಟ್ಟಾರೆ ನಮ್ಮ ಸರ್ಕಾರ ಬಂದ ಬಳಿಕ ಬೀದರ್ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ.ಯಿಂದ 1500 ಕೋಟಿ ರೂ. ಹಂಚಿಕೆಯಾಗಿದೆ ಎಂದು ತಿಳಿಸಿದರು.
2013-14ರಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಅಲ್ಲಿಂದ 2024-25ರವರೆಗೆ ಒಟ್ಟು 5086 ಕಾಮಗಾರಿ ಮಂಜೂರಾಗಿದ್ದು, ಈ ಪೈಕಿ 4254 ಕಾಮಗಾರಿ ಪೂರ್ಣಗೊಂಡಿದೆ. 661 ಕಾಮಗಾರಿಗಳು ಪ್ರಗತಿಯಲ್ಲಿದ್ದು, 141 ಕಾಮಗಾರಿ ಆರಂಭವಾಗಬೇಕಿದೆ ಎಂದು ವಿವರ ನೀಡಿದರು.
ಈ ಎಲ್ಲ ಕಾಮಗಾರಿಗಳಿಗೆ 2638 ಕೋಟಿ ರೂ ಹಂಚಿಕೆಯಾಗಿದ್ದು, ಈವರೆಗೆ 1971 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ ಅವರು, ಈವರೆಗೆ ಶೇ.74ರಷ್ಟು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ ಒಳಗಾಗಿ ಕಾಮಗಾರಿ ತ್ವರಿತಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದ ಈಶ್ವರ ಖಂಡ್ರೆ, ಯಾವುದೇ ಕಾಮಗಾರಿಯಲ್ಲಿ ರಾಜೀ ಮಾಡಿಕೊಳ್ಳದೆ. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮಾಡಿದ ಕೆಲಸ ಶಾಶ್ವತವಾಗಿರಬೇಕು. ಒಂದೊಮ್ಮೆ ಕಳಪೆ ಕಾಮಗಾರಿ ನಡೆದರೆ ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣವ್ಯವಾಗಿ ಕ್ರಮ ಜರುಗಿಸಲಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಪೂರೈಕೆ ಮಾಡಿರುವ ವಿಜ್ಞಾನ ಕಿಟ್ ತಲುಪಿದೆಯೇ, ಅದರಲ್ಲಿ ಎಲ್ಲ ಪರಿಕರಗಳೂ ಇವೆಯೇ ಮತ್ತು ಬಳಕೆ ಆಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ತರಿಸಿಕೊಂಡು ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಎಂಜಿನಿಯರುಗಳು ಉಪಸ್ಥಿತರಿದ್ದರು.