Home ಜಿಲ್ಲೆ ಮೈಸೂರು ವಿಶ್ವ ಗ್ರಾಹಕರ ದಿನಾಚರಣೆ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ

ವಿಶ್ವ ಗ್ರಾಹಕರ ದಿನಾಚರಣೆ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.16:
– ಸಮಾಜದ ಪ್ರತಿಯೊಬ್ಬರು ಕಡ್ಡಾಯವಾಗಿ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಇದರಿಂದ ವಂಚನೆಗೆ ಒಳಗಾಗದೆ ಜಾಗೃತ ವಾಗಿರಬಹುದು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಶಿಕ್ಷಣ ಸಂಚಾಲಕ ಡಾ ರವಿಶಂಕರ್ ಹೇಳಿದರು


ನಗರದ ಚಾಮುಂಡಿಪುರಂ ವೃತ್ತದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಗ್ರಾಹಕರ ಹಕ್ಕುಗಳ ಜಾಗೃತಿಯ ಕರಪತ್ರ ನೀಡಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಹಕರಿಗೆ ಮಾರಾಟವಾಗುವ ಪ್ರತಿ ವಸ್ತು, ಸರಕು ಮತ್ತು ಸೇವೆಗಳ ಮೌಲ್ಯ, ವೆಚ್ಚ ಹಾಗೂ ಗುಣಮಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ಗ್ರಾಹಕರಿಗೆ ಸಿಗಬೇಕು. ಗ್ರಾಹಕರ ಹಕ್ಕುಗಳನ್ನು ತಿಳಿಸುವ ಉದ್ದೇಶದಿಂದ ಗ್ರಾಹಕ ದಿನಾಚರಣೆ ಮಾಡಲಾಗುತ್ತಿದೆ ಎಂದರು.


ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆಯೂ ತಿಳಿಸಬೇಕು. ಸರ್ಕಾರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಜಾರಿಗೆ ತಂದು ಗ್ರಾಹಕರಿಗೆ ನ್ಯಾಯ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದರು.


ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೂರುಗಳನ್ನು ಪ್ರತಿ ಜಿಲ್ಲೆಯಲ್ಲಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಸಬಹುದು. ಗ್ರಾಹಕರಿಗೆ ಸರಕುಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು, ಶಿಕ್ಷಣ ಮತ್ತು ವ್ಯವಹಾರದ ಜಾಗೃತಿ ಹಕ್ಕು, ಅವಧಿ ಮುಗಿದ ಸರಕುಗಳ ಬಗ್ಗೆ ದೂರು ನೀಡುವ ಹಕ್ಕುಗಳನ್ನು ಕಾಯ್ದೆ ನೀಡಿದೆ.
ಜಿಲ್ಲಾ ಕಾರ್ಯದರ್ಶಿ ಶ್ರೀಕಂಠೇಶ್ ಮಾತನಾಡಿ, 1962ರಲ್ಲಿ ಅಮೇರಿಕಾದ ಅಧ್ಯಕ್ಷ ಜಾನ್ ಎಫ್.ಕೆನಡಿ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತಂದರು. ಅಂದಿನಿಂದ ಮಾರ್ಚ್ 15ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಉದ್ದೇಶ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
2019ರ ಕಾಯ್ದೆ ಪ್ರಕಾರ ಗ್ರಾಹಕರು ದೂರುಗಳನ್ನು ಆನ್‍ಲೈನ್ ಮುಖಾಂತರವೂ ನೀಡಬಹುದುದೂರಿನನ್ವಯ ಪ್ರಕರಣ ದಾಖಲಿಸಿಂಡು ಸೂಕ್ತ ನ್ಯಾಯ ಒದಗಿಸುವ ಅಧಿಕಾರವನ್ನು ಆಯೋಗ ಹೊಂದಿದೆ ಎಂದರು.


ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಶಿಕ್ಷಣ ಸಂಚಾಲಕ್ ಡಾ. ರವಿಶಂಕರ್, ಜಿಲ್ಲಾ ಉಪಾಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಜಿಲ್ಲಾ ಕಾರ್ಯದರ್ಶಿ ಶ್ರೀಕಂಠೇಶ್, ಮಾಜಿನಗರ ಪಾಲಿಕಾ ಸದಸ್ಯ ಜಗದೀಶ್, ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ಆನಂದ, ದೂರ ರಾಜಣ್ಣ, ಶಿವಲಿಂಗ ಸ್ವಾಮಿ, ಜತ್ತಿ ಪ್ರಸಾದ್, ಆದರ್ಶ್, ಆದರ್ಶ್, ಧರ್ಮೇಂದ್ರ, ಜಯರಾಮ್ ಹಾಗೂ ಇನ್ನಿತರರು ಹಾಜರಿದ್ದರು.