ವಿಜಯಪುರ,ಜೂ.27: ಕೃಷಿಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಯಾಗುತ್ತಿರುವದರಿಂದ ಬಹಳಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಕೃಷಿ ಪದವೀಧರರು ಡ್ರೋನ್ ತರಬೇತಿ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಗರÀ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಆಶ್ರಯದಲ್ಲಿ ಕೃಷಿ ಪದವೀಧರಿಗಾಗಿ ಗುರುವಾರ ಹಮ್ಮಿಕೊಂಡ ‘ಹ್ಯಾಂಡ್ಸ್ ಆನ್ ಸಿಮ್ಯುಲೇಟರ್ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದೆಂದಿಗಿಂತಲೂ ಇಂದು ಕೃಷಿಯಲ್ಲಿ ಅನೇಕ ಅನ್ವೇಷಣೆಗಳಾಗಿವೆ, ಆಗುತ್ತಿವೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಸುಧಾರಿತ ತಾಂತ್ರಿಕತೆಗಳ ಅಳವಡಿಕೆ ಅವಶ್ಯಕವಾಗಿದೆ. ಈ ಹಿನ್ನೇಲೆಯಲ್ಲಿ ಕೃಷಿ ಪದವೀಧರರು ತರಬೇತಿ ಪಡೆದುಕೊಂಡು ರೈತರಿಗೆ ಮಾರ್ಗದರ್ಶನ ನೀಡಿ, ಅವರನ್ನು ಅರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಡೀನ್ ಡಾ. ಅಶೋಕ ಎಸ್. ಸಜ್ಜನ ಮಾತನಾಡಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಒಂದು ತರಬೇತಿಯನ್ನು ನೀಡಲು ವಿಶ್ವವಿದ್ಯಾಲಯ ಅನುಮತಿ ನೀಡಿದ್ದು, ಅದರಂತೆ ವಿದ್ಯಾರ್ಥಿಗಳಿಗೆ ತಮ್ಮ ತರಗತಿಗಳಿಗೆ ತೊದರೆಯಾಗದಂತೆ ತರಬೇತಿ ಹಮ್ಮಿಕೊಂಡು, ಮುಂದೆ ಹೆಚ್ಚಿನ ತರಬೇತಿಗಾಗಿ ಬೆಂಗಳೂರಿಗೆ ವಿದ್ಯಾರ್ಥಿಗಳನ್ನು ಕಳಿಸಿ, ಅವರನ್ನು ಯಶಸ್ವಿ ತರಬೇತಿದಾರರನ್ನಾಗಿ ರೂಪಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಕೇಶವ ಮಾತನಾಡಿ, ವಿದ್ಯಾರ್ಥಿಗಳಿಗೆ ಎರಡು ದಿನಗಳ ಹ್ಯಾಂಡ್ ಆನ್ ಸಿಮುಲೇಟರ್ ತರಬೇತಿ, ಬೆಂಗಳೂರಿನಲ್ಲಿ 3 ದಿನಗಳ ಪ್ರಾಯೋಗಿಕ ಹಾರಾಟ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಮಲ್ಟಿಸ್ಪೇಕ್ಟ್ರಲ್ ಇಮೇಜಿಂಗ್, ಪೇಲೋಡ್ ಆಯ್ಕೆ ಇತ್ಯಾದಿಗಳ ಸುಧಾರಿತ ವಿಷಯಗಳನ್ನು ಒಳಗೊಂಡಿರುತ್ತದೆ ಎಂದರು. ಪ್ರಾಧ್ಯಾಪಕ ಡಾ. ಮಹಾಂತೇಶ ತೆಗ್ಗಿ, ಡಾ. ರಮೇಶ ಬೀರಗೆ, ಡಾ. ಸುದೀಪಕುಮಾರ ಹಾಗೂ ಕೃಷಿ ಪದವೀಧರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.