ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.26- ನಿಗಧಿತ ಸಮಯಕ್ಕೆ ಶಾಲೆಗೆ ಬಾರದ ಹಾಗೂ ಪಾಠ ಪ್ರವಚನ ಮಾಡದ ಶಿಕ್ಷಕರಿಬ್ಬರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಬಿಸಿಯೂಟ ತಯಾರಿಕೆಯಲ್ಲಿ ಯಾವುದೇ ತಾರತಮ್ಯ ಇಲ್ಲದೇ ಎಲ್ಲಾ ಮಕ್ಕಳು ಸೇವನೆ ಮಾಡುವಂತೆ ವ್ಯವಸ್ಥೆ ಮಾಡಿ, ಈಗ ಟಿಸಿ ಪಡೆದಿರುವ ಮಕ್ಕಳನ್ನು ವಾಪಸ್ ಶಾಲೆಗೆ ಸೇರ್ಪಡೆ ಮಾಡಲು ಜಿ.ಪಂ. ಸಿಇಓ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಮನೋರೋತ್ ಅವರು ಸೂಚನೆ ನೀಡಿದರು.
ತಾಲೂಕಿನ ಆಲೂರು ಸಮೀಪದ ಹೊಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 21 ವಿದ್ಯಾರ್ಥಿಗಳು ಟಿಸಿ ಪಡೆದು ಬೇರಡೆ ದಾಖಲಾಗಿರÀುವುದು ಹಾಗೂ ಬಿಸಿಯೂಟವನ್ನು ದಲಿತ ಮಹಿಳೆ ತಯಾರು ಮಾಡುತ್ತಾರೆ ಎಂಬ ಕಾರಣಕ್ಕೆ ದಾಖಲಾತಿ ಇಲ್ಲದೇ ಓರ್ವ ವಿದ್ಯಾರ್ಥಿ ಮಾತ್ರ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿರುವ ಕುರಿತು ಮಾಹಿತಿ ಹಿನ್ನೆಲೆಯಲ್ಲಿ ಇಂದು ಶಾಲೆಗೆ ಎಸ್ಪಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿ ಗ್ರಾಮಸ್ಥರು ಹಾಗೂ ಪೋಷಕರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ಹೊಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ 19 ಮಕ್ಕಳು ವರ್ಗಾವಣೆ ಪತ್ರ ಪಡೆದು ಪಕ್ಕದ ಆಲೂರು ಶಾಲೆಗೆ ದಾಖಲಾಗಿದ್ದರು. ಇದರಿಂದ ಕುಪಿತಗೊಂಡಿದ್ದ ಹೊಮ್ಮ ಶಾಲೆ ಬಿಸಿಯೂಟ ಮುಖ್ಯ ಅಡಿಗೆಯವರಾದ ನಿಂಗಮ್ಮ ಅವರು ಶಾಲೆಗೆ ಬೀಗ ಜಡಿದರೆ ತನಗೆ ಎಲ್ಲಿ ಕೆಲಸ ಹೋಗುತ್ತದೆ ಎಂಬ ಭಯದಿಂದ ಮಾಧ್ಯಮಗಳ ಮುಂದೆ ನಾನು ಅಡುಗೆ ಮಾಡುತ್ತಿರುವುದಕ್ಕೆ ಶಾಲೆಯಿಂದ ಮಕ್ಕಳು ಹೊರ ಹೋಗಿದ್ದಾರೆ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ಶಿಕ್ಷಕ ರವಿ ಮತ್ತೊರ್ವ ಶಿಕ್ಷಕ ನಟರಾಜು ನಡುವೆ ಮನಸ್ತಾಪ ಉಂಟಾಗಿ, ಶಾಲೆಗೆ ಸರಿಯಾಗಿ ಬರದೇ ಮಕ್ಕಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಅನೇಕ ಬಾರಿ ಪೋಷಕರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.
ಜಿ.ಪಂ. ಸಿಇಓ ಮೋನಾರೋತ್ ಅವರು ಶಾಲೆಗೆ ಭೇಟಿ ನೀಡಿ, ಪೋಷಕರೊಂದಿಗೆ ಸಭೆ ನಡೆಸಿ, ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೇ ಅಸ್ಪಶ್ಯತೆ ಆಚರಣೆ ಬಗ್ಗೆಯು ಸಹ ಎಸ್ಪಿ ಡಾ. ಬಿ.ಟಿ. ಕವಿತಾ ಅವರು ಖಡಕ್ ಸೂಚನೆ ನೀಡಿ, ಇಂಥ ಧೋರಣೆ ಸರಿಯಲ್ಲ. ನೊಂದ ಮಹಿಳೆ ದೂರು ನೀಡಿದರೆ, ಅಂಥವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮವಾಗುತ್ತದೆ. ಗ್ರಾಮದಲ್ಲಿ ಸಾಮರಸ್ಯ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅನೇಕ ಮುಖಂಡರು ಮಾತನಾಡಿ, ನಮ್ಮ ಗ್ರಾಮದ ಶಾಲೆಯು ಇನ್ನು ಒಂದು ವರ್ಷಕ್ಕೆ 100 ವರ್ಷಗಳನ್ನು ಪೊರೈಸುತ್ತದೆ. ಆದರೆ, ಶಿಕ್ಷಕರು ಸರಿಯಾದ ಪಾಠ ಪ್ರವಚನ ಮಾಡದೇ ಇದ್ದುದರಿಂದ ನಮ್ಮ ಮಕ್ಕಳು ಕಲಿಕೆಯಿಂದ ಬಹಳ ಹಿಂದುಳಿದ್ದರು. ಇದನ್ನು ಮನಗಂಡು ನಾವು ಪಕ್ಕದ ಆಲೂರು ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದೇವೆ. ಅಲ್ಲದೇ ಕಳೆದ 26 ವರ್ಷಗಳಿಂದ ಅಡುಗೆ ಸಹಾಯಕರಾಗಿದ್ದ ನಿಂಗಮ್ಮ ಅವರು ಮಕ್ಕಳ ದಾಖಲಾತಿ ಕಡಿಮೆಯಾದ ಹಿನ್ನೆಲೆಯಲ್ಲಿ ಮುಖ್ಯ ಅಡುಗೆಯವರಾಗಿ ಬಡ್ತಿ ಪಡೆದುಕೊಂಡಿದ್ದರು. ಇವರು ನಿವೃತ್ತಿ ಅಂಚಿನಲ್ಲಿದ್ದು, ರುಚಿಯಾಗಿ ಹಾಗೂ ಗುಣಮಟ್ಟದ ಅಡುಗೆ ತಯಾರು ಮಾಡುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಆ ಶಾಲೆಯ ಮುಖ್ಯ ಶಿಕ್ಷಕರೇ ನಮಗೆ ಅನೇಕ ಬಾರಿ ಸಭೆ ನಡೆಸಿ ತಿಳಿಸಿದ್ದರು. ಈ ಕಾರಣದಿಂದ ನಮ್ಮ ಮಕ್ಕಳು ಊಟ ಮಾಡಲು ಹಿಂಜರಿಕೆ ಮಾಡುತ್ತಿದ್ದವು ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದರು.
ಡಿಡಿಪಿಐ ರಾಮಚಂದ್ರೇ ಅರಸ್ ಮಾತನಾಡಿ, ಗ್ರಾಮದಲ್ಲಿ ಒಂದು ಶಾಲೆ ಅಗತ್ಯವಾಗಿದೆ. ಇರುವ ಶಾಲೆಯನ್ನು ಮುಚ್ಚಿಸಿ, ನಾಲ್ಕು ಕಿ.ಮೀ. ದೂರದ ಶಾಲೆಗೆ ಮಕ್ಕಳನ್ನು ದಾಖಲು ಮಾಡುವುದು ಸರಿಯಲ್ಲ. ನಿಮ್ಮ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಈ ಹಿಂದೆ ಇದ್ದ ಶಿಕ್ಷಕರ ತಪ್ಪು ಮಾಡಿದ್ದರೆ ಅವರ ವಿರುದ್ದ ಶಿಸ್ತು ಕ್ರಮವಾಗುತ್ತದೆ. 26 ಮಕ್ಕಳನ್ನು ಶಾಲೆಗೆ ದಾಖಲು ಮಾಡಿದರೆ, ಮತ್ತೊಬ್ಬ ಅಡುಗೆಯವರನ್ನು ನೇಮಕ ಮಾಡಿಕೊಳ್ಳಲು ತಕ್ಷಣವೇ ಅವಕಾಶ ಮಾಡಿಕೊಡುತ್ತೇವೆ. ಈಗ ಇಬ್ಬರು ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಿದ್ದು, ಮತ್ತೊಬ್ಬರು ಅತಿಥಿ ಶಿಕ್ಷಕರನ್ನು ನೀಡುತ್ತೇವೆ. ಶಾಲೆ ಬಿಟ್ಟು ಹೋಗಿರುವ ಎಲ್ಲಾ ಮಕ್ಕಳನ್ನು ಮತ್ತೇ ಶಾಲೆಗೆ ಸೇರಿಸಲು ಪೋಷಕರು ಮುಂದಾಗಬೇಕು. ಇನ್ನು ಒಂದು ವರ್ಷಕ್ಕೆ ಶತಮಾನ ಪೊರೈಸಿರುವ ಶಾಲೆಗೆ ಸರ್ಕಾರ 10 ಲಕ್ಷ ರೂ. ಅನುದಾನ ನೀಡುತ್ತದೆ. ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ. ಹಿನ್ನೆಲೆಯಲ್ಲಿ ಇಡೀ ಜಿಲ್ಲಾಡಳಿತ ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತದೆ ಎಂದು ತಿಳಿಸಿದರು.
ಬಳಿಕ ಪೋಷಕರು ತಮ್ಮ ಮಕ್ಕಳನ್ನು ವಾಪಸ್ ಶಾಲೆಗೆ ಸೇರಿಸುವ ಭರವಸೆ ನೀಡಿದರು. ಇಂದೇ ಬೇರೆ ಶಾಲೆಗೆ ಹೋಗಿದ್ದ 6 ಮಕ್ಕಳು ಮತ್ತೇ ಶಾಲೆಗೆ ಸೇರ್ಪಡೆಯಾದವು. ಇನ್ನುಳಿದ ಮಕ್ಕಳು ನಾಳೆಯಿಂದಲೇ ಹೊಮ್ಮ ಶಾಲೆಗೆ ಬರುವಂತೆ ಕ್ರಮ ವಹಿಸುವಂತೆ ಬಿಇಓಗೆ ಅಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಗಿರಿಜಾ, ಡಿವೈಎಸ್ಪಿ ಲಕ್ಷ್ಮಯ್ಯ, ಬಿಇಓ ಹನುಮಶೆಟ್ಟಿ, ಬಿಸಿಯೂಟ ಅಧಿಕಾರಿ ರೇವಣ್ಣ, ತಾಲೂಕು ಸಮಾಜಕಲ್ಯಾಣಾಧಿಕಾರಿ ನಂಜುಂಡೇಗೌಡ, ತಾ.ಪಂ. ಇಓ ಶ್ರೀಕಂಠೇರಾಜ್ ಅರಸ್, ಶಾಲೆಯ ಮುಖ್ಯ ಶಿಕ್ಷಕ ಚಿನ್ನಸ್ವಾಮಿ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್ಪೆಕ್ಟರ್ ಚಂದ್ರಕಲಾ, ಸಂತೇಮರಹಳ್ಳಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಸವರಾಜು, ಪಿಎಸ್ಐ ತಾಜ್ವುದ್ದಿನ್ ಹಾಗೂ ಗ್ರಾಮಸ್ಥರು, ಶಾಲೆಯ ಪೋಷಕರು ಇದ್ದರು.