
ತಿರುವನಂತಪುರಂ,ಅ.೧೭-ಶಬರಿಮಲೆ ದೇವಸ್ಥಾನದ ಮುಂಭಾಗದ ದ್ವಾರಪಾಲಕರ ಪ್ರತಿಮೆಯಲ್ಲಿನ ಚಿನ್ನ ಕಾಣೆಯಾಗಿರುವ ಪ್ರಕರಣದ ಸಂಬಂಧ ತನಿಖೆ ಚುರುಕುಗೊಂಡಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯನ್ನು ಬಂಧಿಸಿದೆ. ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಅವರನ್ನು ಎಸ್ಐಟಿ ಅಧಿಕಾರಿಗಳು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಅಲ್ಲಿಂದ ತಿರುವನಂತಪುರದ ಅಪರಾಧ ಶಾಖೆಯ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆಯನ್ನು ನಡೆಸಿದ್ದಾರೆ.
ಉನ್ನಿಕೃಷ್ಣನ್ ಪೊಟ್ಟಿ ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ವಿಚಾರಣೆ ನಂತರ ಅವರನ್ನು ಇಂದು ಪತ್ತನಂತಿಟ್ಟದ ರನ್ನಿಯಲ್ಲಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ವೇಳೆ ಕೋರ್ಟ್ ಮುಂದೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಕೇಳುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಈ ಎಸ್ಐಟಿ ತಂಡದ ರಚನೆ ಮಾಡಲಾಗಿದೆ.
ದ್ವಾರಪಾಲಕರಿಗೆ ಚಿನ್ನದ ಲೇಪನ ಮಾಯ
೧೯೯೯ ರಲ್ಲಿ, ಟಿಡಿಬಿ ಪ್ರವೇಶದ್ವಾರದಲ್ಲಿ ದ್ವಾರಪಾಲಕರಿಗೆ ಚಿನ್ನದ ಲೇಪನವನ್ನು ಮಾಡಿಸಲಾಗಿತ್ತು. ಯುಬಿ ಗ್ರೂಪ್ ಅಧ್ಯಕ್ಷ ವಿಜಯ್ ಮಲ್ಯ ೩೦ ಕೆಜಿ ಚಿನ್ನವನ್ನು ನೀಡಿದರು. ದ್ವಾರಪಾಲಕ ವಿಗ್ರಹಗಳನ್ನು ಮಾತ್ರ ಮುಚ್ಚಲು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಬಳಸಲಾಯಿತು ಮತ್ತು ಉಳಿದದ್ದನ್ನು ದೇವಾಲಯದ ಇತರ ವೈಶಿಷ್ಟ್ಯಗಳನ್ನು ಲೇಪಿಸಲು ಬಳಸಲಾಯಿತು. ಇಪ್ಪತ್ತು ವರ್ಷಗಳ ನಂತರ, ದೇವಾಲಯದ ವಿಗ್ರಹಗಳು ಮತ್ತು ಬೆಲೆಬಾಳುವ ವಸ್ತುಗಳ ಚಿನ್ನದ ಲೇಪನವನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡಲು ಟಿಡಿಬಿಯ ಅನುಮೋದನೆಯನ್ನು ಪಡೆದಿದ್ದರು.
ಹಸ್ತಾಂತರ ದಾಖಲೆಯಲ್ಲಿ ೧೯೯೯ರಲ್ಲಿ ನೀಡಲಾದ ಚಿನ್ನದ ಹೊದಿಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.ವಿಗ್ರಹಗಳು ಚಿನ್ನದ ಲೇಪನಕ್ಕಾಗಿ ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ಸ್ಗೆ ಹೋಗಿದ್ದವು. ಚಿನ್ನದಿಂದ ಲೇಪಿತವಾದ ತಾಮ್ರದ ತಟ್ಟೆಗಳನ್ನು ದೇವಾಲಯಕ್ಕೆ ಮರಳಿ ತಂದಾಗ, ಬರೋಬ್ಬರಿ ೪.೫೪ ಕೆಜಿ ಲೇಪನ ಕಾಣೆಯಾಗಿತ್ತು.
ಕಳೆದ ೨೦೧೯ ರಲ್ಲಿ ದ್ವಾರಪಾಲಕ ವಿಗ್ರಹಗಳಿಂದ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳು ಮತ್ತು ಶ್ರೀಕೋವಿಲ್ ಬಾಗಿಲಿನ ಚೌಕಟ್ಟುಗಳನ್ನು ಎಲೆಕ್ಟ್ರೋಪ್ಲೇಟಿಂಗ್ಗಾಗಿ ಪಾಟಿಗೆ ಹಸ್ತಾಂತರಿಸುವಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸದಸ್ಯರು ಮತ್ತು ಅಧಿಕಾರಿಗಳ ಪಾತ್ರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸಬೇಕಿದೆ.
ಇನ್ನು ಇದಕ್ಕೂ ಮೊದಲು ಟಿಡಿಬಿ ವಿಜಿಲೆನ್ಸ್ ವಿಂಗ್ ಪಾಟಿ ಅವರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆಯನ್ನು ಕೂಡ ಪಡೆಯಲಾಗಿದೆ. ಇನ್ನು ಈ ಪ್ರಕರಣದ ತನಿಖೆಯನ್ನು ೬ ತಿಂಗಳ ಒಳಗೆ ಮುಗಿಸುವಂತೆ ಹೈಕೋರ್ಟ್ ಎಸ್ಐಟಿ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.