ಬೇಲೆಕೇರಿ ಅದಿರು ನಾಪತ್ತೆ ಇಡಿಯಿಂದ ೧೨.೮೪ ಕೋಟಿಗೂ ಜಪ್ತಿ

ಬೆಂಗಳೂರು,ಅ.೧೮-ಬೇಲೆಕೇರಿ ಬಂದರು ಮೂಲಕ ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಅದಿರು ರಫ್ತು ಮಾಡಿದ್ದ ಕಂಪೆನಿಗಳ ಮೇಲೆ ದಾಳಿ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ ೧೨.೮೪ ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.


ಅಕ್ರಮವಾಗಿ ಅದಿರು ರಫ್ತು ಸಾಗಾಟ ಆರೋಪ ಸಂಬಂಧ ಅ.೧೬ರಂದು ಬೆಂಗಳೂರು, ಹೊಸಪೇಟೆ, ಗುರುಗ್ರಾಮ ಸೇರಿದಂತೆ ೨೦ ಕಡೆಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಶೋಧ ಕಾರ್ಯ ವೇಳೆ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ವಿವಿಧ ಮಹತ್ವದ ದಾಖಲಾತಿಗಳನ್ನು ಪತ್ತೆ ಹಚ್ಚಿತ್ತು.


ಲಾಭ ಪಡೆದ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ೧೨.೮೪ ಕೋಟಿ ರೂ. ಹಣವನ್ನು ಸೀಜ್ ಮಾಡಿದೆ. ಅಲ್ಲದೆ, ೪೨ ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ೫೦ ಟನ್ ಮೆಟ್ರಿಕ್ ಟನ್‌ಗಿಂತ ಅಕ್ರಮವಾಗಿ ಅದಿರು ಸಾಗಾಟ ಮಾಡಿರುವ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ಈಗಾಗಲೇ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಕಳ್ಳ ಮಾರ್ಗದ ಮೂಲಕ ಅದಿರು ರಫ್ತು ಜೊತೆಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಇ.ಡಿ ತಿಳಿಸಿದೆ.


೫೦ ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚು ಅದಿರು ರಫ್ತು ಮಾಡಿದ ಆರು ಕಂಪೆನಿಗಳು ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ವ್ಯಾಪಾರಿಗಳು, ಸಾಗಾಣೆದಾರರು ಹಾಗೂ ರಫ್ತು ಮಾಡಿದ ಕಂಪೆನಿಗಳು ಒಟ್ಟುಗೂಡಿ ವ್ಯವಸ್ಥಿತವಾಗಿ ರಾಜ್ಯ ಸರ್ಕಾರಕ್ಕೆ ತೆರಿಗೆ ಹಾಗೂ ರಾಯಧನ ಪಾವತಿಸದೆ ವಂಚಿಸಿವೆ.


ತಪ್ಪು ಲೆಕ್ಕ ತೋರಿಸಿ ಹೆಚ್ಚು ಪ್ರಮಾಣದಲ್ಲಿ ಕೋಟ್ಯಂತರ ಮೌಲ್ಯದ ಅದಿರು ಸಾಗಿಸಿ ಆರು ಕಂಪೆನಿಗಳು ಲಾಭಪಡೆದುಕೊಂಡಿವೆ. ಅಕ್ರಮವಾಗಿ ಅದಿರು ಅಗೆದು ಸಾಗಿಸಿ ಮಾರಾಟ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ಬಗ್ಗೆ ರಫ್ತು ಮಾಡಿರುವ ಬಗ್ಗೆ ಸರಿಯಾದ ದಾಖಲೆ ನೀಡುವಲ್ಲಿ ಕಂಪೆನಿಗಳು ವಿಫಲವಾಗಿವೆ ಎಂದು ಇ.ಡಿ ಹೇಳಿದೆ.


ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ಅದಿರು ಸಾಗಾಟ ಮಾಡಿದ್ದ ಎಂಎಸ್‌ಪಿಎಲ್ ಲಿಮಿಟೆಡ್ (ನರೇಂದ್ರ ಕುಮಾರ್), ಗ್ರೀನ್ ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್ (ಅಜಯ್ ಖರ್ವಾಂಡ), ಶ್ರೀನಿವಾಸ್ ಮಿನರಲ್ಸ್ ಟ್ರೇಡಿಂಗ್ (ವೈ.ಶ್ರೀನಿವಾಸ್ ರಾವ್ ), ಅರ್ಷದ್ ಎಕ್ಸ್‌ಪರ್ಟ್ (ಎಂ.ಡಿ.ಆಸ್ಗರ್ ಖಾನ್) ಎಸ್‌ವಿಎಂ ನೆಟ್ ಪ್ರಾಜೆಕ್ಟ್ ಸೆಲ್ಯೂಷನ್ಸ್ ಲಿ. (ಬಸವರಾಜ್ ಬಿ) ಹಾಗೂ ಅಲ್ಫೇನ್ಸ್ ಮಿನಿಮೆಟಲ್ಸ್ ಇಂಡಿಯಾ ಪ್ರೈವೇಟ್ ಲಿ. (ಗಗನ್ ಶುಕ್ಲಾ) ಕಂಪೆನಿಗಳು ಸರ್ಕಾರಕ್ಕೆ ತೆರಿಗೆ ಪಾವತಿಸದೆ ಅಕ್ರಮ ಹಣ ಸಂಪಾದಿಸಿದ ಕಂಪೆನಿಗಳಾಗಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.


ಬೇಲೆಕೇರಿ ಬಂದರಿನ ಮೂಲಕ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಸೇರಿದ ಕಂಪೆನಿ ಮೂಲಕ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಇಡಿ ಬಂಧಿಸಿತ್ತು.