
ಬೆಂಗಳೂರು,ಆ.೨೦; ನಗರ ಪೊಲೀಸರು ಮತ್ತು ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ಆ,೨೩ ರಂದು ನಗರದ ಶಂಕರ್ ನಾಗ್ ವೃತ್ತದ ಡೋಂಕಾಳ ಮೈದಾನದಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವಿವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಮಿದ್ ಬಾಷಾ ಅಧಿಕೃತ ಪೋಸ್ಟರ್ ಹಾಗೂ ಟಿ-ಶರ್ಟ್ ಬಿಡುಗಡೆ ಮಾಡಿ ಮಾತನಾಡಿ, ವಿಶೇಷವಾಗಿ ಯುವಜನತೆಯಲ್ಲಿ ಮಾದಕವಸ್ತು ದುರ್ಬಳಕೆಯ ಅಪಾಯಗಳು ಮತ್ತು ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಮಾದಕವಸ್ತುಗಳ ದಾಸರಾಗಿರುವ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಕುರಿತು ಜನಸಾಮಾನ್ಯರಲ್ಲಿ ಬಲವಾದ ಮತ್ತು ಏಕಮತದ ಸಂದೇಶ ಹರಡುವ ಉದ್ದೇಶ ಹೊಂದಲಾಗಿದೆ ಎಂದರು.
ಆರೋಗ್ಯಕರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣದತ್ತ ಬದ್ಧತೆಯನ್ನು ಉತ್ತೇಜಿಸುವತ್ತ ಗುರಿಯಿಟ್ಟಿದೆ. ಮಹತ್ತರವಾದ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ವಾಕಥಾನ್ ಗೆ ಉಪ ಪೊಲೀಸ್ ಆಯುಕ್ತ ಲೋಕೇಶ್ ಬಿ. ಜಗಲಸರ್, ಸಂಸದರಾದ ಡಾ. ಸಿ. ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ಶಾಸಕರಾದ ಎಲ್. ಎ. ರವಿ ಸುಬ್ರಮಣ್ಯ ಚಾಲನೆ ನೀಡಲಿದ್ದಾರೆ ಎಂದರು.
ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಬೆಂಗಳೂರು ಜಿಲ್ಲಾ ರಾಜ್ಯಪಾಲರಾದ ಸತ್ಯವತಿ ಬಸವರಾಜ್, ಅಲಯನ್ಸ್ ಕ್ಲಬ್ ಆಫ್ ಬೆಂಗಳೂರು ಕಿಂಗ್ಸ್ ಅಧ್ಯಕ್ಷ ವಿಜಯೇಂದ್ರ, ಕಾರ್ಯದರ್ಶಿ ಧೀರಜ್, ಖಜಾಂಚಿ ನಿಶಾಂತ್ ಹಾಗೂ ವೃದ್ಧಿ ವೆಂಚರ್ಸ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಗೌಡ ನೇತೃತ್ವದಲ್ಲಿ ಅಭಿಯಾನ ನಡೆಯಲಿದೆ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಸೂರ್ಯಪ್ರಸಾದ್ ಎಸ್, ಪೊಲೀಸ್ ಠಾಣೆಯ ಸತೀಶ್ ಕುಮಾರ್, ಗಿರೀಶ್ ನಾಯಕ್, ವಿನಯ್ ಎಚ್.ಎನ್,ಜಿ. ಉದಯ್ ರವಿ, ಧರ್ಮೇಂದ್ರ ಟಿ.ಎಂ, ಲಿಂಗಣ್ಣ ಗೌಡ ಪಾಟೀಲ್ ಉಪಸ್ಥಿತರಿದ್ದರು.