ಬುದ್ಧ, ಬಸವಣ್ಣ, ಅಂಬೇಡ್ಕರ್ ತತ್ವ ಪಾಲಿಸಿ

ಸಂಜೆವಾಣಿ ವಾರ್ತ
ಹುಮನಾಬಾದ್ :ಜೂ.೨೫: ಸರ್ವ ಜನಾಂಗದ ಒಳಿತನ್ನು ಬಯಸಿದ ಭಗವಾನ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಭವನದ ಸಭಾಂಗಣದಲ್ಲಿ ಆಶ್ರಯ ದೀಪ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ಆಶ್ರಯ ದೀಪ ಟ್ರಸ್ಟ್ ಉದ್ಘಾಟನೆ ಸಮಾರಂಭ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನ್ಯಾಯ ಮೇಲುಗೈ ಸಾಧಿಸಿದಾಗ ಅವತಾರ ಪುರುಷರು ಕಾಣಿಸಿಕೊಂಡು ಧರ್ಮವನ್ನು ಸ್ಥಾಪಿಸುತ್ತಾರೆ ಎಂಬ ನಂಬಿಕೆ ಇದೆ. ೧೨ನೇ ಶತಮಾನದಲ್ಲಿ ಬಸವೇಶ್ವರ ಮತ್ತು ೧೯ನೇ ಶತಮಾನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೀನದಲಿತರು, ಶೋಷಿತರ ವಿಮೋಚನಕಾರರಾಗಿ, ಅಜ್ಞಾನ ಮತ್ತು ಮೂಢನಂಬಿಕೆಗಳ ವಿರುದ್ಧ ಸಮಾಜ ಸುಧಾರಕರಾಗಿ ಕಾಣಿಸಿಕೊಂಡರು ಎಂದರು.
ಗೌತಮ ಬುದ್ಧರು ಆಸೆಯೇ ಮೂಲ ಎಂದು ಸಾರಿದರೇ, ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನ ಹೋರಾಟ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ಜೀವನದ ಸಾರವನ್ನು ತಿಳಿಸುವ ಈ ಸಂದೇಶಗಳು ಇಂದಿನ ಯುವಕ-ಯುತಿಯರು ಅರಿತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರೇಣುಕವೀರ ಗಂಗಾಧರ ಶಿವಾಚಾರ್ಯರು, ರಾಮ ಮತ್ತು ರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗಶಟ್ಟಿ ಶೇರಿಕಾರ, ಸುರಪುರನ ವೀರಪ್ಪ ನಿಷ್ಟಿ ತಾಂತ್ರಿಕ ಕಾಲೇಜಿನ ಪ್ರಾಧ್ಯಪಕ ಪ್ರಶಾಂತ ಶೇರಿಕಾರ, ಡಾ. ಸಿದ್ರಾಮ ವಾಗ್ಮಾರೆ, ಸತೀಷ ಸಿಂಧೆ, ಹಣ್ಮುಪಾಜಿ, ಸಂತೋಷ ಜಿ., ರೇವಣಸಿದ್ದಯ್ಯ ಸ್ವಾಮಿ, ಅನಿಲ ದೊಡ್ಡೊ, ಭೀಮರೆಡ್ಡಿ ಸಿಂಧನಕೇರಾ, ಅರವಿಂದ ಜೋಗಿರೆ, ಮೋಹನಸಿಂಗ್ ರಜಪೂತ, ಉದಯಕುಮಾರ ವಾರದ, ಯುವರಾಜ ಐಹೋಳೆ ಸೇರಿ ಅನೇಕರಿದ್ದರು.


ಸಮಾಜದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಶ್ರಮಿಸಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮಹಾತ್ಮರ ಹೆಸರಿನಲ್ಲಿ ವಿಚಾರ ಸಂಕಿರಣಗಳು ಆಯೋಜಿಸಿ ಯುವ ಸಮುದಾಯದವರಿಗೆ ಗುಣಮಟ್ಟದ ಶಿಕ್ಷಣದ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಬೇಕು.

ರೇಣುಕವೀರ ಗಂಗಾಧರ ಶಿವಾಚಾರ್ಯರು
ಪೀಠಾಧಿಪತಿ, ಹಿರೇಮಠ ಸಂಸ್ಥಾನ ಹುಮನಾಬಾದ್