
ಇAಡಿ: ಜೂ.೨೪:ಇಂದಿನ ಜಗತ್ತಿನಲ್ಲಿ ವ್ಯವಹಾರ ಚತುರತೆ ಎಲ್ಲರಿಗೂ ಅತ್ಯಗತ್ಯ. ಆರ್ಥಿಕ ಸಾಕ್ಷರತೆಯು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ, ಅವರ ಆರ್ಥಿಕ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ವಿಜಯಪುರದ ಆರ್ಥಿಕ ಸಾಕ್ಷರತೆ ಸಲಹೆಗಾರ ಈರೇಶ ಡಂಗಿ ಹೇಳಿದರು.
ಅವರು ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ಆರ್ಥಿಕ ಸಾಕ್ಷರತೆ-ಅರಿವು ಕಾರ್ಯಕ್ರಮ’ ವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಹಣದ ವಹಿವಾಟಿನ ಅರಿವು ಇದ್ದಾಗ, ಉಳಿತಾಯದ ಮಹತ್ವ ತಿಳಿಯುವರು. ತಾವು ಸಂಗ್ರಹಿಸಿದ ಹಣವನ್ನು ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಶಿಕ್ಷಣ ಕಲಿಕೆಗೆ ಮನೆಯೇ ಮೊದಲ ಪಾಠ ಶಾಲೆ ಹೇಗೋ ಹಾಗೆಯೇ, ‘ಆರ್ಥಿಕ ಸಾಕ್ಷರತೆ’ ಕಲಿಸುವುದಕ್ಕೂ ಮನೆಯೇ ಮೊದಲ ಪಾಠ ಶಾಲೆಯಾಗಬೇಕು. ಆದ್ಯತೆಗೆ ಅನುಗುಣವಾಗಿ ಹಣ ಬಳಕೆ ಮತ್ತು ಉಳಿತಾಯ ಮನೋಭಾವನೆ ಬೆಳೆಸಲು ಈ ಅರಿವು ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಇಂಡಿ ಆರ್ಥಿಕ ಸಾಕ್ಷರತೆ ಸಲಹೆಗಾರ ಭರತೇಶ ಉಪಾಧ್ಯ ಮಾತನಾಡಿ, ಮಕ್ಕಳಿಗೆ ದೈನಂದಿನ ಹಣಕಾಸಿನ ವಹಿವಾಟಿನ ಪರಿಚಯ ಮಾಡಿಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಇದರಿಂದ ಮಕ್ಕಳಲ್ಲಿ ಕುಟುಂಬದ ಖರ್ಚು-ವೆಚ್ಚಗಳ ಮಾಹಿತಿ ತಿಳಿದು, ವಹಿವಾಟು ಕೌಶಲ್ಯ ಬೆಳಯುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.