ಮಣಿಪಾಲ್ ಅಕಾಡೆಮಿ ಹೈಯರ್ ಎಜುಕಷನ್ (ಮಾಹೆ), ಮುಂಬೈಯ ಕಮಲ್ ಎ. ಬಾಳಿಗಾ ಚಾರೀಟೇಬಲ್ ಟ್ರಸ್ಟ್, ಉಡುಪಿಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ಗುರುವಾರ ವಿಶ್ವ ಮಾದಕ ದ್ರವ್ಯ ವ್ಯಸನ ವಿರೋಧಿ ದಿನವನ್ನು ಕಸ್ತೂರ್ಬಾ ಮಣಿಪಾಲ ಆಸ್ಪತ್ರೆಯಲ್ಲಿ ಆಚರಿಸಲಾಯಿತು.ಮಾಹೆಯ ಉಪಕುಲಾಧಿಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ, ವ್ಯಸನಗಳು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ದೊಡ್ಡ ಅಂದೋಲನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ದುಶ್ಚಟಗಳಿಗೆ ಒಮ್ಮೆ ಬಿದ್ದರೆ ಬದುಕಿನಲ್ಲಿ ಎದ್ದು ಬರಲು ಕಷ್ಟ ಸಾಧ್ಯ. ಆದ್ದರಿಂದ ಈ ವ್ಯಸನಗಳಿಂದ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿ ಉಡುಪಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್, ಯುವಜನತೆ ದೇಶದ ಆಸ್ತಿ. ಈ ಆಸ್ತಿ ವ್ಯಸನಗಳಿಂದ ನಾಶವಾಗದಂತೆ ನೋಡಿಕೊಳ್ಳುವುದು ನಮ್ಮಲ್ಲರ ಜವಾಬ್ದಾರಿ ಎಂದರು.ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಡಾ. ಗೀತಾ ಮಯ್ಯ ಸ್ವಾಗತಿಸಿದರು. ಉಪನಿರ್ದೇಶಕ ಡಾ. ಅರವಿಂದ್ ಕುಮಾರ್ ಪಾಂಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ರಶ್ಮಿ ಯೋಗೇಶ್ ಪೈ ವಂದಿಸಿದರು. ಕೆಎಂಸಿಯ ಸಹಾಯಕ ಪ್ರಾಧ್ಯಾಪಕಿ ಡಾ.ರೀನಾ ಪರ್ವಿನ್ ಕಾರ್ಯಕ್ರಮ ನಿರೂಪಿದರು.
ಈ ಕಾರ್ಯಾಗಾರದಲ್ಲಿ ಉಡುಪಿಯ ಪ್ರತಿ ಪ.ಪೂ. ಕಾಲೇಜಿನ ಎನ್ಎಸ್ಎಸ್, ಎನ್ಸಿಸಿ, ಸೌಟ್ಸ್ ಆ?ಯಂಡ್ ಗೈಡ್ಸ್ನಲ್ಲಿ ಸಕ್ರಿಯವಾಗಿರುವ ಇಬ್ಬರು ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ೩೭೩ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದರು.