
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.15:- ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ಸಿಬಿಎಸ್ಇ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡರು.
ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು. ಶಾಲೆಯಲ್ಲಿ ಇಂದು ಪಾಠ ಪ್ರವಚನಕ್ಕೆ ಸ್ವಲ್ಪ ಸಮಯ ಬ್ರೇಕ್ ನೀಡಿ ಚುನಾವಣೆಯ ಪ್ರಕ್ರಿಯೆಗಳು ಹೇಗೆ ನಡೆಯುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಪ್ರಾತ್ಯಕ್ಷತೆಯ ಮೂಲಕ ಅರಿವು ಮೂಡಿಸಿದರು. ಮುಖ್ಯ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಮತ ಎಣಿಕೆ ಅಧಿಕಾರಿಗಳಾಗಿ ಶಿಕ್ಷಕರು ಕಾರ್ಯ ನಿರ್ವಹಿಸುವ ಮೂಲಕ ಚುನಾವಣೆ ಮತ್ತು ಮತದಾನ ಮತ ಎಣಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಗೆಲುವು ಸಾಧಿಸಿದವರಿಗೆ ಪ್ರತಿಜ್ಞಾ ವಿಧಿಯನ್ನು ನೀಡಲಾಯಿತು.
ವಿದ್ಯಾರ್ಥಿ ಪರಿಷತ್ನ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿದ್ದವರು ವಿದ್ಯಾರ್ಥಿ ಮತದಾರರ ಬಳಿಗೆ ಹೋಗಿ ನಮಗೆ ಮತ ನೀಡಿ, ನಮ್ಮ ಚಿನ್ಹೆ ಬಗ್ಗೆ ತಿಳುವಳಿಕೆ ಮಾಡಿ, ನಾನು ಆಯ್ಕೆಯಾದರೆ ಇಂಥ ಕಾರ್ಯಗಳನ್ನು ಮಾಡುತ್ತೇವೆ ಎಂದು ಭರವಸೆಗಳನ್ನು ನೀಡುವ ಜೊತೆಗೆ ಎಲ್ಲರು ತಪ್ಪದೇ ಮತದಾನದಲ್ಲಿ ಭಾಗವಹಿಸಿ ಎಂದು ಕರೆ ಕೊಟ್ಟರು.
ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಆರಂಭಗೊಂಡು, ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ವಾಪಸ್ ಪಡೆಯುವ ಪ್ರಕ್ರಿಯೆಗಳು, ಅಂತಿಮ ಕಣದಲ್ಲಿರುವ ಪಟ್ಟಿಯನ್ನು ಸಹ ಪ್ರಕಟಿಸಲಾಯಿತು. ನಂತರ ಚುನಾವಣೆಯ ಮತದಾನ ಆರಂಭವಾಯಿತು. ವಿದ್ಯಾರ್ಥಿಗಳು ತಮ್ಮ ಶಾಲೆಯ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ಮುಂದೆ ಸರದಿ ಸಾಲಿನಲ್ಲಿ ನಿಂತು ಅಪ್ ಮೂಲಕ ಮತ ಚಲಾಯಿಸಿದರು. ನಂತರ ಮತ ಎಣಿಕೆ ನಡೆದು ಹೆಚ್ಚು ಮತ ಪಡೆದವರನ್ನು ವಿವಿಧ ಹುದ್ದೆಗಳಿಗೆ ಆಯ್ಕೆಯಾದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಎಚ್.ಎಂ. ಗಿರೀಶ್ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು.
ಶಾಲಾ ಪರಿಷತ್ ಅಧ್ಯಕ್ಷರಾಗಿ ಸೃಜನ್ : 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ನ ಅಧ್ಯಕ್ಷರಾಗಿ ಸೃಜನ್ ಆಯ್ಕೆಯಾದರೆÉ, ಉಪಾಧ್ಯಕ್ಷರಾಗಿ ಸ್ಫೂರ್ತಿ, ಕಾರ್ಯದರ್ಶಿಯಾಗಿ ಪ್ರಕಲ್ಪ, ಆರೋಗ್ಯ ಸಚಿವರಾಗಿ ನಿಶ್ಚಿತ ಹಾಗೂ ಕ್ರೀಡಾ ಸಚಿವರಾಗಿ ಶಶಾಂಕ್ ಅತಿ ಹೆಚ್ಚು ಮತಗಳನ್ನು ಪಡೆದು ಚುನಾಯಿತರಾದರು.
ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ವಿವಿಧ ಸ್ಥಾನಗಳಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಆಡಳಿತ ಮಂಡಳಿಯವರು, ಪ್ರಾಂಶುಪಾಲರಾದ ಹೆಚ್.ಎಂ. ಗಿರೀಶ್ ರವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.