
ಬೆಂಗಳೂರು, ನ.೨೦-ಎಟಿಎಂ ಕೇಂದ್ರಗಳಿಗೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ೭. ೧೧ಕೋಟಿ ದರೋಡೆ ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೌತ್ ಎಂಡ್ ಸರ್ಕಲ್ ನಿಂದ ನಿನ್ನೆ ಮಧ್ಯಾಹ್ನ
ಸಿಎಂಎಸ್ ಏಜೆನ್ಸಿ ವಾಹನವನ್ನು ತಡೆದು ೭ ಕೋಟಿ ೧೧ ಲಕ್ಷ ದರೋಡೆ ಪ್ರಕರಣದ ಆರೇಳು ಮಂದಿ ಆರೋಪಿಗಳಲ್ಲಿ ಇಬ್ಬರು ಶಂಕಿತರನ್ನು ತಿರುಪತಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಇಬ್ಬರು ಶಂಕಿತ ಆರೋಪಿಗಳನ್ನು ನಡೆಸುತ್ತಿರುವ ತೀವ್ರ ವಿಚಾರಣೆ ವೇಳೆ ಇಬ್ಬರಿಂದ ಸಿಸಿಬಿ ಪೊಲೀಸರಿಗೆ ಉಳಿದ ಆರೋಪಿಗಳು ಹಾಗೂ ದರೋಡೆ ಮಾಡಿದ ಹಣ ಇನ್ನಿತರ ಮಹತ್ವದ ಮಾಹಿತಿ ಲಭ್ಯವಾಗಿದೆ
ಇನ್ನೋವಾ ಕಾರು ಪತ್ತೆ
ದರೋಡೆಗೆ ಬಳಸಿದ್ದ ಇನ್ನೋವಾ ಕಾರು ತಿರುಪತಿಯಲ್ಲಿ ಬಳಿ ಪತ್ತೆಯಾಗಿದೆ, ಖಚಿತ ಮಾಹಿತಿಯನ್ನು ಆಧರಿಸಿ ಇನೋವಾ ಕಾರನ್ನು ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿರುಪತಿಯ ಬಳಿಯೇ ಇನೋವಾ ಕಾರು ಬಿಟ್ಟು ಆರೋಪಿಗಳು ಹಣದ ಸಮೇತ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ತಿರುಪತಿ ಪೊಲೀಸರ ಜೊತೆ ದಕ್ಷಿಣ ವಿಭಾಗ ಪೊಲೀಸರು ಹೋಟೆಲ್, ಲಾಡ್ಜ್, ದೇವಸ್ಥಾನ ಬಳಿ ಮಪ್ತಿಯಲ್ಲಿ ಶೋಧ ನಡೆಸಲಾಗುತ್ತಿದೆ.
೨೦ ಮಂದಿ ವಿಚಾರಣೆ:
ಈ ನಡುವೆ ದರೋಡೆ ಪ್ರಕರಣದ ಸಂಬಂಧ ೨೦ ಕ್ಕೂ ಹೆಚ್ಚು ಮಂದಿಯನ್ನು ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ಸಿಬ್ಬಂದಿ, ಸಿಎಂಎಸ್ ಸಿಬ್ಬಂದಿಯನ್ನು ತೀವ್ರ ವಿಚಾರಣೆ ಮಾಡಲಾಗಿದ್ದು,ಘಟನೆಯ ಸಮಯವನ್ನು ಆಧರಿಸಿ ಪ್ರಶ್ನೆ ಕೇಳಲಾಗುತ್ತಿದೆ.
ಇನ್ನು ಪ್ರಕರಣದ ಪತ್ತೆಗೆ ರಚಿಸಲಾಗಿರುವ ವಿಶೇಷ ತಂಡಗಳು ದರೋಡೆಕೋರ ಪತ್ತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ವೆಬ್ ಸೀರೀಸ್ ಪ್ರೇರಿತ:
ಕೃತ್ಯವು ವೆಬ್ ಸೀರೀಸ್ ಪ್ರೇರಿತವಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳು ದರೋಡೆಗೆ ಹಲವು ದಿನಗಳಿಂದ ಸಂಚು ರೂಪಿಸಲಾಗಿತ್ತು, ಮೂರು ಠಾಣೆಗೆ ಸೇರುವ ಸ್ಥಳದಲ್ಲಿ ವಾಹನ ಬಿಡುವುದು ಕೂಡ ಯೋಜನೆ ಆಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಸಿಎಂಎಸ್ ವಾಹನ ಸಿಕ್ಕಿದ್ದ ಫ್ಲೈ ಓವರ್ ಮೂರು ಪೊಲೀಸ್ ಠಾಣೆಗಳಿಗೆ ಗಡಿಯಾಗಿದೆ. ನಿಮಾನ್ಸ್ನಿಂದ ಮೇಲ್ಭಾಗಕ್ಕೆ ಬಂದರೆ ಆಡುಗೋಡಿ ಠಾಣೆ ಸರಹದ್ದು, ವಾಹನದ ಎಡಬದಿಯಲ್ಲಿ ಸುದ್ದುಗುಂಟೆಪಾಳ್ಯ ಠಾಣಾ ವ್ಯಾಪ್ತಿ ಮತ್ತು ಕೃತ್ಯ ನಡೆದಿರುವುದು ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ. ಆ ಪೈಕಿ ಸಿದ್ದಾಪುರ ಠಾಣೆ ದಕ್ಷಿಣ ವಿಭಾಗಕ್ಕೆ ಸೇರಿದರೆ ವಾಹನ ಸಿಕ್ಕಿದ್ದು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಈ ಠಾಣೆ ಸೌತ್ ಈಸ್ಟ್ ವಿಭಾಗಕ್ಕೆ ಸೇರಿದ್ದು. ಹೀಗಾಗಿ ವಾಹನ ಸಿಕ್ಕ ಬಳಿಕ ಮೊದಲು ಯಾವ ಠಾಣಾ ವ್ಯಾಪ್ತಿಗೆ ಘಟನೆ ಬರಲಿದೆ ಎಂಬ ಗೊಂದಲ ಉಂಟಾಗಿದೆ.
ಠಾಣಾ ವ್ಯಾಪ್ತಿ ಗೊಂದಲ:
ಪೊಲೀಸರು ಸಾಮಾನ್ಯವಾಗಿ ತಮ್ಮ ಠಾಣೆ ಸಹರದ್ದಿನ ಆಧಾರದ ಮೇಲೆ ಕೆಲಸ ಮಾಡಲಿರುವ ಕಾರಣ, ದರೋಡೆಕೋರರ ಯೋಜನೆಯು ಸೇರಿತ್ತಾ ಎನ್ನುವ ಅಂಶವೂ ಇತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ, ಅನೇಕ ಸ್ಥಳಗಳಲ್ಲಿ ಇರುವಂತೆ ಪೊಲೀಸರನ್ನೇ ಗೊಂದಲಕ್ಕೆ ದೂಡಿ ಗ್ರೇಟ್ ಎಸ್ಕೇಪ್ ಆಗುವ ಸಂಚು ಆರೋಪಿಗಳದ್ದಾಗಿತ್ತಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.


































