ಬೀದರ: ಜೂ.27: ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಣೆ ಮಾಡುವುದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದು ‘ಕಾಲವೇ ಮೋಸಗಾರ’ ಚಿತ್ರದ ನಾಯಕನಟ ಭರತ ಸಾಗರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಚಿತ್ರದಲ್ಲಿ ಪ್ರೀತಿ-ಪ್ರೇಮ, ಹಾಸ್ಯ, ಸಾಮಾಜಿಕ ಕಳಕಳಿ, ಕೌಟುಂಬಿಕ ವಿಚಾರಗಳು ಮತ್ತು ವಿವಿಧ ವಿಷಯಗಳು ಅಡಕಗೊಂಡಿವೆ. ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್ ಸೇರಿದಂತೆ ಹಲವು ದಿಗ್ಗಜರು ಇದರಲ್ಲಿ ನಟಿಸಿದ್ದಾರೆ. ನಟಿ ಯಶಸ್ವಿನಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದು, ಉತ್ತಮ ಹಾಡುಗಳು ಇದರಲ್ಲಿವೆ. ಈ ಚಿತ್ರವು 2 ಗಂಟೆ 15 ನಿಮಿಷದ್ದಾಗಿದ್ದು, ಇದರ ಒಟ್ಟು ಖರ್ಚು 1 ಕೋಟಿ 80 ಲಕ್ಷ ಖರ್ಚಾಗಿದೆ. ಸಂಜೀತ್ ಹೆಗಡೆ ಹಿನ್ನೆಲೆ ಗಾಯಕರಾಗಿದ್ದಾರೆ. ಚಿತ್ರ ವೀಕ್ಷಿಸಿ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಕೋರಿದ್ದಾರೆ.
ಮುಖಂಡರಾದ ನಾಗಯ್ಯ ಸ್ವಾಮಿ ಮಾತನಾಡಿ ಹಳೆಯ ನಟರ ಚಲನಚಿತ್ರ ಎಲ್ಲರೂ ನೋಡುತ್ತಾರೆ. ಆದರೆ ಹೊಸ ಕಲಾವಿದರ ಚಿತ್ರ ನೋಡಿ ಪ್ರೋತ್ಸಾಹಿಸುವ ಅಗತ್ಯವಿದೆ. ಭರತ ಸಾಗರ್ ಅವರು ನಾಯಕನಟರಾಗಿ ‘ಕಾಲವೇ ಮೋಸಗಾರ’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಇವರ ಮೂರನೇ ಚಿತ್ರವಾಗಿದ್ದು, ಬೀದರನ ಸಪ್ನಾ ಥೇಟರ್ನಲ್ಲಿ ಗುರುವಾರ ಬಿಡುಗಡೆ ಕಂಡಿದೆ. ಜಿಲ್ಲೆಯ ಜನರು ಹೆಚ್ಚು ವೀಕ್ಷಣೆ ಮಾಡಲು ತಿಳಿಸಿದರು.
ಕನ್ನಡ ಸೇನೆ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನಿರ್ಣಾ ಮಾತನಾಡಿ ಎಲ್ಲಾ ಚಲನಚಿತ್ರಗಳನ್ನು ಬೆಂಗಳೂರಿನಿಂದ ಬಿಡುಗಡೆ ಮಾಡಿದರೆ, ಈ ಚಿತ್ರ ಬೀದರ ಜಿಲ್ಲೆಯಿಂದ ಬಿಡುಗಡೆ ಮಾಡಿಸುತ್ತಿರುವುದು ಖುಷಿ ತಂದಿದೆ. ಚಿತ್ರವು ನೂರು ದಿನ ಓಡಲಿ ಎಂದು ಶುಭ ಹಾರೈಸಿದರು. ಮುಂದಿನ ದಿನಗಳಲ್ಲಿ ಭರತ ಸಾಗರ ಅವರು ಬೀದರನ ಐತಿಹಾಸಿಕ ಸ್ಥಳಗಳಲ್ಲಿ ಶೂಟಿಂಗ್ ಮಾಡಬೇಕೆಂದು ಹೇಳಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆ ಕರ್ನಾಟಕದ ಜಿಲ್ಲಾಧ್ಯಕ್ಷ ಸುಭಾಷ ಕೆನಡೆ, ಪ್ರಮುಖರಾದ ಶ್ರೀಮಂತ ಸಪಾಟೆ, ರಾಜಕುಮಾರ, ಉಮಾಕಾಂತ ಮೀಸೆ, ಶ್ರೀಕಾಂತ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.