ನಮ್ಮ ಸಮುದಾಯದ ಪ್ರತಿಭೆಗಳು ಸಮಾಜದ ಆಸ್ತಿಗಳಾಗಿ ಅರಳಬೇಕು

ಕೋಲಾರ ಸೆ ೨೯: ನಮ್ಮ ಸಮುದಾಯದ ಪ್ರತಿಭೆಗಳು ಸಮಾಜದ ಆಸ್ತಿಗಳಾಗಿ ಅರಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಕರೆ ನೀಡಿದರು.


ಕರ್ನಾಟಕ ರಾಜ್ಯ ಕನಕನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಕುಲಕ್ಕೆ, ಸಮುದಾಯಕ್ಕೆ ಒಂದು ಶ್ರಮಿಕ ಪರಂಪರೆ ಇದೆ. ಈ ಪರಂಪರೆಯ ಒಳಗೆ ಅದ್ಭುತವಾದ ಮಾದರಿ ವ್ಯಕ್ತಿತ್ವಗಳೂ ಇವೆ. ಛಲ ಮತ್ತು ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಮಾದರಿ ಆದರೆ, ವಿಶ್ವಪ್ರಜ್ಞೆಗೆ ಕನಕದಾಸರು ಮಾದರಿ ಆಗಿದ್ದಾರೆ.


ಶಿಕ್ಷಣಕ್ಕೆ ಅಹಲ್ಯಾಬಾಯಿ ಹೋಳ್ಕರ್ ಮಾದರಿಯಾದರೆ ಸಾಮಾಜಿಕ ಬದ್ಧತೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದರಿಯಾಗಿದ್ದಾರೆ.
ಈ ಎಲ್ಲಾ ಹಿರಿಯ ಮಾದರಿಗಳು ಸಮಾಜದ ಆಸ್ತಿ ಆಗಿರುವುದು ನಮಗೆಲ್ಲಾ ಹೆಮ್ಮೆ ತರುವ ಜೊತೆಗೆ ಪ್ರೇರಣೆ ಕೂಡ ಆಗಲಿ ಎಂದು ಕರೆ ನೀಡಿದರು.
ಪ್ರತಿಭೆ ಎನ್ನುವುದು ಒಟ್ಟು ಸಮಾಜದ ಕೊಡುಗೆ. ಹೀಗಾಗಿ ಪ್ರತಿಭಾವಂತರು ಸಮಾಜದ ಆಸ್ತಿ ಆಗಬೇಕು ಎನ್ನುವುದು ನನ್ನ ಭಾವನೆ. ಪ್ರತಿಭೆ ಪ್ರತಿಯೊಬ್ಬರ ಒಳಗೂ ಇರುತ್ತದೆ.


ಈ ಪ್ರತಿಭೆ ಹೊರಗೆ ಬರುವುದಕ್ಕೆ ಅವಕಾಶ ಮುಖ್ಯ. ನಮ್ಮ ಸಮುದಾಯದ ಹಿರಿಯರು ನಡೆಸಿದ ಹೋರಾಟ, ಮಾಡಿದ ಸಂಘಟನೆ ಕಾರಣಕ್ಕೆ ನಮಗೆ ನಿಮಗೆ ಇಂದು ಅವಕಾಶಗಳು ಸೃಷ್ಟಿಯಾಗಿವೆ. ಆದರೆ ಅವಕಾಶ ವಂಚಿತರು ಇನ್ನೂ ಬಹಳ ಮಂದಿ ಇದ್ದಾರೆ. ಈ ಅವಕಾಶ ವಂಚಿತರ ರಾಯಬಾರಿಗಳಾಗಿ ನೀವು ಬೆಳೆಯಬೇಕು ಎಂದು ಕರೆ ನೀಡಿದರು.


ಅಂಕಪಟ್ಟಿಯ ಅಂಕಗಳಷ್ಟೇ, ನೈತಿಕತೆಯ ಮೌಲ್ಯಗಳೂ ಬಹು ಮುಖ್ಯ. ಈಗ ಡಿಜಿಟಲ್ ತಂತ್ರಜ್ಞಾನದ ಜೊತೆ ಸಂಬಂಧ ಬೆಳೆಸಿಕೊಂಡು ಪೋಷಕರ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಆಸ್ಪತ್ರೆಗಳು ಹೆಚ್ಚಾಗುವುದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ. ಶಾಲೆಗಳು, ಆಟದ ಮೈದಾನಗಳು ಆರೋಗ್ಯವಂತ ಸಮಾಜದ ಲಕ್ಷಣ ಎಂದರು.


ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿಗಳು ದಿವ್ಯ ಸಾನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಕೊಪ್ಪಳ ವಿವಿಯ ಉಪ ಕುಲಪತಿಗಳಾದ ಬಿ.ಕೆ.ರವಿ, iಟಿsighಣ ಅಕಾಡೆಮಿಯ ವಿನಯ್ ಕುಮಾರ್, ಮಾಜಿ ಸಚಿವರಾದ ಆರ್.ವರ್ತೂರು ಪ್ರಕಾಶ್ ಸೇರಿ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.