ಗ್ರಾಮ ಪಂಚಾಯತಿ ಲೆಕ್ಕಪರಿಶೋಧನಾ ಅಭಿಯಾನ ಪ್ರಾರಂಭ:ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ:ಜೂ.26:2014-15ನೇ ಸಾಲಿನ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯ ಆಡಿಟ್ ಕಂಡಿಕೆಗಳ ಕುರಿತು ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯು ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿವೆ.

ಈ ಹಿನ್ನೆಲೆಯಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗೆ ನಿಯಮಾನುಸಾರ ಕ್ರಮ ಜರುಗಿಸಲು ಗ್ರಾಮ ಪಂಚಾಯಿತಿಗಳ ಲೆಕ್ಕ ಪರಿಶೋಧನಾ ಅಭಿಯಾನವನ್ನು ಜೂನ್ 10ರಿಂದ 100 ದಿನಗಳ ಕಾಲ ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಿಧಾನ ಸಭೆ ಹಾಗೂ ಪರಿಷತ್‍ಗೆ ಸಂಬಂಧಿಸಿದ ಸಭೆಗಳಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಬಾಕಿ ಇರುವ ಲೆಕ್ಕ ಪರಿಶೋಧನೆ ಕಂಡಿಕೆಗಳು ತೀರುವಳಿಯಾಗದಿರುವ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ.

ಉಲ್ಲೇಖಿತ ರಾಜ್ಯ ಲೆಕ್ಕಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯಲ್ಲಿ, ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಆರ್ಥಿಕ ವರ್ಷ 2022-23 ರ ಅಂತ್ಯಕ್ಕೆ ?1505.86 ಕೋಟಿ ಮೊತ್ತದ 56,551 ಕಂಡಿಕೆಗಳು ತೀರುವಳಿಯಾಗಬೇಕಿರುವ ಕಾರಣದಿಂದಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಅಭಿಯಾನದಡಿ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಆರ್ಥಿಕ ವರ್ಷ 2023-24ರ ಅಂತ್ಯದವರೆಗೆ ಬಾಕಿ ಇರುವ ಲೆಕ್ಕ ಪರಿಶೋಧನಾ ಕಂಡಿಕೆಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸಲು, ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಡ್ ಹಾಕ್ ಸಮಿತಿಯ ಸಭೆಗಳನ್ನು ತಿಂಗಳಿಗೆ ಕನಿಷ್ಠ ಎರಡು ಬಾರಿ ಹಾಗೂ ಅವಶ್ಯಕತೆ ಇದ್ದಲ್ಲಿ ವಾರಕ್ಕೊಮ್ಮೆ ನಡೆಸಲು ಸಲಹೆ ನೀಡಲಾಗಿದೆ. ಸಭೆಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಂಡಿಕೆವಾರು ವಿಷಯಗಳನ್ನು ತೆಗೆದುಕೊಂಡು ನಿಯಮಾನುಸಾರ ಇತ್ಯರ್ಥಗೊಳಿಸಬೇಕು. ಗ್ರಾಮ ಪಂಚಾಯತಿಗಳು ಸಮರ್ಪಕ ಉತ್ತರವನ್ನು ದಾಖಲಾತಿಗಳೊಂದಿಗೆ ಸಲ್ಲಿಸದೆ ಇದ್ದಲ್ಲಿ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆಗಳ ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗಾಗಿ ಕೈಗೊಂಡ ಕ್ರಮದ ವಿವರಗಳನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಗಳು 100 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ಅಭಿಯಾನ ನಿರ್ವಹಿಸಲು ತಪ್ಪಿದಲ್ಲಿ ಹಾಗೂ ವಸೂಲಾತಿಗೆ ಬಾಕಿ ಇರುವ ಪ್ರಕರಣಗಳ ತೀರುವಳಿಗೊಳಿಸಿದ ಶೇಕಡವಾರು ಅಂಕಿ ಅಂಶಗಳನ್ನು ಪರಿಶೀಲಿಸಿ ಪ್ರಗತಿ ಸಾಧಿಸದ ಜಿಲ್ಲೆಗೆ ಆಯಾ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಅಭಿಯಾನದಲ್ಲಿ ತೀರುವಳಿಗೂಳ್ಳುವ ಕಂಡಿಕೆಗಳ ವಿವರಗಳನ್ನು ಪ್ರತಿ ತಿಂಗಳು ವಿಮರ್ಶೆಗೆ ಒಳಪಡಿಸಲಾಗುವುದು. ಅಭಿಯಾನವು 16ನೇ ಜೂನ್ 2025ರಿಂದ ಜಾರಿಗೆ ಬಂದಿದ್ದು, 23ನೇ ಸೆಪ್ಟೆಂಬರ್ 2025 ರವರೆಗೆ ನಡೆಯಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.