ವಿರೋಧ ಪಕ್ಷದ ಶಾಸಕರಿಗೂ ಅನುದಾನ ನೀಡಿ: ಶಾಸಕ ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.25:
ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಶಾಸಕರಿಗೆ ನೀಡುವಷ್ಟೇ ಅನುದಾನವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೂ ನೀಡುವಂತೆ ಶಾಸಕ ಹೆಚ್.ಟಿ.ಮಂಜು ಆಗ್ರಹಿಸಿದರು.


ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಸರ್ಕಾರದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


2021-22 ನೇ ಸಾಲಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಬಾರೀ ಮಳೆಗೆ ತಾಲೂಕಿನ 9-10 ಕೆರೆಗಳು ಒಡೆದು ಹೋಗಿವೆ. 35 ರಿಂದ 40 ಕಟ್ಟೆಗಳು ಹಾನಿಗೀಡಾಗಿವೆ. ತಾಲೂಕಿನ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಕೆರಯನ್ನು ಹೊರತುಪಡಿಸಿದರೆ ಉಳಿದ ಯಾವುದೇ ಕೆರೆಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಇದುವರೆಗೂ ಒಂದೇ ಒಂದು ನಯಾಪೈಸೆ ಅನುದಾನ ನೀಡಿಲ್ಲ. ಒಡೆದು ಹೋಗಿರುವ ಕೆರೆ ಕಟ್ಟೆಗಳ ದುರಸ್ಥಿಗೆ ಅನುದಾನ ನೀಡುವಂತೆ ಸರ್ಕಾರದ ಗಮನ ಸೆಳೆದರೂ ಸರ್ಕಾರ ಸ್ಪಂಧಿಸುತ್ತಿಲ್ಲ. ಒಂದು ಕೆರೆ ಕಟ್ಟಬೇಕಾದರೆ ನೂರಾರು ಕೋಟಿ ಹಣ ಬೇಕು. ನಮ್ಮ ಹಿರಿಯರು ಕಟ್ಟಿದ ಕೆರೆಗಳನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ವಹಿಸಿ ಕೆರೆಗಳ ದುರಸ್ತಿಗೆ ಅಗತ್ಯ ಅನುದಾನ ಕೊಡಿಸಿ ರೈತರ ಹಿತ ಕಾಯುವಂತೆ ಸಾಸಕ ಹೆಚ್.ಟಿ.ಮಂಜು ಒತ್ತಾಯಿಸಿದರು.


ಸಚಿವ ಚಲುವರಾಯಸ್ವಾಮಿ ಸೇರಿದಂತೆ ನಾವೆಲ್ಲರೂ ಹೇಮಾವತಿ ಜಲಾನಯನ ಪ್ರದೇಶದ ಜನಪ್ರತಿನಿಧಿಗಳು. ಸದ್ಯದ ಪರಿಸ್ಥಿಯಲ್ಲಿ ಹೇಮಾವತಿ ನೀರು ಜಿಲ್ಲೆಯ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ಹರಿಯುತ್ತಿಲ್ಲ. ಈ ನಡುವೆ ರಾಜ್ಯ ಸರ್ಕಾರ ಹೇಮೆಯ ನೀರನ್ನು ಮಾಗಡಿ-ರಾಮನಗರಕ್ಕೆ ಕೊಂಡೊಯ್ಯವ ಯೋಜನೆ ರೂಪಿಸಿ ಜಾರಿಗೆ ಮುಂದಾಗಿದೆ. ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ನನ್ನ ವಿರೋಧವಿಲ್ಲ. ಆದರೆ ನಮ್ಮ ಭಾಗದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನಮ್ಮ ರೈತರಿಗೆ ಸಮರ್ಪಕ ನೀರು ಕೊಡದೆ ಹೇಮೆಯ ನೀರನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗಲು ನನ್ನ ಆಕ್ಷೇಪವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಹಿತದ ಬಗ್ಗೆ ಚಿಂತಿಸಿ ಸರ್ಕಾರದ ನೂತನ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚಿಂತಿಸುವಂತೆ ಶಾಸಕ ಹೆಚ್.ಟಿ.ಮಂಜು ಸಭೆಯಲ್ಲಿ ಆಗ್ರಹಿಸಿದರು.


ಸಣ್ಣಪುಟ್ಟ ಮಳೆ ಬಂದರೆ ಸಾಕು ಪಟ್ಟಣದ ಬಸ್ ನಿಲ್ದಾಣ ಕೆರೆಯಾಗಿ ಪರಿವರ್ತನೆಯಾಗುತ್ತಿದೆ. ಪಟ್ಟಣದ ಬಸ್ ನಿಲ್ದಾಣದ ಅಭಿವೃದ್ದಿಗೆ 16 ಕೋಟಿ ರೂ ಹಣದ ಅಗತ್ಯವಿದೆ. ತಾಲೂಕಿನ ಪಶು ಸಂಗೋಪನಾ ಇಲಾಖೆಗೆ ಮಂಜೂರಾಗಿದ್ದ ಪಾಲಿಹೌಸ್ ನಿರ್ಮಾಣ ಜಿಲ್ಲೆಯ ಮಳವಳ್ಳಿಗೆ ಸ್ಥಳಾಂತರಗೊಂಡಿದೆ. ಜಾಗದ ಸಮಸ್ಯೆಯಿಂದ ಮಳವಳ್ಳಿಯಲ್ಲಿ ಇದುವರೆಗೂ ಪಾಲಿಹೌಸ್ ನಿರ್ಮಾಣ ಆಗಿಲ್ಲ. ಇದನ್ನು ನಮ್ಮ ತಾಲೂಕಿಗೆ ಕೊಡಿಸುವ ಪ್ರಯತ್ನ ಮಾಡುವಂತೆ ಸಚಿವರಿಗೆ ಮನವಿ ಮಾಡಿದ ಶಾಸಕ ಹೆಚ್.ಟಿ.ಮಂಜು ಪಟ್ಟಣದ ಹೇಮಾವತಿ ಬಡಾವಣೆಯ 582 ನಿವೇಶನಗಳನ್ನು ಅಕ್ರಮ ಸಕ್ರಮಗೊಳಿಸುವಂತೆ ಆಗ್ರಹಿಸಿದರು.
ಈ ಹಿಂದಿನ ಸರ್ಕಾರದಲ್ಲಿ ಹೇಮಾವತಿ ಬಡಾವಣೆಯ 642 ನಿವೇಶನಗಳನ್ನು ಸಕ್ರಮಗೊಳಿಸಿ ಉಳಿದ 582 ನಿವೇಶನಗಳನ್ನು ಪೆಂಡಿಂಗ್ ಇಟ್ಟಿದೆ. ನಿವೇಶನ ನೀಡಿಕೆಯಲ್ಲಿ ಪುರಸಭೆ ಮಾಡಿದ ತಪ್ಪಿಗೆ ಫಲಾನುಭವಿಗಳು ಸಂಕಷ್ಠಕ್ಕೆ ಸಿಲುಕಿದ್ದಾರೆ. ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಮಾವತಿ ಬಡಾವಣೆಯ ಎಲ್ಲಾ ನಿವೇಶನಗಳನ್ನು ಸಕ್ರಮಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು. ತಾಲೂಕು ವ್ಯಾಪ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಲು ಅಗತ್ಯ ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಡುವಂತೆ ಶಾಸಕ ಹೆಚ್.ಟಿ.ಮಂಜು ಒತ್ತಾಯಿಸಿದರು.