ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.07:
ಗ್ರಾಮೀಣ ಪ್ರದೆಶದ ರಸ್ತೆ, ಚರಂಡಿ ಮತ್ತಿತರ ಅಭಿವೃದ್ದಿ ಕಾರ್ಯಗಳಿಗೆ ನಿಡುವಷ್ಟೇ ಆದ್ಯತೆಯನ್ನು ಗ್ರಾಮ ಪಂಚಾಯತಿಗಳು ಸರ್ಕಾರಿ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಗಳಿಗೂ ನೀಡಬೇಕೆಂದು ಶಾಸಕ ಹೆಚ್.ಟಿ.ಮಂಜು ಸೂಚಿಸಿದರು.

ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯತಿಯ ಆವರಣದಲ್ಲಿ ಆಯೋಜಿಸಿದ್ದ ಬೂಕನಕೆರೆ ಗ್ರಾಮ ಪಂಚಾಯತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಶ್ರೀ ಸಾಮಾನ್ಯರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆದರೆ ಆ ಯೋಜನೆಗಳ ಬಗ್ಗೆ ಜನರಿಗೆ ಅರಿವಿಲ್ಲ. ಗ್ರಾಮ ಪಂಚಾಯತಿಗಳು ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಯೋಜನೆಗಳ ಫಲ ಜನರಿಗೆ ದೊರಕುವಂತೆ ಮಾಡುತ್ತಿಲ್ಲ. ಆಯುಷ್ಮಾನ್ ಭಾರತ್ ಕಾರ್ಡ್ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಒಂದು ಯೋಜನೆ. ಈ ಕಾರ್ಡ್‍ನ್ನು ಉಚಿತವಾಗಿ ಮಾಡಲಾಗುತ್ತದೆ. ಈ ಕಾರ್ಡ್‍ನ್ನು ಮಾಡಿಸಿಕೊಂಡರೆ ಯಾವುದೇ ಖಾಸಗಿ ಆಸ್ಪತ್ರೆಗೆ ಹೋದರೂ 05 ಲಕ್ಷ ರೂಪಾಯಿಗಳ ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಆರೋಗ್ಯ ಕಾರ್ಡ್ ಮಾಡಿಸಿದರೆ ಯಾವ ಯಾವ ವೈದ್ಯರ ಹತ್ತಿರ ಯಾವ್ಯಾವ ವೈದ್ಯಕೀಯ ಚಿಕಿತ್ಸೆ ಪಡೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಲಿದೆ. ಪ್ರಧಾನ ಮಂತ್ರಿ ಜೀವನ್ ಭೀಮಾ ಯೋಜನೆಯ ಮೂಲಕ 18 ರಿಂದ 50 ವರ್ಷ ವಯೋಮಾನದವರೆಗಿನ ಜನ ವಿಮಾ ಸೌಲಭ್ಯ ಪಡೆಯಬಹುದು. ವಾರ್ಷಿಕ ಪ್ರೀಮಿಯಂ 436 ರೂ ಪಾವತಿಸಿದರೆ ಈ ಯೋಜನೆಯ ಮೂಲಕ ಆಕಸ್ಮಿಕ ಮರಣಕ್ಕೀಡಾದ ವ್ಯಕ್ತಿಯ ಕುಟುಂಬಕ್ಕೆ 02 ಲಕ್ಷ ರೂ ವಿಮೆ ಹಣ ಸಂದಾಯವಾಗುತ್ತದೆ.

ಪ್ರದಾನ ಮಂತ್ರಿ ಸಂಧ್ಯಾ ಭೀಮಾ ಯೋಜನೆಯ ಮೂಲಕ 18 ರಿಂದ 70 ವರ್ಷ ವಯೋಮಾನದವರು ವಾರ್ಷಿಕ ಕೇವಲ 20 ರೂ ಪಾವತಿಸಿ ಅಪಘಾತ ಮತ್ತಿತರ ಕಾರಣಗಳಿಂದ ಮರಣ ಹೊಂದಿದರೆ 02 ಲಕ್ಷ, ಅಂಗವಿಕಲತೆಗೆ ಒಳಗಾದರೆ 01 ಲಕ್ಷ ವಿಮಾ ಸೌಲಭ್ಯ ಪಡೆಯಬಹುದು. ಅನುಗ್ರಹ ಯೋಜನೆಯಡಿ ರಾಸುಗಳಿಗೆ ವಿಮೆ ಮಾಡಿಸಿದರೆ ಹಸು,ಎಮ್ಮೆ, ಕುರಿಗಳು ಸತ್ತರೆ ಪ್ರತಿ ರಾಸುಗಳಿಗೂ 10-15 ಸಾವಿರ ವಿಮಾ ಪರಿಹಾರ ದೊರಕುತ್ತದೆ. ರೈತರು 60 ರೂ ಕೊಟ್ಟು ತುರ್ತು ಟೋಕನ್ ಪಡೆದರೆ ಅಂತವರ ಮನೆ ಬಾಗಿಲಿಗೆ ಕರೆ ಮಾಡಿದ ತಕ್ಷಣವೇ ಪಶು ವೈದ್ಯಕೀಯ ತಂಡ ಬಂದು ಉಚಿತ ಚಿಕಿತ್ಸೆ ಮತ್ತು ಔಷಧ ನೀಡುತ್ತದೆ. ಎನ್.ಎಲ್.ಎಂ ಯೋಜನೆಯಡಿ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಸೇ 50 ರ ಸಬ್ಸೀಡಿ ದರದಲ್ಲಿ ಸಾಲ ಸೌಲಭ್ಯ ದೊರಕುತ್ತದೆ. ಅನ್ನಸುವಿಧಿ ಯೋಜನೆಯಡಿ 75 ವರ್ಷ ಮೀರಿದ ವ್ಯಕ್ತಿಗೆ ಅವರ ಮನೆ ಬಾಗಿಲಿಗೆ ಹೋಗಿ ಪಡಿತರ ವಿತರಣೆ ಮಾಡಲಾಗುತ್ತಿದೆ.

ಗೃಹ ಆರೋಗ್ಯ ಯೋಜನೆಯಡಿ ವೈದ್ಯರ ತಂಡ ಸಾಂಕ್ರಾಮಿಕವಲ್ಲದ 14 ಕಾಯಿಲೆಗಳಿಗೆ ಮನೆ ಬಾಗಿಲಿಗೆ ಹೋಗಿ ಉಚಿತ ಚಿಕಿತ್ಸೆ ನೀಡುತ್ತಿದೆ. ಸರ್ಕಾರದ ಯೋಜನೆಗಳು ಅಪಾರವಾಗಿದ್ದರೂ ಅವುಗಳ ಅರಿವು ಜನಸಾಮಾನ್ಯರಿಗಿಲ್ಲ. ಗ್ರಾಮ ಪಂಚಾಯತಿಗಳು ಸರ್ಕಾರದ ಯೋಜನೆಗಳನ್ನು ಪ್ರಚಾರ ಪಡಿಸಿ ಜನರಿಗೆ ಅರಿವು ಮೂಡಿಸಬೇಕಲ್ಲದೆ ಜನರ ಮನೆ ಬಾಗಿಲಿಗೆ ಹೋಗಿ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳು ಕೇವಲ ಕಾಗದದ ಮೇಲಿದ್ದರೆ ಗ್ರಾಮೀಣರ ಬದುಕು ಹಸನಾಗುವುದು ಅಸಾಧ್ಯ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಶ್ಯಾಂಪ್ರಸಾದ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾ.ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ತಾ.ಪಂ ಮಾಜಿ ಸದಸ್ಯ ಹುಲ್ಲೇಗೌಡ,ಬೂಕನಕೆರೆ ಸೊಸೈಟಿ ಅಧ್ಯಕ್ಷ ಬಿ.ಪ್ರಕಾಶ್, ಬಲ್ಲೇನಹಳ್ಳಿ ನಂದೀಶ್, ಪಿ.ಡಿ.ಓ ಡಾ.ಟಿ.ನರಸಿಂಹರಾಜು,ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಮುಖಂಡರುಗಳು ಭಾಗವಹಿಸಿದ್ದರು.