ನಾಡು-ನುಡಿಗೆ ಬೇಂದ್ರೆಯವರ ಕೊಡುಗೆ ಅಪಾರ

ಕಲಬುರಗಿ:ಜ.31: ಸಮ ಸಮಾಜದ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ ಕೂಡಿದ ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ ಡಾ.ದ.ರಾ.ಬೇಂದ್ರೆಯವರ ಸಾಹಿತ್ಯ, ಕೃತಿಗಳು ವಿಮರ್ಶಕರು ಹಾಗೂ ಸಹೃದಯರ ವಿಮರ್ಶಗೆ ಇಂದಿಗೂ ಕೂಡಾ ದಕ್ಕದಿರುವದು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿನ ಪ್ರಮುಖವಾದ ಸಾಹಿತಿಯಾಗಿದ್ದಾರೆ. ಮಾನವೀಯ ಮೌಲ್ಯ, ನೈಜತೆಗಳಿಂದ ಕೂಡಿದ ಸಾಹಿತ್ಯವನ್ನು ರಚಿಸಿ ಕನ್ನಡ ನಾಡು-ನುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವರಕವಿ ಡಾ.ದ.ರಾ.ಬೇಂದ್ರೆಯವರ 130ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಬೇಂದ್ರೆಯವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ, ಅವುಗಳನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ್ದರಿಂದ ಅವರ ಸಾಹಿತ್ಯವು ಹೆಚ್ಚು ನೈಜತೆ ಹಾಗೂ ಗಟ್ಟಿತನದಿಂದ ಕೂಡಿದೆ. ಅವರಂತೆ ಸಾಹಿತ್ಯಕವಾಗಿ ಮೇರು ಸಾಧನೆ ಮಾಡಬೇಕಾದರೆ, ಸಾಕಷ್ಟು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ‘ಜೀವನದಲ್ಲಿ ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯವಿದೆ’. ಬೇಂದ್ರೆಯವರ ಸಾಹಿತ್ಯದಲ್ಲಿ ದೇಶಿ ಸೊಗಡು ಹಾಸು ಹೊಕ್ಕಿದೆ. ಮರಾಠಿ ಮಾತೃಭಾಷೆಯಾದರು ಕೂಡಾ, ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದು ಸಾಮಾನ್ಯವಾದ ಸಂಗತಿಯಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಚಂಪಾಕಲಾ ನೆಲ್ಲೂರೆ, ಶರಣಮ್ಮ ಎ.ಬಂಗರಗಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.