
ಬೆಂಗಳೂರು,ಸೆ.೧೩:ರಾಜ್ಯದಲ್ಲಿ ೭ ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ಕಾಂತರಾಜು ಆಯೋಗದ ವರದಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುವ ಸಾಧನವಾಗದಿರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ೧೬೫ ಕೋಟಿ ರೂ, ಖರ್ಚು ಮಾಡಿ ಕಾಂತರಾಜು ಆಯೋಗ ನಡೆಸಿದ್ದ ಜಾತಿಗಣತಿಯನ್ನು ೧೦ ವರ್ಷಗಳ ಹಳೆಯದು ಎಂಬ ಕಾರಣ ನೀಡಿ ಕಸದ ಬುಟ್ಟಿಗೆ ಹಾಕಿದ್ದೀರಿ. ಇದೀಗ ಮತ್ತೆ ೪೨೫ ಕೋಟಿ ರೂ. ವೆಚ್ಚ ಮಾಡಿ ಜಾತಿಗಣತಿ ನಡೆಸಲು ಮುಂದಾಗಿದ್ದೀರಿ. ಕಾಂತರಾಜು ಆಯೋಗದ ವರದಿಯಂತೆ ಇದೂ ಕೂಡ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸಾಧನವಾಗದಿರಲಿ ಎಂದಿದ್ದಾರೆ.
ಅತ್ಯಲ್ಪ ಅವಧಿಯಲ್ಲಿ ೭ ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ತಯಾರಿಸುವುದಾಗಿ ಹೇಳಿದ್ದೀರಿ. ಆದರೆ, ಪರಿಶಿಷ್ಟ ಸಮುದಾಯದ ಜಾತಿಗಣತಿ ನಡೆಸಲು ನಾಗಮೋಹನ್ದಾಸ್ ಆಯೋಗವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಪಡೆದಿತ್ತು. ಈಗ ೭ ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ತಾಂತ್ರಿಕತೆ ಬಳಸಿಯಾದರೂ ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸಹಜವೇ. ಕಾಂತರಾಜು ಆಯೋಗಕ್ಕೆ ವಿಧಿಸಿದ್ದ ೧೫೦ ಕೋಟಿ ರೂ.ನಂತೆ ಈಗಿನ ೪೨೫ ಕೋಟಿ ರೂ. ಹಣ ನೀರಿಗೆ ಹೋಮವಾಗದಿರಲಿ ಎಂದು ವಿಜಯೇಂದ್ರ ಹೇಳಿದ್ದಾರೆ.