ಕಾಮಗಾರಿ ಗುಣಮಟ್ಟ ಕಾಪಾಡಿ: ಶಾಸಕ ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.27:
ಗುಣಮಟ್ಟದ ಕಾಮಗಾರಿಗಳು ನಡೆದರೆ ಮಾತ್ರ ಸರ್ಕಾರದ ಹಣ ಸದ್ಬಳಕೆಯಾಗಲು ಸಾಧ್ಯ. ಗ್ರಾಮ ಪಂಚಾಯತಿ ಸದಸ್ಯರುಗಳು ಮತ್ತು ಆಯಾ ಭಾಗದ ಜನ ತಮ್ಮ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಮೇಲೆ ನಿಗಾವಹಿಸಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕೆಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ತಾಲೂಕಿನ ಸಾರಂಗಿ ಗ್ರಾಮದಲ್ಲಿ 20 ಲಕ್ಷ ರೂಪಾಯಿಗಳ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ರಸ್ತೆ ಮತ್ತು ಚರಂಡಿ ವ್ಯವಸ್ಥೆಯ ಅಭಿವೃದ್ದಿಗೆ 10 ಕೋಟಿ ರೂ ಅನುದಾನ ನೀಡಿದೆ. ಅದರಲ್ಲಿ ಸಾರಂಗಿ ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ದಿಗೆ 20 ಲಕ್ಷರೂ ನೀಡಿದ್ದೇನೆ. ಲ್ಯಾಂಡ್ ಆರ್ಮಿ ವತಿಯಿಂದ ಕಾಮಗಾರಿ ನಡೆಯಲಿದೆ. ಅನುದಾನ ನೀಡಿದ ಮಾತ್ರಕ್ಕೆ ಅಭಿವೃದ್ದಿಯಾಗುವುದಿಲ್ಲ. ನಾನು ನೀಡಿದ ಅನುದಾನ ಸದ್ಬಳಕೆಯಾಗಿ ಗುಣಮಟ್ಟದ ಕಾಮಗಾರಿ ನಡೆದರೆ ಮಾತ್ರ ನೈಜ ಅಭಿವೃದ್ದಿಯಾಗಲಿದೆ. ಗುಣಮಟ್ಟದ ಕಾಮಗಾರಿಯ ಮೇಲೆ ಜನತೆ ನಿಗಾ ವಹಿಸಬೇಕು. ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.


ರಾಜ್ಯಕ್ಕೆ 12-13 ಪಶು ಚಿಕಿತ್ಸಾ ಆಸ್ಪತ್ರೆಗಳು ಮಂಜೂರಾಗಿದ್ದು ಇದರಲ್ಲಿ ನನ್ನ ಕ್ಷೇತ್ರಕ್ಕೂ ಒಂದು ಪಶು ಆಸ್ಪತ್ರೆ ದೊರಕಿದೆ. ಇದನ್ನು ನಾನು ಸಾರಂಗಿ ಗ್ರಾಮದಲ್ಲಿ ನಿರ್ಮಿಸಲು ಸೂಚಿಸಿದ್ದೇನೆ.ಗ್ರಾಮದಲ್ಲಿ ಸೂಕ್ತ ಜಾಗ ನೀಡಿದರೆ ಮುಂದಿನ ದಿನಗಳಲ್ಲಿ ಪಶು ಚಿಕಿತ್ಸಾ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಲಿದೆ. ನಾನು ಶಾಸಕನಾದ ಅನಂತರ ಹಾಳಾಗಿದ್ದ ಸಾರಂಗಿ ಬ್ರಿಡ್ಜ್ ಮಾಡಿಸಿದ್ದೇನೆ. ಸಾರಂಗಿ ಜನ ನನಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಇವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಕ್ಷೇತ್ರದ ಅಭಿವೃದ್ದಿಗೆ ಅಗತ್ಯ ಅನುದಾನ ನೀಡುವಂತೆ ನಾನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ದಿಗೆ ಬದ್ದನಾಗಿದ್ದೇನೆಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.


ಗ್ರಾ.ಪಂ ಅಧ್ಯಕ್ಷೆ ಹೇಮಾವತಿ ಉಪಾಧ್ಯಕ್ಷ ರಾಜು, ಸದಸ್ಯರಾದ ರಮೇಶ್, ನಂಜಪ್ಪ, ಮಂಜುನಾಥ್, ಮಹದೇವಮ್ಮ, ಸುಲೋಚನಾ, ಕಿಟ್ಟಿ, ಗೌಡ ಆನಂದ್, ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗೇಶ್, ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಕೊರಟೀಕೆರೆ ದಿನೇಶ್,ಅಜಯ್ ರಾಮೇಗೌಡ, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಸೇರಿದಂತೆ ಹಲವರಿದ್ದರು.