
ಸಂಜೆ ವಾಣಿ ವಾರ್ತೆ
ಜಮಖಂಡಿ:ಡಿ.೮:ಕಿತ್ತೂರು ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಮಖಂಡಿಯ ಮಹಿಮೆಯನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸುತ್ತಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು, ಜಮಖಂಡಿಯ ಸಾಹಿತ್ಯ ಸೌರಭ ವೇದಿಕೆ ಹಾಗೂ ಜಮಖಂಡಿಯ ಶ್ರೀವೀರೇಶ್ವರ ಪ್ರಕಾಶನದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪಿ.ಬಿ. ಹೈಸ್ಕೂಲ್ನ ಡಾ.ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಕವಿಗೋಷ್ಠಿ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುವ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದೆ. ಪ್ರತಿಭೆಗಳನ್ನು ಸನ್ಮಾನಿಸುವುದರಿಂದ ಪ್ರತಿಭಾವಂತರ ಆಯುಷ್ಯ ವೃದ್ಧಿಯಾಗುತ್ತದೆ ಎಂದರು.
ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರತಿಭೆ ಮತ್ತು ಸಾಧನೆ ಎಂದಿಗೂ ಆಕಸ್ಮಿಕವಲ್ಲ. ನಿರಂತರವಾದ ಪ್ರಾಮಾಣಿಕ ಪ್ರಯತ್ನ ಮತ್ತು ತಪಸ್ಸಿನಿಂದ ಸಾಧನೆ ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುತಿಸುವ ಗುಣ ಸಂಘ-ಸAಸ್ಥೆಗಳಿಗೆ ಇರದಿದ್ದರೆ ಸಾಧಕರು ಬೆಳಕಿಗೆ ಬರುವುದಿಲ್ಲ. ದೈಹಿಕ ಕಸರತ್ತು ಪ್ರದರ್ಶಿಸುವವರು ಸಹ ಕವಿಗಳು, ಸಾಹಿತಿಗಳ ಜೊತೆ ಪಾಲುದಾರರಾಗಬೇಕು ಎಂದರು.
ಕಸಾಪ ರಬಕವಿ-ಬನಹಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಮ.ಕೃ. ಮೇಗಾಡಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಾತೃ ಭಾಷೆ ಕನ್ನಡವನ್ನು ಮಾತನಾಡುವಾಗ ಹೃದಯ ತುಂಬಿ ಬರುತ್ತದೆ ಎಂದರು.
ಸರ್ಕಾರಿ ಪಿ.ಬಿ. ಹೈಸ್ಕೂಲ್ ಶಿಕ್ಷಕಿ ಇಂದಿರಾ ಜಲದುರ್ಗ ಮಾತನಾಡಿ, ಬದುಕು ನಮ್ಮದೆ ಆಗಿರುತ್ತದೆ. ಆದರೆ, ಬದುಕಿಗೆ ಬೇಕಾಗುವ ಮಾತುಗಳು ಬೇರೆಯವರಾಗಿರುತ್ತವೆ. ಬದುಕಿಗೆ ಬೇಕಾಗುವ ಮಾತುಗಳು ವೇದಿಕೆಗಳ ಮೂಲಕ ಕೇಳಿಬರುತ್ತವೆ ಎಂದರು.
ಡಾ.ಶ್ರೀದೇವಿ ಸುವರ್ಣಖಂಡಿ, ಗಣಪತಿ ಗಲಗಲಿ, ಭಾಗ್ಯಶ್ರೀ ಕೋಟಿ, ಚಿದಾನಂದ ಜಡಿಮಠ, ಚಂದ್ರಕಲಾ ಜನಗೊಂಡ, ಪ್ರವೀಣ ಕುಲಕರ್ಣಿ, ಬಾಹುಬಲಿ ಬಿರಾದಾರಪಾಟೀಲ, ಗುರುನಥ ಸುತಾರ ಸ್ವರಚಿತ ಕವನ ವಾಚನ ಮಾಡಿದರು. ಒಟ್ಟು ೩೯ ಜನ ವಿಶೇಷ ಸಾಧಕರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಎಂ.ಡಿ. ಸಂಖ, ಇಬ್ರಾಹಿಂ ಅರಬ, ಪರಶುರಾಮ ಗುದಗಿಯವರ ತಮ್ಮ ಅನಿಸಿಕೆ ಹಂಚಿಕೊAಡರು. ಶ್ರೀಗುರುದೇವ ಸಂಗೀತ ಬಳಗದ ಕಲಾವಿದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮೌನೇಶ ಬಡಿಗೇರ ನಿರೂಪಿಸಿದರು. ಪ್ರೊ.ಆರ್.ಕೆ. ಹೊಸಟ್ಟಿ ವಂದಿಸಿದರು.
























