
ಕೋಲಾರ,ಅ,೨೧-ಬೆಂಗಳೂರು ನಗರದ ಕೆಂಗೇರಿಯಲ್ಲಿ ಕರುನಾಡ ಕಲಾಸಿರಿ ಬಳಗದಿಂದ ನೀಡುವ ಕನ್ನಡ ರತ್ನ ಪ್ರಶಸ್ತಿಗೆ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಆರ್.ವೆಂಕಟರೆಡ್ಡಿ ಭಾಜನರಾಗಿದ್ದಾರೆ.
ಸಾಂಸ್ಕೃತಿಕ ಸಮುಚ್ಛಯ ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರುನಾಡ ಕಲಾಸಿರಿ ಬಳಗದ ಅಧ್ಯಕ್ಷ ಡಾ.ಅಂಬರೀಷ್ ಕರುನಾಡ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಇದಕ್ಕೂ ಮುನ್ನಾ ಕಾರ್ಯಕ್ರಮವನ್ನು ಚಿತ್ರನಟ ಚೇತನ್ ಅಹಿಂಸಾ ಉದ್ಘಾಟಿಸಿ, ಕನ್ನಡ ಭಾಷೆಯನ್ನು ಇಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕಲಿಯಬೇಕು, ಮಾತನಾಡಬೇಕು ಎಂದು ತಿಳಿಸಿ, ಹೊರ ರಾಜ್ಯಗಳಿಂದ ಬರುವವರಿಗೂ ಇಲ್ಲಿ ಕನ್ನಡ ಕಲಿಸುವ ಅಗತ್ಯವಿದೆ ಎಂದರು. ಸಂಘಟನೆಯ ಅಧ್ಯಕ್ಷ ಡಾ.ಅಂಬರೀಷ್ ಮಾತನಾಡಿ, ಕನ್ನಡ ನಾಡು,ನುಡಿಗಾಗಿ ನಾವು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಕನ್ನಡ ಉಳಿಸುವ ಕಾರ್ಯದಲ್ಲಿ ಬದ್ದತೆಯಿಂದ ಕೆಲಸ ಮಾಡುತ್ತಿರುವ ಕನ್ನಡ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ವೆಂಕಟರೆಡ್ಡಿ, ಖಾಸಗಿ ಶಾಲೆಗಳಲ್ಲಿ ಆಂಗ್ಲಭಾಷೆ ವ್ಯಾಮೋಹ ಮಿತಿ ಮೀರಿದೆ, ಇಂದು ಕನ್ನಡ ಭಾಷೆ ಉಳಿದಿರುವುದೇ ಸರ್ಕಾರಿ ಶಾಲೆಗಳಲ್ಲಿ ಎಂದು ತಿಳಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಕನ್ನಡ ಬರಹ,ಓದು ಕಲಿಸಲು ಆದ್ಯತೆ ನೀಡಬೇಕಾಗಿದೆ ಎಂದರು
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಾ.ಟಿ.ಯಲ್ಲಪ್ಪ, ವಿನಯ್ ಗುರೂಜಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಲಿಟ್ಲ್ ಬ್ಯೂಂ ಶಾಲೆಯ ಸಂಸ್ಥಾಪಕಿ ಸರಸ್ವತಿ ಮತ್ತಿತರರು ಹಾಜರಿದ್ದರು.