ಯುವತಿಗೆ ‘ಗರ್ಭದಾನ’ ಆರೋಪಿ ನಾಪತ್ತೆ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚನೆ

ಪುತ್ತೂರು: ಕಾಲೇಜು ವಿದ್ಯಾರ್ಥಿಯಾಗಿರುವ ಯುವಕ ಯುವತಿಯೋರ್ವಳಿಗೆ ಗರ್ಭದಾನ ಮಾಡಿರುವ ಪ್ರಕರಣದಲ್ಲಿ ಇದೀಗ ನಾಪತ್ತೆಯಾಗಿದ್ದು, ಈತನ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ತಂಡವೊಂದನ್ನು ರಚಿಸಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ತನಿಖೆ ನಡೆಸುವ ಮೂಲಕ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಪುತ್ತೂರಿನ ಬಪ್ಪಳಿಗೆ ನಿವಾಸಿ ಬಿಜೆಪಿಯ ನಗರಮಂಡಲದ ಮಾಜಿ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯರೊಬ್ಬರ ಪುತ್ರನಾದ ಶ್ರೀಕೃಷ್ಣ ಜೆ.ರಾವ್ ಎಂಬಾತ ಪ್ರಕರಣ ದಾಖಲಾಗುತ್ತಿದ್ದಂತೆ ಊರಿಗೆ ಗುಡ್‌ಬೈ ಹೇಳಿದ್ದು, ನ್ಯಾಯಾಲಯದಿಂದ ಜಾಮೀನು ಸಿಗುವ ತನಕ ಪೊಲೀಸ್ ಇಲಾಖೆಯ ಕಣ್ಣುತಪ್ಪಿಸುವ ಪ್ರಯತ್ನ ಇದಾಗಿದೆ ಎನ್ನಲಾಗುತ್ತಿದೆ. ಆದರೆ ಪೊಲೀಸರು ಆರೋಪಿ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದು, ಬೆಳ್ತಂಗಡಿಯ ಕನ್ಯಾಡಿ ಎಂಬಲ್ಲಿ ಈತನ ಮೊಬೈಲ್ ಆಫ್ ಆಗಿರುವುದನ್ನು ಪತ್ತೆ ಹಚ್ಚಿ ಉಜಿರೆಯಲ್ಲಿರುವ ಆರೋಪಿ ಅಜ್ಜಿ ಮನೆಗೆ ಹೋಗಿ ಅಲ್ಲಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ವಿವಿಧ ಮಹಿಳಾ ಸಂಘಟನೆಗಳು ಆರೋಪಿಯನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳುವ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದು, ಇಲ್ಲದಿದ್ದರೆ ಪ್ರತಿಭಟನೆ ನಡೆಸಲೂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಒಂದು ತಿಂಗಳ ಹಿಂದೆ ಪುತ್ತೂರು ಮಹಿಳಾಠಾಣೆಗೆ ಸಂತ್ರಸ್ತೆ ದೂರು ನೀಡಿದ್ದು, ಪ್ರಕರಣವನ್ನು ರಾಜೀಯಲ್ಲಿ ಮುಗಿಸಲು ಪಂಚಾತಿಕೆ ನಡೆಸಲಾಗಿತ್ತು. ಇದರಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಆರೋಪಿ ಒಪ್ಪಿಕೊಂಡಿದ್ದರ ಹಿನ್ನಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಈ ನಡುವೆ ಜಾತಿ ಸಮಸ್ಯೆ ಈ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದು, ವಿವಾಹಕ್ಕೆ ತಡೆಯಾಗಿತ್ತು. ಆರೋಪಿ ಮದುವೆಯಾಗಲು ಸಾಧ್ಯವಿಲ್ಲ ಎಂದ ತಕ್ಷಣ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣವನ್ನು ರಾಜೀಪಂಚಾತಿಕೆ ಮೂಲಕ ಮುಗಿಸಲು ಹಲವು ಗಣ್ಯವ್ಯಕ್ತಿಗಳು ಭಾಗಿಯಾಗಿದ್ದು, ಇದೀಗ ಸಮಸ್ಯೆ ಉಲ್ಭಣಗೊಂಡ ಹಿನ್ನಲೆಯಲ್ಲಿ ಇವರೆಲ್ಲಾ ಪಂಚಾತಿಕೆ ಪ್ರಕರಣದಿಂದ ದೂರ ಸರಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಂತ್ರಸ್ತೆಯ ಕುಟುಂಬ ಮಾದ್ಯಮಗಳ ಮುಂದೆ ಬಂದು ಈ ಪ್ರಭಾವಿಗಳ ಹೆಸರು ಬಹಿರಂಗ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ರಾಜೀಪಂಚಾತಿಕೆ ನಡೆಸಿದವರ ವಿರುದ್ಧ ಉನ್ನತ ಪೊಲೀಸ್ ಅಧಿಕಾರಿಗಳು ಗರಂ ಆಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಆರೋಪಿ ಕಳೆದ ಒಂದು ತಿಂಗಳಿನಿಂದ ಕಾಲೇಜಿಗೆ ಗೈರು ಹಾಜರಾಗಿದ್ದು, ಪರೀಕ್ಷೆಗೂ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.