ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ: ಶಾಸಕ ಹೆಚ್.ಟಿ.ಮಂಜು ದಂಪತಿಗಳಿಂದ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.19:
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ 93 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಗೌಡರಿಗೆ ಶುಭಕೋರಿ ಶಾಸಕ ಹೆಚ್.ಟಿ.ಮಂಜು ದಂಪತಿಗಳು ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಪತ್ನಿ ರಮಾ ಹಾಗೂ ಜೆಡಿಎಸ್ ಕಾರ್ಯಕರ್ತರ ಪಡೆಯೊಂದಿಗೆ ಕೋಟೆ ಭೈರವೇಶ್ವರ ದೇವಾಲಯಕ್ಕೆ ಆಗಮಿಸಿದ ಶಾಸಕ ಹೆಚ್.ಟಿ.ಮಂಜು ಹೆಚ್.ಡಿ.ದೇವೇಗೌಡರಿಗೆ ಆಯಸ್ಸು, ಆರೋಗ್ಯ ಕೋರಿ ಗೌಡರ ಹೆಸರಿನಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೇವೇಗೌಡರ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ದೇವೇಗೌಡರು ಕೇವಲ ಜೆಡಿಎಸ್ ಪಕ್ಷದ ನಾಯಕರಲ್ಲ ದೇಶದ ಸಮಸ್ತ ರೈತರ ಪ್ರತಿನಿಧಿ. ಇಳಿವಯಸ್ಸಿನಲ್ಲಿಯೂ ರೈತರ ಬಗ್ಗೆ ಚಿಂತಿಸುವ ದೇವೇಗೌಡರು ರೈತಪರ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ. ಹೇಮಾವತಿ ಜಲಾಶಯ ಯೋಜನೆ ಸೇರಿದಂತೆ ನಾಡಿನ ಪ್ರಮುಖ ನೀರಾವರಿ ಯೋಜನೆಗಳು ಪೂರ್ಣಗೊಂಡು ರೈತರ ಭೂಮಿ ಹಸಿರಾಗಲು ದೇವೇಗೌಡರು ಕಾರಣಕರ್ತರಾಗಿದ್ದಾರೆ. ದೇಶಕ್ಕೆ ದೇವೇಗೌಡರ ಸೇವೆ ಮತ್ತಷ್ಟು ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರು ಈಗಲೂ ದೇವೇಗೌಡರ ಸಲಹೆ ಸಹಕಾರ ಪಡೆದು ದೇಶವನ್ನು ಮುನ್ನಡೆಸುತ್ತಿದ್ದಾರೆ. ನಮ್ಮೆಲ್ಲರಿಗೂ ದೇವೇಗೌಡರು ಸ್ಪೂರ್ತಿದಾಯಕರಾಗಿದ್ದು ಅವರ ಮಾರ್ಗದರ್ಶನ ನಿರಂತರವಾಗಿರಬೇಕು. ಅದಕ್ಕಾಗಿ ಅವರಿಗೆ ಶುಭಕೋರಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರಲ್ಲದೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರಿಂದಲೂ ದೇವೇಗೌಡ ಅಪ್ಪಾಜಿಯವರಿಗೆ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದರು.ದೇವೇಗೌಡರ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಶಾಸಕರೊಂದಿಗೆ ಭಾಗವಹಿಸಿದ್ದ ನೂರಾರು ಜೆಡಿಎಸ್ ಕಾರ್ಯಕರ್ತರು ಗೌಡರ ಪರ ಜಯಘೋಷಗಳನ್ನು ಹಾಕಿದರು.


ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಹೊಸಹೊಳಲು ರಾಜು,ಮಹದೇವೇಗೌಡ ಮಲ್ಲೇನಹಳ್ಳಿ ಮೋಹನ್, ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷ ಚಂದ್ರೇಗೌಡ, ಹೊಸಹೊಳಲು ಗ್ರಾಮ ಮುಖಂಡ ಚಿಕ್ಕೇಗೌಡ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಟಿ.ಬಲದೇವ, ಮುಖಂಡರುಗಳಾದ ನರಸನಾಯಕ್, ಮಾಕವಳ್ಳಿ ವಸಂತಕುಮಾರ್,ಭೈರಾಪುರ ಹರೀಶ್ ರವಿಕುಮಾರ್, ಬಸವಲಿಂಗಪ್ಪ, ಪುರಸಭಾ ಸದಸ್ಯ ಗಿರೀಶ್, ಮಾಜಿ ಸದಸ್ಯ ಕೆ.ಆರ್.ಹೇಮಂತಕುಮಾರ್,ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್,ಧ್ರುವಕುಮಾರ್, ಮಾಕವಳ್ಳಿ ಕುಮಾರ್ ಸೇರಿದಂತೆ ಹಲವರಿದ್ದರು.