ಪುತ್ತೂರು: ವಿವಾದಕ್ಕೆ ಕಾರಣವಾಗಿದ್ದ ನಗರಸಭೆಯ ಉದ್ದಿಮೆ ಪರವಾನಿಗೆ ಮತ್ತು ಘನತ್ಯಾಜ್ಯ ಶುಲ್ಕದ ಏರಿಕೆಯನ್ನು ಮತ್ತೆ ಪರಿಷ್ಕರಣೆ ಮಾಡಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಲೀಲಾವತಿ ನಾಯ್ಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತಿಳಿಸಲಾಯಿತು.
ಉದ್ದಿಮೆ ಪರವಾನಿಗೆ ಹಾಗೂ ಘನತ್ಯಾಜ್ಯ ಶುಲ್ಕದ ಹೆಚ್ಚಳದ ಬಗ್ಗೆ ಪುತ್ತೂರು ವರ್ತಕ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಈ ಶುಲ್ಕವನ್ನು ಪರಿಷ್ಕರಣೆ ಮಾಡಲಾಯಿತು. ಸಭೆಯಲ್ಲಿ ವರ್ತಕ ಸಂಘದ ಪದಾಧಿಕಾರಿಗಳೊಂದಿಗೆ ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಚರ್ಚಿಸಿ ಶುಲ್ಕವನ್ನು ಕಡಿಮೆ ಮಾಡಿದರು. ಇದಕ್ಕೆ ವರ್ತಕ ಸಂಘದ ಪದಾಧಿಕಗಳ ಸಹಮತ ದೊರೆಯಿತು.
ತೆರಿಗೆ ಜಾಸ್ತಿ ಮಾಡದಿದ್ದರೆ ಸರ್ಕಾರದಿಂದ ಬರುವ ಅನುದಾನ ಕಡಿಮೆಯಾಗುತ್ತದೆ. ಪ್ರತೀ ವರ್ಷ ಶೇ೧೧ರಷ್ಟು ಹೆಚ್ಚಳ ಮಾಡಬೇಕು ಎಂಬ ನಿಯಮವಿದ್ದರೂ ನಾವು ಮೂರು ವರ್ಷಕ್ಕೊಮ್ಮೆ ಶೇ.೧೫ರಷ್ಟು ಹೆಚ್ಚಳ ಮಾಡುತ್ತಿದ್ದೇವೆ. ನಮ್ಮಲ್ಲಿ ವಿವಿಧ ತೆರಿಗೆ ಸಂಗ್ರಹಕ್ಕಾಗಿ ಉದ್ದಿಮೆಗಳನ್ನು ಒಟ್ಟು ೧೦೪ ವಿಭಾಗ ಮಾಡಿದ್ದೇವೆ. ಆಸ್ಪತ್ರೆ, ಮಾರ್ಕೆಟ್, ಮಾಲ್, ಓಪನ್ ಗ್ರೌಂಡ್, ಸಭಾಂಗಣ, ಬೀದಿ ಬದಿ ವ್ಯಾಪಾರ, ಪ್ರದರ್ಶನ ಮಾರಾಟದಂತೆ ೧೦ ಪ್ರಮುಖ ವಿಭಾಗದಲ್ಲಿ ೧೦೪ ವಿಭಾಗ ಇದೆ. ಇವರೆಲ್ಲ ೩ ವರ್ಷಕ್ಕೆ ಶೇ.೧೫ ತೆರಿಗೆ ಹೆಚ್ಚಿಸಬೇಕು. ಪ್ರತಿ ವರ್ಷ ಮಾರ್ಚ್ ಅಂತ್ಯದ ತನ ಪರವಾನಿಗೆ ಇರುತ್ತದೆ. ನವೀಕರಣ ಮಾಡದಿದ್ದರೆ ರದ್ದು ಎಂದು ತಿಳಿದು ಕೊಳ್ಳಬೇಕು. ಸಿಗರೇಟ್, ತಂಬಾಕು ವ್ಯಾಪಾರಕ್ಕೆ ಪ್ರತ್ಯೇಕ ಪರವಾನಿಗೆ ಶುಲ್ಕ ಇದೆ. ಉದ್ದಿಮೆದಾರರೂ ಒಂದೇ ನಾಮಫಲಕ ಹಾಕಬೇಕು. ಹೆಚ್ಚು ಹಾಕಿದರೆ ಜಾಹೀರಾತು ತೆರಿಗೆ ಕಟ್ಟಬೇಕು ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ಪುಟ್ಪಾತ್ ವ್ಯಾಪಾರ ಬಂದ್
ಪುತ್ತೂರು ನಗರ ವ್ಯಾಪ್ತಿಯಲ್ಲಿ ಉದ್ದಿಮೆದಾರರು ಪುಟ್ಪಾತ್ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಒಂದು ವಾರದೊಳಗೆ ಇದನ್ನು ತೆರವು ಮಾಡಲಿದ್ದೇವೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದರೆ ದಂಡ ವಿಧಿಸಲಾಗುವುದು. ಇ-ವೇಸ್ಟ್ ಇದ್ದಲ್ಲಿ ನಗರಸಭೆಯಲ್ಲಿರುವ ಕಲೆಕ್ಷನ್ ಸೆಂಟರ್ಗೆ ತಂದೊಪ್ಪಿಸಬೇಕು ಎಂದು ಅವರು ತಿಳಿಸಿದರು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಕಾರ್ಯದರ್ಶಿ ಮನೋಜ್, ಕೋಶಾಧಿಕಾರಿ ಉಲ್ಲಾಸ್, ಮಾಜಿ ಅಧ್ಯಕ್ಷ ಜಾನ್ ಕುಟಿನೋ, ವಸಂತ್ ಭಟ್, ಮಹಾಲಸ ಕೋಲ್ಡ್ ಹೌಸ್ನ ರಾಜೇಶ್ ಕಾಮತ್, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ, ದಿನೇಶ್, ನಿತಿನ್ ರವರು ಚರ್ಚೆಯಲ್ಲಿ ಭಾಗವಹಿಸಿದರು. ಒಕ್ಕಲಿಗ ಗೌಡ ಸಮುದಾಯ ಭವನದ ಪರವಾಗಿ ವಿಶ್ವನಾಥ ಗೌಡ, ಕ್ರಿಸ್ಟಲ್ ಹಾಲ್ನ ಹೆನ್ರಿ ತಾವ್ರೋ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮಹೇಶ್ಚಂದ್ರ ಸಾಲಿಯಾನ್, ಮ್ಯಾನೇಜರ್ ಪ್ರಕಾಶ್, ಇಂದುಶೇಖರ್, ಸಂತೋಷ್ ಶೆಟ್ಟಿ, ಸುದರ್ಶನ್, ಜುನೈದ್, ಹಸನ್, ನಗರಸಭಾ ಸದಸ್ಯರಾದ ವಿದ್ಯಾ ಗೌರಿ, ಯೂಸೂಪ್ ಡ್ರೀಮ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.