ಆಕ್ಷೇಪಗಳ ನಡುವೆ ಜಾತಿಗಣತಿ ಆರಂಭ

ಬೆಂಗಳೂರು,ಸೆ.೨೨- ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಲವು ಸಮುದಾಯಗಳ ವಿರೋಧ, ಅಸಮಾಧಾನ, ಆಕ್ಷೇಪ, ಆತಂಕ, ಗೊಂದಲದ ನಡುವೆಯೇ ಜಾತಿ ಗಣತಿ ಇಂದಿನಿಂದ ಪ್ರಾರಂಭವಾಗಿದೆ.

ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ೭ ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಇಂದಿನಿಂದ ಅಕ್ಟೋಬರ್ ೭ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ.

ಇಂದಿನಿಂದ ಆರಂಭವಾಗಲಿರುವ ಜಾತಿ ಗಣತಿಗೆ ಹಿಂದುಳಿದ ವರ್ಗಗಳ ಆಯೋಗ ೧.೭೫ ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲಿದ್ದು, ಗಣತಿಗೆ ನಿಯೋಜಿತರಾಗಿರುವ ಶಿಕ್ಷಕರಿಗೆ ಗಣತಿ ಕಾರ್ಯ ಯಾವ ರೀತಿ ನಡೆಸಬೇಕು, ಯಾವೆಲ್ಲಾ ಮಾಹಿತಿ ಸಂಗ್ರಹಿಸಬೇಕು ಎಂಬ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಿದೆ.
೩೩ ಉಪಜಾತಿ ಕೈಬಿಟ್ಟ ಸರ್ಕಾರ
ಇಂದಿನಿಂದ ಮನೆ ಮನೆಗೆ ತೆರಳುವ ಗಣತಿದಾರರು ಹಿಂದುಳಿದ ವರ್ಗ ಈಗಾಗಲೇ ಸಿದ್ಧಪಡಿಸಿರುವ ೬೦ ಪ್ರಶ್ನೆಗಳನ್ನು ಕೇಳಿ, ಆ ಮಾಹಿತಿ ದಾಖಲು ಮಾಡಿಕೊಳ್ಳಲಾಗುತ್ತದೆ. ಕ್ರಿಶ್ಚಿಯನ್ ಉಪಜಾತಿಗಳ ಹೆಸರನ್ನು ನಮೂದಿಸುವ ಕುರಿತು ಭುಗಿಲೆದ್ದಿದ್ದ ವಿರೋಧದ ಹಿನ್ನೆಲೆಯಲ್ಲಿ ೩೩ ಜಾತಿಗಳನ್ನ ಸರ್ಕಾರದ ಸಲಹೆ ಮೇರೆಗೆ ಆಯೋಗ ಕೈ ಬಿಟ್ಟಿದೆ.

ಕ್ರಿಶ್ಚಿಯನ್ ಉಪಜಾತಿಗಳ ವಿಚಾರಕ್ಕೆ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಸಚಿವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ರಾಜ್ಯಪಾಲರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಎಲ್ಲ ಕಾರಣದಿಂದ ಇದೀಗ ಗೊಂದಲಕ್ಕೆ ಕಾರಣವಾದ ಕ್ರಿಶ್ಚಿಯನ್ ಉಪಜಾತಿಗಳನ್ನ ಕೈಬಿಡಲಾಗಿದೆ. ಈ ಮೂಲಕ ಕ್ರಿಶ್ಚಿಯನ್ ಉಪ ಜಾತಿ ನಮೂದಿನ ಕುರಿತಂತೆ ಎದ್ದಿರುವ ವಿವಾದಕ್ಕೆ ಸರ್ಕಾರ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ಜನರಿಗೆ ಇಚ್ಚೆ ಇದ್ದರೆ ಪಟ್ಟಿಯಿಂದ ಕೈಬಿಟ್ಟಿರೋ ಧರ್ಮ ಮತ್ತು ಜಾತಿ ಹೆಸರು ಬರೆಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ರಾಜಧಾನಿಯಲ್ಲಿ ೨-೩ ದಿನ ತಡ

ರಾಜ್ಯದಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ ಆರಂಭವಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ೨-೩ ದಿನ ವಿಳಂಬವಾಗುವ ಸಾಧ್ಯತೆ ಇದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಡಳಿತ ಬಂದ ಹಿನ್ನೆಲೆ ಮತ್ತು ತರಬೇತಿ ತಡವಾಗಿ ಆಗಿರುವುದರಿಂದ ೨-೩ ದಿನ ತಡವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭ ಆಗಲಿದೆ.