
ಬೆಂಗಳೂರು,ಫೆ.೨೦- ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ ೫ ಲಕ್ಷ ರೂ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ( ಎನ್ಐಎ) ಘೋಷಿಸಿದೆ.
ಮೋಸ್ಟ್ ವಾಂಟೆಡ್ ಲಷ್ಕರ್ ಎ ತೊಯ್ಬಾ ಉಗ್ರ ಜುನೈದ್ ಅಹಮ್ಮದ್ ಬಂಧನಕ್ಕೆ ಎನ್ ಐಎ ಅಧಿಕಾರಿಗಳು ತೀವ್ರ ಶೋಧ ಕೈಗೊಂಡಿದ್ದಾರೆ.
ಕಳೆದ ಮೂರು ವರ್ಷದಿಂದ ಎನ್ಐಎ ಅಧಿಕಾರಿಗಳು ದೇಶ, ಹೊರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹಮದ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶಂಕಿತ ಉಗ್ರ ಜುನೈದ್ ಬಗ್ಗೆ ಸುಳಿವು ಸಿಕ್ಕಿಲ್ಲ. ಹಾಗಾಗಿ, ಉಗ್ರನ ಸುಳಿವು ಕೊಟ್ಟರೆ ೫ ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ನಗರದ ಜನನಿಬಿಡ ಪ್ರದೇಶ ಮೆಜೆಸ್ಟಿಕ್ ಪ್ರತಿ ಕಂಬಗಳಿಗೂ, ವಾಂಟೆಡ್ ಉಗ್ರನ ಬಗ್ಗೆ ಮಾಹಿತಿ ನೀಡಿದರೆ ೫ ಲಕ್ಷ ಬಹುಮಾನ ಕೊಡುವುದಾಗಿ ಪೋಸ್ಟರ್ ಹಾಕಿದ್ದಾರೆ. ೨೦೨೩ ರಲ್ಲಿ ಸಿಸಿಬಿ ಪೊಲೀಸರು ಭೇದಿಸಿದ ಉಗ್ರ ಸಂಚಿನ ಪ್ರಕರಣದ ಪ್ರಮುಖ ರೂವಾರಿ ಜುನೈದ್ ಅಮಹ್ಮದ್. ಉಗ್ರ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಬೇಕಾಗಿರುವ ಉಗ್ರನಾಗಿದ್ದಾನೆ.
ಈ ಹಿಂದೆ ರಕ್ತಚಂದನ ಕೇಸ್ನಲ್ಲಿ ಬಂಧನವಾಗಿದ್ದ ಜುನೇದ್ ಅಹ್ಮದ್. ನಂತರ ಜೈಲಿನಲ್ಲಿ ಟಿ.ನಾಸೀರ್ನಿಂದ ಪ್ರೇರಿತನಾಗಿ ಉಗ್ರ ಸಂಘಟನೆ ಸೇರಿದ್ದ. ಜೈಲಿನಿಂದ ಬಿಡುಗಡೆಯಾಗಿ ದುಬೈ ಹೋಗಿ ಅಲ್ಲಿಂದ ಸಹಚರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿರುವ ಆರೋಪ ಇದೆ.
ನಾಗಶೆಟ್ಟಿಹಳ್ಳಿ ನಿವಾಸಿಯಾಗಿದ್ದ ಜುನೇದ್ ಅಹ್ಮದ್ ಬಂಧನಕ್ಕೆ ನಗರದಾದ್ಯಂತ ಎನ್ಐಎ ಅಧಿಕಾರಿಗಳು ವಾಂಟೆಡ್ ಪೋಸ್ಟರ್ ಅಂಟಿಸುತ್ತಿದ್ದಾರೆ.




























