ಕಲಬುರಗಿ,ಜೂ.26: ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಂದು ಬಿಜೆಪಿ ಸದಸ್ಯರು ಧರಣಿ ನಡೆಸಿದ ಪ್ರಸಂಗ ನಡೆಯಿತು.
ಪೌರ ಕಾರ್ಮಿಕರಿಗೆ ಈ ಹಿಂದೆ ಇದ್ದ ಗುತ್ತಿಗೆ ಪದ್ಧತಿ ನೇಮಕಾತಿಯ ಬದಲು, ರಾಜ್ಯ ಸರಕಾರವೇ ವೇತನ ಪಾವತಿ ಮಾಡಲು ಮುಂದಾದ ಆದೇಶ ನೀಡಿದ ಹಿನ್ನೆಲೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಮೇಯರ್ ಯಲ್ಲಪ್ಪ ನಾಯ್ಕೋಡಿ ಮತ್ತು ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮೊದಲಾದವರಿಗೆ ಅಭಿನಂದನೆ ಸಲ್ಲಿಸಿದರು.
ಆದರೆ ಮಾಜಿ ಸಚಿವ ಎಸ್.ಕೆ ಕಾಂತಾ ಸಹ ಪೌರ ಕಾರ್ಮಿಕರ ಖಾಯಮಾತಿ ವಿಷಯದಲ್ಲಿ ಸತತ ಹೋರಾಟ ನಡೆಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸಿ ಎಂದು ಪ್ರತಿಪಕ್ಷದ ಬಿಜೆಪಿ ಸದಸ್ಯರು ಪಟ್ಟು ಹಿಡಿದರು.
ಈ ಗದ್ದಲದ ನಡುವೆ ಕಾಂಗ್ರೆಸ್ ಸದಸ್ಯರೊಬ್ಬರಿಂದ “ದತ್ತಾತ್ರೇಯ ಪಾಟೀಲ ರೇವೂರ ಗೆಲ್ಲಲು ಎಸ್.ಕೆ ಕಾಂತಾ ಕಾರಣ “ಎಂಬ ಮಾತು ಬಿಜೆಪಿ ಸದಸ್ಯರನ್ನು ಕೆರಳಿಸಿತು.ಮಾತಿಗೆ ಮಾತು ಬೆಳೆದು ಪಾಲಿಕೆ ಪ್ರತಿಪಕ್ಷದ ನಾಯಕ ಸಚಿನ್ ಕಡಗಂಚಿ, ಮಾಜಿ ಮೇಯರ್ ವಿಶಾಲ್ ದರ್ಗಿ, ಮಾಜಿ ಉಪಮೇಯರ್ ಶಿವಾನಂದ ಪಿಸ್ತಿ,ವಿಜಯಕುಮಾರ ಸೇವಲಾನಿ, ವೀರಣ್ಣ ಹೂನಳ್ಳಿ ಮೊದಲಾದವರು ಧರಣಿ ಕುಳಿತು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.