
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.12: ನಮ್ಮ ಹಿರಿಯರು ಕಟ್ಟಿಕೊಟ್ಟಿದ್ದ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ನವ ಸಮಾಜದ ನಿರ್ಮಾಣವಾದರೆ ಮಾತ್ರ ನಾವು ನಿಜವಾದ ಮಾನವರಾಗಿ ಬದುಕಲು ಸಾಧ್ಯ ಎಂದು ನಿವೃತ್ತ ಸುಪ್ರಿಂಕೋರ್ಟ್ ಮತ್ತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಗಡೆ ಅಭಿಪ್ರಾಯಪಟ್ಟರು
ಅವರು ತಾಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ಲೋಕಾರ್ಪಣೆಗೊಂಡ ನೂತನ ಶ್ರೀ ಕಾಲಭೈರವೇಶ್ವರ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಒಳಗೆ ವ್ಯಕ್ತಿಗಳು ಬೆರೆತಾಗ ಮಾತ್ರ ಸಮಾಜದ ಸಮಸ್ಯೆಗಳು ಅರಿವಾಗಲು ಸಾಧ್ಯ. ನಾನು ಸುಪ್ರಿಂ ಕೋರ್ಟಿನ ನ್ಯಾಯಾಧಿಶನಾಗಿದ್ದರೂ ನನಗೆ ಸಮಾಜದ ಸಮಸ್ಯೆಗಳ ಅರಿವು ಇರಲಿಲ್ಲ. ನಾನೊಬ್ಬ ಕೂಪ ಮಂಡೂಕನಾಗಿದ್ದೆ. ನಾನು ಲೋಕಾಯುಕ್ತಕ್ಕೆ ಬಂದ ಅನಂತರವೇ ನನಗೆ ಜನರ ಸಮಸ್ಯೆಗಳ ಅರಿವಾದದ್ದು. ಇಂದಿನ ಸಮಸ್ಯೆಗಳಿಗೆ ವ್ಯಕ್ತಿಗಳ ತಪ್ಪಿಲ್ಲ. ಬದಲಾಗಿ ಸಮಾಜದ ತಪ್ಪಿದೆ. ಹಿಂದೆ ಯಾವುದೇ ವ್ಯಕ್ತಿ ತಪ್ಪು ಮಾಡಿದರೆ ತಂದೆ ತಾಯಂದಿರು, ಗುರು ಹಿರಿಯರು ತಿದ್ದಿ ಸರಿಪಡಿಸುತ್ತಿದ್ದರು. ಹುಟ್ಟಿದ ಮಗು ಸಮಾಜಕ್ಕೆ ಅಂಜಿ ನಡೆಯುವುದನ್ನು ಕಲಿಸಲಾಗುತ್ತಿತ್ತು. ಇದು ತಪ್ಪಿದ ಅನಂತರ ಸಮಾಜದ ಭಾವನೆಗಳು ಬದಲಾಗಿವೆ. ಹಣ ಮತ್ತು ಅಧಿಕಾರ ಇರುವವರನ್ನು ಪೂಜಿಸಿ ಆರಾಧಿಸುವವರ ಪರಂಪರೆ ಆರಂಭವಾಗಿದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ದೇವರು ಪ್ರೇಮಮಹಿ. ದೇವರ ಬಳಿಗೆ ನಾವು ಭಯದಿಂದ ಹೋಗಬಾರದು. ಯಾವುದೇ ಪೂರ್ವಾಪರ ಅಪೇಕ್ಷೆಗಳಿಲ್ಲದೆ ನಾವು ಭಕ್ತಿಯಿಂದ ಭಗವಂತನಲ್ಲಿಗೆ ಹೋದರೆ ಮಾತ್ರ ದೇವರ ಅನುಗ್ರಹವಾಗುತ್ತದೆ. ದೇವರು ಒಬ್ಬನೆ. ಆದರೆ ನಾಮ ಹಲವು. ನಾವು ಯಾವುದೇ ಹೆಸರಿನಿಂದ ಪೂಜಿಸಿದರು ದೇವರು ಒಲಿಯುತ್ತಾನೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ಭಕ್ತಿ ಎನ್ನುವುದು ನಮ್ಮ ಅಂತ:ಕರಣದಿಂದ ಹೊರಹೊಮ್ಮಬೇಕು. ಭಯದಿಂದ ದೇವರ ಮೇಲೆ ಭಕ್ತಿ ಬರಬಾರದು. ಭಗವಂತ ಸರಳ ಪೂಜೆಗೆ ಮಾತ್ರ ಒಲಿಯುತ್ತಾನೆ. ಭಗವಂತನ ಮುಂದೆ ಆಡಂಭರದ ಪೂಜೆ ಸಲ್ಲದು. ದೇವಾಲಯಗಳನ್ನು ನಿರ್ಮಿಸಿದ ಮಾತ್ರಕ್ಕೆ ಪುಣ್ಯ ಸಂಪಾಧನೆಯಾಗುವುದಿಲ್ಲ. ಬದಲಾಗಿ ಗುರು ಹಿರಿಯರು, ತಂದೆ ತಾಯಿಯ ಬಗ್ಗೆ ನಾವು ಭಕ್ತಿ ಗೌರವಗಳನ್ನು ಬೆಳೆಸಿಕೊಳ್ಳಬೇಕು. ದೇವಾಲಯಗಳ ನಿರ್ಮಾಣದಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಯುತ್ತದೆ. ನಾನು ನನ್ನ ಶಾಸಕ ನಿಧಿಯಿಂದ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡುತ್ತಿದ್ದೇನೆಂದರು.
ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ, ಮಂಡ್ಯದ ಕೊಮ್ಮೇರಹಳ್ಳಿ ವಿಶ್ವಮಾನವ ಕೇಂದ್ರದ ಕಾರ್ಯದರ್ಶಿ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಮಾಜಿ ಶಾಸಕ ಬಿ.ಪ್ರಕಾಶ್, ನಿವೃತ್ತ ಎ.ಸಿ.ಪಿ ರಮೇಶ್, ಆರ್.ಟಿ.ಓ ಮಲ್ಲಿಕಾರ್ಜುನ್, ಜಯಕೀರ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರೇವಣ್ಣ,ಸೇರಿದಂತೆ ಹಲವರು ಭಾಗವಹಿಸಿದ್ದರು.