Home ಮುಖಪುಟ ಸುದ್ದಿ ರಾಜ್ಯದ ಆರ್ಥಿಕ ಪರಿಸ್ಥಿತಿ ಜನತೆಗೆ ತಿಳಿಸಿ

ರಾಜ್ಯದ ಆರ್ಥಿಕ ಪರಿಸ್ಥಿತಿ ಜನತೆಗೆ ತಿಳಿಸಿ

ಬಾಗಲಕೋಟೆ ಏ.೧. ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ಜನರಿಗೆ ತಿಳಿಸುವ ಪುಣ್ಯದ ಕೆಲಸ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.


ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಮೂರು ವರ್ಷಗಳಾಗಿವೆ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುತ್ತೇವೆ; ಖಾಲಿ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದೀರಿ.

ಅದು ಮರೆತು ಹೋಯಿತೇ? ಎಂದು ಕೇಳಿದರು. ೨ ಲಕ್ಷ ೮೬ ಸಾವಿರಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿ ಮಾಡದೇ ನಾಡಿನ ಯುವಜನತೆ ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿಗೆ ತಾವು ತಂದಿದ್ದೀರಿ. ಯುವಜನತೆ ತಮ್ಮ ಬಳಿ ಅಹವಾಲು ಮಂಡಿಸಲು ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು ಎಂದು ಗಮನ ಸೆಳೆದರು.


ಧಾರವಾಡದಲ್ಲಿ ನ್ಯಾಯಕ್ಕಾಗಿ ಲಕ್ಷಾಂತರ ಯುವಜನತೆ ಒತ್ತಾಯಿಸಿದಾಗ ಲಾಠಿಪ್ರಹಾರ ಮಾಡಿದ್ದೀರಿ. ಯಾಕೆ ಸತ್ಯ ಮರೆಮಾಚುತ್ತಿದ್ದೀರಿ ಎಂದು ಪ್ರಶ್ನಿಸಿದರು. ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಹೈಕೋರ್ಟಿನ ಕುಂಟು ನೆಪ, ಮೀಸಲಾತಿ ನೆಪ ಹೇಳಿಕೊಂಡು ನೇಮಕಾತಿಯನ್ನು ಮುಂದೂಡುತ್ತಿರುವುದು ತಾವಲ್ಲವೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಕೈಗನ್ನಡಿಯಲ್ಲವೇ?


ಮಂಡ್ಯ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಪಿಂಚಣಿ ಕೊಡುವುದನ್ನೂ ೧೦ ತಿಂಗಳಿಂದ ನಿಲ್ಲಿಸಿದ್ದಾರೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಕೈಗನ್ನಡಿಯಲ್ಲವೇ ಎಂದು ಪ್ರಶ್ನೆ ಹಾಕಿದರು. ಅತಿಥಿ ಉಪನ್ಯಾಸಕರಿಗೆ ೨ ತಿಂಗಳಿಂದ ಸಂಬಳ ನೀಡದೇ ಇರುವುದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಎತ್ತಿ ತೋರಿಸುವುದಿಲ್ಲವೇ ಎಂದು ವಿಜಯೇಂದ್ರ ಅವರು ಪ್ರಶ್ನೆ ಮಾಡಿದರು.


ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಾನೂನು- ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯುತ ಪೊಲೀಸ್ ಇಲಾಖೆಗೆ ೧೫- ೨೦ ದಿನ, ಒಂದು ತಿಂಗಳಾದರೂ ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ. ಇದು ಆರ್ಥಿಕ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿದೆ ಎಂಬುದನ್ನು ತೋರಿಸುವುದಿಲ್ಲವೇ ಎಂದು ಕೇಳಿದರು.
ಕೇವಲ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತೀರಿ. ಯುಕೆಪಿ ಮುಳುಗಡೆ ಪರಿಹಾರ ವಿಚಾರದಲ್ಲಿ ೪ ತಿಂಗಳ ಹಿಂದೆ ವಿಶೇಷ ಕ್ಯಾಬಿನೆಟ್ ಸಭೆ ಮಾಡಿದ್ದೀರಿ. ನೀರಾವರಿ ಜಮೀನಿರುವ ರೈತರಿಗೆ ಎಕರೆಗೆ ೪೦ ಲಕ್ಷ ಪರಿಹಾರ, ಒಣ ಭೂಮಿ ಇರುವವರಿಗೆ ೩೦ ಲಕ್ಷ ಪರಿಹಾರ ಎಂದು ತಿಳಿಸಲಾಗಿತ್ತು. ಬಜೆಟ್‌ನಲ್ಲಿ ಇದಕ್ಕಾಗಿ ಎಷ್ಟು ಸಾವಿರ ಕೋಟಿ ಇಟ್ಟಿದ್ದೀರಿ ಎಂದು ಪ್ರಶ್ನೆ ಮುಂದಿಟ್ಟರು.


ತುಂಗಭದ್ರಾ ಅಣೆಕಟ್ಟಿನ ಗೇಟ್ ಕುಸಿಯಿತು. ನಾವು ತೆಲಂಗಾಣ, ಆಂಧ್ರವನ್ನು ಕಾಯುವುದಿಲ್ಲ. ರಾಜ್ಯ ಸರಕಾರವೇ ಹಣ ಹಾಕಿ ೨೧ ಗೇಟ್ ಕೂರಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ಕೊಟ್ಟಿದ್ದರು. ಆಂಧ್ರವು ಗೇಟ್ ದುರಸ್ತಿಗೆ ಹಣ ಕೊಟ್ಟಿತು. ಸಂಬಳಕ್ಕಾಗಿ ೨೦ ಕೋಟಿ ಹೆಚ್ಚುವರಿಯಾಗಿ ಕೊಟ್ಟರೆ, ಆ ಹಣದಿಂದ ರಾಜ್ಯ ಸರಕಾರ ಕೊಟ್ಟ ೧೦ ಕೋಟಿ ಹಿಂಪಡೆಯುವ ಕೆಲಸ ಮಾಡಿದೆ. ಇದು ವಾಸ್ತವಿಕ ಸತ್ಯ. ಇದನ್ನು ಅರ್ಥ ಮಾಡಿಕೊಳ್ಳಲು ಆರ್ಥಿಕ ತಜ್ಞರಾಗಬೇಕಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು.


ಕರ್ನಾಟಕದ ಗ್ಯಾರಂಟಿ ದೇಶಕ್ಕೇ ಮಾದರಿ ಎಂದು ಬಡಾಯಿ ಕೊಚ್ಚಿಕೊಂಡರು. ಹಿಮಾಚಲ ಪ್ರದೇಶದಲ್ಲಿ ಏನಾಗಿದೆ? ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ದೇವಾಲಯಗಳಿಗೆ ಪತ್ರ ಬರೆದಿದ್ದಾರೆ. ಗ್ಯಾರಂಟಿ ಕಾರಣದಿಂದ ಸರಕಾರಿ ನೌಕರರ ವೇತನ ಕೊಡಲು ಆಗುತ್ತಿಲ್ಲ. ಭಕ್ತರ ಆದಾಯದಲ್ಲಿ ಶೇ ೫೦ರಷ್ಟನ್ನು ಸರಕಾರಕ್ಕೆ ಕೊಡಿ ಎಂದು ಪತ್ರದಲ್ಲಿ ಕೋರಿದ್ದರು. ಗ್ಯಾರಂಟಿ ಜಾರಿ ಮಾಡಿರುವ, ಕಾಂಗ್ರೆಸ್ ಆಡಳಿತ ಇರುವ ತೆಲಂಗಾಣದಲ್ಲಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಸಂಬಳ ಕೊಡಲು, ಅಭಿವೃದ್ಧಿಗೂ ಹಣ ನೀಡಲು ಆಗುತ್ತಿಲ್ಲ ಎಂದಿದ್ದಾರೆ ಎಂದರು.

ಗ್ಯಾರಂಟಿಗಳ ಬಗ್ಗೆ ನಿಮ್ಮವರಿಗೆ ಮನವರಿಕೆ ಮಾಡಿ..


ಗ್ಯಾರಂಟಿಗಳ ಬಗ್ಗೆ ನಮಗೆ ಮನವರಿಕೆ ಮಾಡಬೇಡಿ; ನಿಮ್ಮ ಪಕ್ಷದ ಹಿರಿಯ ಶಾಸಕ ದೇಶಪಾಂಡೆ, ನಿಮ್ಮದೇ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್ ಅವರಿಗೆ ಮನವರಿಕೆ ಮಾಡಿ ಎಂದು ಆಗ್ರಹಿಸಿದರು. ಅನುದಾನ ಇಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ರಾಜು ಕಾಗೆಯವರಿಗೆ ಮನವರಿಕೆ ಮಾಡಿ ಎಂದು ಒತ್ತಾಯಿಸಿದರು.

ಬಾಗಲಕೋಟೆಯಲ್ಲಿ ೫ ದಿನ ಬಿಡಾರ ಹೂಡುವ ಪರಿಸ್ಥಿತಿ ಯಾಕೆ?


ಅಭಿವೃದ್ಧಿ- ಗ್ಯಾರಂಟಿ ಕುರಿತು ನಿಮಗೆ ಆತ್ಮವಿಶ್ವಾಸ ಇದ್ದಿದ್ದರೆ, ಮುಖ್ಯಮಂತ್ರಿಗಳೇ ನೀವು ಬಾಗಲಕೋಟೆಯಲ್ಲಿ ೫ ದಿನ ಬಿಡಾರ ಹೂಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಸಚಿವಸಂಪುಟದ ಪಟಾಲಂನೊಂದಿಗೆ ಸೂಟ್‌ಕೇಸ್ ಹಿಡಿದುಕೊಂಡು ಕೂರುವ ದಾರಿದ್ರ್ಯ ಬರುತ್ತಿರಲಿಲ್ಲ ಎಂದು ಟೀಕಿಸಿದರು. ಈಗಲೂ ಕಾಲಮಿಂಚಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ವಿನಂತಿಸಿದರು.

ಎರಡೂ ಕಡೆ ಗೆಲುವು ಖಚಿತ…


ಕಾರ್ಯಕರ್ತರ ಹಗಲು- ರಾತ್ರಿ ಪರಿಶ್ರಮದ ಕಾರಣ ನಾವು ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸದಿಂದ ಬೀಗುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ರಾತ್ರಿ ಮಾತ್ರವೇ ಪರಿಶ್ರಮ ಹಾಕುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ ಸರಕಾರದ ಬಗ್ಗೆ ಜನರಿಗೆ ಕೋಪ- ಬೇಸರ ಇದೆ. ಇದೆಲ್ಲದರ ಪರಿಣಾಮವಾಗಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಲಿದೆ. ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವ ಶಕ್ತಿ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂದು ವಿಶ್ವಾಸದಿಂದ ತಿಳಿಸಿದರು.