
ವಿಜಯಪುರ,ಫೆ.26: ತೊಗರಿ ಬೆಳೆ ವಿಮೆ ಕೊಡಿಸುವುದಾಗಿ ರೈತರಿಗೆ ನಂಬಿಸಿ ನಕಲಿ ಎಫ್ ಐಡಿ ಮಾಡಿಸಿ 22 ಜನರಿಗೆ 26,41,676 ರೂ ವಂಚಿಸಿದ ಇಬ್ಬರು ಆರೋಪಿಗಳ ವಿರುದ್ಧ ಓರಿಯಂಟಲ್ ವಿಮಾ ಕಂಪನಿಯವರು ದೇವರಹಿಪ್ಪರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದ ಅಂಜಲಿ ಕುಮಾರಿ ಎಮ್. ಹಾಗೂ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶಿವರಾಜ್ ಸಂಗನಗೌಡ ಅಮರಖೇಡ ಆರೋಪಿಗಳು.
ಈ ಆರೋಪಿಗಳು ಬೆಳೆ ವಿಮೆ ಕೊಡಿಸುವುದಾಗಿ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ವರ್ಕನಹಳ್ಳಿ ಮತ್ತು ಕೋರವಾರ ಗ್ರಾಮದ ರೈತರಿಗೆ ಆಮಷೆವೊಡ್ಡಿ, ಫೇಕ್ ಎಫ್ ಐಡಿ ಮಾಡಿಸಿ 22 ಜನರಿಗೆ ವಂಚಿಸಿದ್ದು, ವಿಮಾ ಸಂಸ್ಥೆಯ ಗಮನಕ್ಕೆ ಬರುತ್ತಿದ್ದಂತೆಯೇ, ಆರೋಪಿಗಳಿಬ್ಬರ ವಿರುದ್ಧ ದೇವರಹಿಪ್ಪರಗಿ ಠಾಣೆಯಲ್ಲಿ ಓರಿಯಂಟಲ್ ವಿಮಾ ಕಂಪನಿಯವರು ಪ್ರಕರಣ ದಾಖಲಿಸಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ರೈತರು ಆಮಿಷಕ್ಕೊಳಗಾಗಬೇಡಿ
ಮಧ್ಯವರ್ತಿಗಳು ಬೆಳೆ ವಿಮೆ ಕೊಡಿಸುವುದಾಗಿ ರೈತರನ್ನು ಸಂಪರ್ಕಿಸಿದಲ್ಲಿ ಆಮಿಷೆಕ್ಕೊಳಗಾಗಬಾರದು. ಒಂದು ವೇಳೆ ಅಂತವರು ಕಂಡು ಬಂದಲ್ಲಿ ಅವರ ವಿವರವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.



























