
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.10: ಹೇಮಾವತಿ ನೀರನ್ನು ರಾಮನಗರ ಜಿಲ್ಲೆಯ ಮಾಗಡಿ ಭಾಗಕ್ಕೆ ತೆಗೆದುಕೊಂಡು ಹೋಗುವುದಕ್ಕೆ ತಾಲೂಕು ರೈತಸಂಘ ತನ್ನ ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಬೆದರಿಕೆ ಹಾಕಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ರಾಜ್ಯ ಸರ್ಕಾರದ ವಿವಾಧಿತ ಯೋಜನೆಯಿಂದ ಮಂಡ್ಯ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶದ ರೈತರ ಬದುಕು ಬೀದಿಗೆ ಬೀಳಲಿದೆ ಎಂದಿದ್ದಾರೆ.
ಹೇಮಾವತಿ ಜಲಾಶಯ 33 ಟಿ.ಎಂ.ಸಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಅಣೆಕಟ್ಟೆಯ ನೀರು ಸಂಗ್ರಹಣಾ ಸಾಮಥ್ರ್ಯದ ಆಧಾರದ ಮೇಲೆ ಈಗಾಗಲೇ ಯೋಜನಾ ವ್ಯಾಪ್ತಿಯ ಪ್ರದೇಶಗಳ ತಾಲೂಕಿಗೆ ನೀರು ಹಂಚಿಕೆ ಮಾಡಲಾಗಿದೆ. ಮೂಲ ಯೋಜನೆಯನ್ನು ಬದಲಿಸಿ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋದರೆ ಅದರ ದುಷ್ಪರಿಣಾಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ತಾಲೂಕಿನ ರೈತರ ಮೇಲೆ ಆಗಲಿದೆ. ಹೇಮಾವತಿ ಮೂಲ ಯೋಜನೆಯ ಪ್ರಕಾರ ಕೆ.ಆರ್.ಪೇಟೆ ತಾಲೂಕು ಸಂಪೂರ್ಣವಾಗಿ ಎರಡು ಬೆಳೆಗೆ ನೀರು ಪಡೆಯಬೇಕಾಗಿತ್ತು. 70 ರ ದಶಕದಲ್ಲಿ ತುಮಕೂರು ಭಾಗಕ್ಕೆ ನೀರು ತೆಗೆದುಕೊಂಡು ಹೋಗುವ ಉದ್ದೇಶದಿಂದ ಸಂಪೂರ್ಣ ನೀರಾವರಿ ಯೋಜನೆಯ ಪ್ರದೇಶವನ್ನು ಅರೆಖುಷ್ಕಿ ಬೆಳೆಗೆ ಸೀಮಿತಗೊಳಿಸಲಾಯಿತು. ಇದರಿಂದ ಘೋರ ಅನ್ಯಾಯಕ್ಕೆ ಒಳಗಾದವರು ಕೆ.ಆರ್.ಪೇಟೆ ತಾಲೂಕಿನ ರೈತ ಸಮುದಾಯ. ತಾಲೂಕಿನ ರೈತರಿಗೆ ರಾಜ್ಯ ಸರ್ಕಾರ ಅರೆಖುಷ್ಕಿ ಬೆಳೆಗೂ ಸಮರ್ಪಕವಾಗಿ ನೀರು ನೀಡುತ್ತಿಲ್ಲ. ಪ್ರಸ್ತಕ ಸಾಲಿನಲ್ಲಿ ಹೇಮಾವತಿ ಜಲಾಶಯದಲ್ಲಿ 27 ಟಿ.ಎಂ.ಸಿ ನೀರಿನ ಸಂಗ್ರಹವಿದ್ದರೂ ತಾಲೂಕಿನ ರೈತರು ಒಂದೇ ಒಂದು ತೊಟ್ಟು ಬೇಸಿಗೆ ನೀರು ಪಡೆಯಲಾಗಲಿಲ್ಲ. ಹೇಮೆಯ ನೀರಿಗಾಗಿ ತಾಲೂಕಿನ ರೈತರು ನಡೆಸಿದ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂಧಿಸಲಿಲ್ಲ.
ಅಣೆಕಟ್ಟೆಯಲ್ಲಿ ನೀರಿದ್ದರೂ ಅಗತ್ಯ ನೀರು ಪಡೆಯಲಾಗದ ಸ್ಥಿತಿಯಲ್ಲಿ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ಭಾಗದ ಹೇಮಾವತಿ ಜಲಾನಯನ ಪ್ರದೇಶದ ರೈತರು ಇದ್ದಾರೆ. ಪರಿಸ್ಥಿತಿ ಈಗಿರುವಾಗ ಹೇಮೆಯ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋದರೆ ಅದರ ದುಷ್ಪರಿಣಾಮ ಮಂಡ್ಯ ಜಿಲ್ಲೆಯ ರೈತರ ಮೇಲಾಗಲಿದೆ. ಇದಕ್ಕಾಗಿ ತಾಲೂಕು ರೈತಸಂಘ ಹೇಮೆಯ ನೀರನ್ನು ರಾಮನಗರ ಜಿಲ್ಲೆಗೆ ತೆಗದುಕೊಂಡು ಹೋಗುವುದನ್ನು ಪ್ರಭಲವಾಗಿ ವಿರೋಧಿಸುತ್ತದೆ ಎಂದು ಎಂ.ವಿ.ರಾಜೇಗೌಡ ತಿಳಿಸಿದರು.
ಶಾಸಕರು ಧ್ವನಿಯೆತ್ತಬೇಕು: ಹೇಮೆಯ ನೀರನ್ನು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುವುದರ ಬಗ್ಗೆ ಜಿಲ್ಲೆಯ ಶಾಸಕರು ಧ್ವನಿಯೆತ್ತಬೇಕು. ಯೋಜನೆಯ ಸಾಧಕ ಬಾಧಕಗಳನ್ನು ಶಾಸಕರು ಅಧ್ಯಯನ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರೈತ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯದ ಶಾಸಕ ರವಿಕುಮಾರ್ ಗಣಿಗ, ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಸೇರಿದಂತೆ ಜಿಲ್ಲೆಯ ಶಾಸಕರು ಹೇಮಾವತಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಮುಂದಾಗಬೇಕು ಎಂದು ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.