ಬಾಗಲಕೋಟೆ,ಜೂ27 : ಜಿಲ್ಲೆಯಲ್ಲಿ ಅಲ್ಲಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿ ಹುಳುವಿನ (ಕಂಬಳಿ ಹುಳ) ಬಾಧೆ ಕಂಡುಬಂದಿದ್ದು, ಲದ್ದಿ ಹುಳು ನಿರ್ವಹಣೆಗೆ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಲಕ್ಷ್ಮಣ ಕಳ್ಳೇನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿತ್ತಿದ 15 ದಿವಸಗಳ ನಂತರ ಹೊಲದಲ್ಲಿ ಎಕರೆಗೆ 12 ರಂತೆ ಮೋಹಕ ಬಲೆಗಳನ್ನು ಹಾಕಿ ಒಂದು ಬಲೆಯಲ್ಲಿ 4 ಕ್ಕಿಂತ ಹೆಚ್ಚು ಗಂಡು ಪತಂಗಗಳು ಬಿದ್ದಲ್ಲಿ ಸಿಂಪರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲನೆ ಸಿಂಪರಣೆಯಾಗಿ ಬೇವಿನ ಕಷಾಯ (ಪ್ರತಿ ಲೀಟರ್ ನೀರಿಗೆ, 5 ಮಿಲಿ ಲೀಟರ) ಸಿಂಪರಣೆ ಮಾಡುವುದರಿಂದ ಪತಂಗವು ಮೊಟ್ಟೆ ಇಡುವ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ.
ಹೆಣ್ಣು ಪತಂಗವು ಎಲೆಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ತತ್ತಿಯನ್ನಿಟ್ಟು ಅದನ್ನು ಹತ್ತಿಯಾಕಾರದ ವಸ್ತುವಿನಿಂದ ಮುಚ್ಚಿರುತ್ತದೆ. ಇಂಥಹ ಎಲೆಗಳನ್ನು ಆರಿಸಿ ಕಿತ್ತು ತೆಗೆದು ಹಾಕುವುದರಿಂದ ಸಾವಿರಾರು ಮರಿಗಳನ್ನು ನಾಶಪಡಿಸಿದಂತಾಗುತ್ತದೆ. ಮರಿಹುಳುಗಳು ಒಂದು ಅಥವಾ ಎರಡನೇ ಹಂತದಲ್ಲಿ ಇರುವಾಗ ಕ್ಲೋರ್ಯಾಂಟ್ರಿನಿಲಿಪ್ರೋಲ್ ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 0.2-0.3 ಗ್ರಾಂ ಅಥವಾ ಸ್ಪೈನೋಟೋರಾಮ್ 0.2 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗಿದ್ದು, ಜನೇವರಿ ಮಾಹೆಯಿಂದ ಇಲ್ಲಿಯವರೆಗೆ 106.9 ಮಿಮಿ ಸಾಮಾನ್ಯ ಮಳೆಗೆ 235.7 ಮಿಮಿ ಮಳೆಯಾಗಿರುತ್ತದೆ, ಅಂದರೆ ಸಾಮಾನ್ಯಕಿಂತ ಶೇ 120.5% ಹೆಚ್ಚಿಗೆ ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿಗೆ 310599 ಹೆಕ್ಟೇರ್ ಬಿತ್ತನೆ ಕ್ಷೇತ್ರ ಗುರಿಹೊಂದಿದ್ದು, ಅದರಲ್ಲಿ ಇಲ್ಲಿಯವರೆಗೆ 170853 ಹೆಕ್ಟೇರ್ ಪ್ರದೇಶದಲ್ಲಿ (ಶೇ 55.01%) ಬಿತ್ತನೆ/ನಾಟಿ ಆಗಿರುತ್ತದೆ, ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.