ಸಂಜೆವಾಣಿ ನ್ಯೂಸ್
ಮೈಸೂರು.ಜೂ.26:- ಸತತ ಪರಿಶ್ರಮ, ಸಾಧಿಸುವ ಛಲ, ನಿರ್ದಿಷ್ಟವಾದ ಗುರಿ ಇದ್ದರೆ ವಿದ್ಯಾರ್ಥಿ ಜೀವನದಲ್ಲಿ ಸಾಫಲ್ಯತೆ ಸಾಧ್ಯ ಎಂದು ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಸತ್ಯಪ್ರಸಾದ್ ತಿಳಿಸಿದರು.
ದ್ವಿತೀಯ ಪಿಯುಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಕಾಗ್ರತೆ, ಸಮಯದ ಸದುಪಯೋಗ, ದೇವತಾನುಗ್ರಹ, ತಂದೆ, ತಾಯಿ ಮತ್ತು ಗುರುಹಿರಿಯರಲ್ಲಿ ಗೌರವದ ಮನೋಭಾವ ವಿದ್ಯಾರ್ಥಿಗಳಲ್ಲಿ ಅತ್ಯವಶ್ಯಕ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಸಂಸ್ಕøತಿ, ಶಿಸ್ತು ಮತ್ತು ಶ್ರದ್ಧೆ ಎಂಬ ಬುನಾದಿಯ ಮೇಲೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸರಿಯಾದ ಯೋಚನೆ, ಯೋಜನೆ ಮತ್ತು ವೇಳಾಪಟ್ಟಿ ತಯಾರಿಸಿ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದರು.
ನಿಗದಿತ ಪಠ್ಯಪುಸ್ತಕ ಮತ್ತು ಪರಾಮರ್ಶನ ಪುಸ್ತಕಗಳನ್ನು ಓದಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ತರಗತಿಯಲ್ಲಿ ಏಕಾಗ್ರತೆ ಮತ್ತು ತನ್ಮಯತೆಯಿಂದ ಪಾಠಗಳನ್ನು ಆಲಿಸುವುದು ಬಹಳ ಮುಖ್ಯ. ಎಲ್ಲ ವಿಷಯಗಳಿಗೂ ಸಮಾನ ರೀತಿಯ ಪ್ರಾಮುಖ್ಯತೆಯನ್ನು ನೀಡಿ ಅಧ್ಯಯನ ಮಾಡುವುದರಿಂದ ಯಶಸ್ಸು ನಿಶ್ಚಿತ. ಸಾಧಕರೊಂದಿಗೆ ಸಂವಾದದಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆದು ನಿರ್ಧರಿಸಿದ ಗುರಿಯನ್ನು ತಲುಪಬೇಕೆಂದು ಕರೆ ನೀಡಿದರು.
ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ, ನೀಟ್, ಜೆ.ಇ.ಇ., ಕೆ-ಸಿಇಟಿ ಉತ್ತಮ ಅಂಕ ಮತ್ತು ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಅನಘ ಕರ್ನಿಸ್, ಶ್ರೀಪ್ರದ.ಆರ್, ಸಂಜನಾ.ಕೆ.ಸಿ, ಅನುಶ್ರೀ.ಎಸ್ ಮತ್ತು ಮಧುಚಂದ್ರ.ಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಧಕ ವಿದ್ಯಾರ್ಥಿಗಳು ಮಾತನಾಡುತ್ತಾ ನಿರಂತರ ಕಲಿಕೆ, ಸೂಕ್ತವಾದ ಆಹಾರ ಮತ್ತು ವಿಶ್ರಾಂತಿ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾದುದು. ಭವಿಷ್ಯವನ್ನು ನಿರ್ಧರಿಸುವ ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಿಂದ ದೂರವಿರಬೇಕು ಎಂದರು. ಮುಖ್ಯಾಂಶಗಳನ್ನು ಪಟ್ಟಿ ಮಾಡಿ ಪುನರ್ಮನನ ಮಾಡಬೇಕು ಮತ್ತು ಎಲ್ಲಾ ಕಿರುಪರೀಕ್ಷೆ, ಅಣಕು ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಾದ ಉತ್ತರಗಳನ್ನು ಪುನರ್ ಪರಿಶೀಲಿಸಿ ಕಲಿಯಬೇಕೆಂದರು. ಎಲ್ಲಾ ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಸ್ವಾಸ್ಥ್ಯಕ್ಕೆ ವಿಶೇಷ ಪ್ರಾಧಾನ್ಯತೆ ನೀಡಿ ನಿರಂತರ ಅಧ್ಯಯನದಲ್ಲಿ ತೊಡಗಬೇಕು ಎಂದು ಹೇಳಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಮಯದ ನಿರ್ವಹಣೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಾಧಕ ವಿದ್ಯಾರ್ಥಿಗಳು ಸೂಕ್ತವಾದ ಮತ್ತು ಸಮರ್ಪಕವಾದ ಉತ್ತರಗಳನ್ನು ನೀಡಿದರು.
ಸುರಭಿ ಮತ್ತು ಸಾರಿಕಾ ಪ್ರಾರ್ಥಿಸಿ, ಸುದೀಪ್ತಾ ಸ್ವಾಗತಿಸಿ, ಧಾರಿಣಿ ನಿರೂಪಿಸಿ, ಜೋನಾಥನ್ ಸ್ಯಾಮ್ ವಂದನಾರ್ಪಣೆ ಮಾಡಿದರು.