
ಕಲಬುರಗಿ,ಮಾ.6-ಬೈಕ್ ಸವಾರನೊಬ್ಬನಿಗೆ ಲಿಫ್ಟ್ ಕೇಳಿ ಚಾಕುವಿನಿಂದ ಇರಿದ ಘಟನೆ ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಗೃತಿ ಕಾಲೋನಿಯ ಹಳೆಯ ಗಾರ್ಡನ್ ಹತ್ತಿರ ನಡೆದಿದೆ.
ಅನ್ನಪೂಣೇಶ್ವರಿ ಕಾಲೋನಿಯ ಜಯವರ್ಧನ್ ತಂದೆ ರಾಜಣ್ಣ ಮರಪಳ್ಳಿ (36) ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಯವರ್ಧನ್ ಅವರು ರಾತ್ರಿ 10 ಗಂಟೆ ಸುಮಾರಿಗೆ ಜಾಗೃತಿ ಕಾಲೋನಿಯಲ್ಲಿರುವ ಸ್ವಂತ ಮನೆಯಿಂದ ಅನ್ನಪೂಣೇಶ್ವರಿ ಕಾಲೋನಿಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಹಳೆಯ ಗಾರ್ಡನ್ ಹತ್ತಿರ ಮೂವರು ಅಪರಿಚಿತರು ಇವರ ಬೈಕ್ ತಡೆದು ಲಿಫ್ಟ್ ಕೇಳಿದ್ದಾರೆ. ಆಗ ಜಯವರ್ಧನ್ ಅವರು ನಿವ್ಯಾರು ಅಂತ ಕೇಳಿದಾಗ ಅದರಲ್ಲಿ ಒಬ್ಬ ಇವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

























