
ಬೆಂಗಳೂರು,ಫೆ.೨೦-ರಾಜ್ಯ ಸರ್ಕಾರದ ಬಸ್ಸುಗಳಲ್ಲಿ ಪ್ರಯಾಣಿಸುವ ರಾಜ್ಯದ ಪುರುಷ ಪ್ರಯಾಣಿಕರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಸಾರ್ವಜನಿಕ ಸಾರಿಗೆ ಬಸ್ಗಳ ದರವನ್ನು ಪ್ರಸ್ತುತ ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಸ್ತುತ ಪ್ರಯಾಣ ದರವನ್ನು ಹೆಚ್ಚಿಸುವ ಪ್ರಶ್ನೆಯೇ ಇಲ್ಲ, ಭವಿಷ್ಯದ ಪರಿಸ್ಥಿತಿಯನ್ನು ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಬಸ್ ದರವನ್ನು ಶೇಕಡಾ ೧೫ ರಷ್ಟು ಹೆಚ್ಚಿಸಲಾಗಿತ್ತು. ಪ್ರತಿ ವರ್ಷ ಪ್ರಯಾಣ ದರವನ್ನು ಪರಿಷ್ಕರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಲಮಂಡಳಿ, ವಿದ್ಯುತ್ ದರ ಮತ್ತು ಮೆಟ್ರೋ ಮಾದರಿಯಲ್ಲಿ ಬಸ್ ದರವನ್ನು ನಿಗದಿಪಡಿಸುವ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ. ಪ್ರಯಾಣ ದರ ಹೆಚ್ಚಳವನ್ನು ನಿರ್ಧರಿಸಲು ಮತ್ತು ಅವುಗಳ ಶಿಫಾರಸುಗಳ ಪ್ರಕಾರ ದರಗಳನ್ನು ಪರಿಷ್ಕರಿಸಲು ಸಮಿತಿಯನ್ನು ರಚಿಸುವ ಯೋಜನೆ ಇತ್ತು. ಆದರೆ, ಸಮಿತಿ ಇನ್ನೂ ರಚನೆಯಾಗಿಲ್ಲದ ಕಾರಣ, ಪ್ರಸ್ತುತ ದರ ಹೆಚ್ಚಳ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಬಸ್ ದರ ಹೆಚ್ಚಳವು ಪುರುಷ ಪ್ರಯಾಣಿಕರಿಗೆ ಕನಿಷ್ಠ ಮುಂದಿನ ಆರು ತಿಂಗಳವರೆಗೆ ಏರಿಕೆಯಾಗಲ್ಲ.
ಸಮಿತಿ ರಚನೆಯಾದ ನಂತರವೇ ಪ್ರಯಾಣ ದರ ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.






























