ನಭಕ್ಕೆ ಹಾರಿದ ಶುಭಾಂಶು

ಫ್ಲೋರಿಡಾ, ಜೂ.೨೫- ಹವಾಮಾನ ವೈಪರಿತ್ಯ, ಆಮ್ಲಜನಕ ಸೋರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಹಲವು ಭಾರಿ ಮುಂದೂಡಲ್ಟಟ್ಟಿದ್ದ ಆಕ್ಸಿಯಮ್ -೪ ಮಿಷನ್ ನ ಫಾಲ್ಕನ್ ೯ ರಾಕೆಟ್ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ ೧೨.೦೧ಕ್ಕೆ ಅಮೇರಿಕಾದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಗೊಂಡಿದ್ದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಈ ಮೂಲಕ ಅಂತರಿಕ್ಷ ಯಾನದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.


ನಿಗದಿತ ಸಮಯಕ್ಕೆ ನಭಕ್ಕೆ ರಾಕೆಟ್ ಜಿಗಿಯುತ್ತಿದ್ದಂತೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ “ಕಮಾಲ್ ಕೀ ರೈಡ್” ಎನ್ನುವ ಮೊದಲ ಮಾತು ಖಗೋಳ ವಿಜ್ಞಾನಿಗಳು ಹಾಗು ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಸಂತಸ ಮನೆ ಮಾಡಿದೆ..ಅದರಲ್ಲಿಯೂ ಶುಭಾಂಶು ಶುಕ್ಲಾ ಮತ್ತವರ ಕುಟುಂಬಸ್ಥರು, ಸ್ನೇಹಿತರ ಸಂತೋಷಕ್ಕೆ ಪಾರವೇ ಇರಲಿಲ್ಲ, ತಾಯಿ, ತಂದೆ ಸೇರಿದಂತೆ ಅನೇಕರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು


ಆಕ್ಸಿಯಮ್ ೪ ಸ್ಪೇಸ್ ಮಿಷನ್ ಮೂಲಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡಿತು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ೧೪ ದಿನಗಳ ವೈಜ್ಞಾನಿಕ ಕಾರ್ಯಾಚರಣೆ ನಡೆಸಲಿದ್ದಾರೆ.


ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ -೪ ಮಿಷನ್ ಯಶಸ್ವಿಯಾಗಿ ಉಡಾವಣೆಯಾಗುತ್ತಿದ್ದಂತೆ ದೆಹಲಿಯಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಭಾರತದಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನರ್ ಫಿಲಿಪ್ ಗ್ರೀನ್, ದಕ್ಷಿಣ ಆಸ್ಟ್ರೇಲಿಯಾದ ಗವರ್ನರ್ ಫ್ರಾನ್ಸಿಸ್ ಆಡಮ್ಸನ್ ಎಸಿ ಮತ್ತಿತರು ಚಪ್ಪಾಳೆ ತಟ್ಟಿ ಗಗನಯಾತ್ರಿಗಳ ಪಯಣಕ್ಕೆ ಶುಭ ಹಾರೈಸಿದರು.


ಈ ವೇಳೆ ಪ್ರತಿಕ್ರಿಯಿಸಿದ ಡಾ, ಜಿತೇಂದ್ರ ಸಿಂಗ್, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆಗಳು -ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಾಟ ನಡೆಸಿದ ಗಗನಯಾತ್ರಿ ಎನ್ನುವುದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಕ್ಷಣ ಎಂದಿದ್ಧಾರೆ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಚಯಿಸಿದ ಸುಧಾರಣೆಗಳಿಂದಾಗಿ ಬೆಳೆಯುತ್ತಿರುವ ಜಾಗತಿಕ ಸಹಯೋಗಗಳು ಭಾರತವನ್ನು ಬಾಹ್ಯಾಕಾಶ ಪರಿಶೋಧನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರವನ್ನಾಗಿ ಮಾಡಿದೆ ಎಂದಿದ್ದಾರೆ.


ಈ ನಡುವೆ ಶುಭಾಂಶು ಶುಕ್ಲಾ ಅವರ ಸಂಬಂಧಿಕರು ಮತ್ತು ಸ್ನೇಹಿತರು ಸಂತೋಷದ ಕ್ಷಣದಲ್ಲಿ ಭಾಗಿಯಾದರು.ವಾಣಿಜ್ಯ ಸಿಬ್ಬಂದಿ ವಿಮಾನದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದು ಕುಟುಂಬ ಮತ್ತು ರಾಷ್ಟ್ರ ಎರಡಕ್ಕೂ ಒಂದು ಮೈಲಿಗಲ್ಲು ಎಂದು ಕುಟುಂಬಸ್ಥರು ಸ್ನೇಹಿತರು ಸಂತಸ ಹಂಚಿಕೊಂಡಿದ್ದಾರೆ.


೧೯೮೫ರಲ್ಲಿ ಮೊದಲ ಬಾರಿಗೆ ಗಗನಯಾನ ಕೈಗೊಂಡಿದ್ದ ರಾಕೇಶ್ ಶರ್ಮಾ ಬಳಿಕ ಎರಡನೇ ಭಾರತೀಯ ಎನ್ನುವ ಹಿರಿಮೆಗೆ ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ. ೪೧ ವರ್ಷಗಳ ಬಳಿಕ ಭಾರತ ಎರಡನೇ ಬಾರಿಗೆ ಗಗನಯಾನ ಕೈಗೊಂಡಿದ್ದು ಮತ್ತೊಮ್ಮೆ ಹೊಸ ಮೈಲುಗಲ್ಲು ಸ್ಥಾಪಿಸಿದೆ.


ಫಾಲ್ಕನ್ ೯ ರಾಕೆಟ್ ಮೂಲಕ ಉಡಾವಣೆ ಮಾಡಲಾದ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಈ ತಂಡದಲ್ಲಿ ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್, ಪೊಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಜೊತೆ ಶುಭಾಂಶು ಶುಕ್ಲಾ ಗಗನಯಾನ ಕೈಗೊಂಡಿದ್ದಾರೆ.


ಎರಡು ವಾರಗಳ ಕಾರ್ಯಾಚರಣೆಯಲ್ಲಿ, ಗಗನಯಾತ್ರಿಗಳು ಇಸ್ರೋ ವಿನ್ಯಾಸಗೊಳಿಸಿದ ಏಳು ಪ್ರಯೋಗಗಳು ಸೇರಿದಂತೆ ಸುಮಾರು ೬೦ ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಸೇರಿದಂತೆ ಇಡೀ ದೇಶ ಕಾತುರದಿಂದ ಕಾದು ನೋಡುತ್ತಿದೆ.


ಗಗನಯಾತ್ರಿಗಳು ಸಾಮಾನ್ಯವಾಗಿ ಹಗುರವಾದ ಮಾವಿನ ಮಕರಂದ, ಕ್ಯಾರೆಟ್ ಹಲ್ವಾ ಮತ್ತು ಹೆಸರು ಬೇಳೆ ಹಲ್ವಾವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುದ್ದಿದ್ದಾರೆ.
೧೯೮೫ ರಲ್ಲಿ ಜನಿಸಿದ ಶುಭಾಂಶು ಶುಕ್ಲಾ, ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದು, ರಾಕೇಶ್ ಶರ್ಮಾ ಅವರ ಪ್ರಯಾಣದಿಂದ ಪ್ರೇರಿತರಾಗಿ ಈಗ ಗಗನಯಾನ ಕೈಗೊಂಡಿದ್ದಾರೆ.


ಗಗನಯಾನ ಕೈಗೊಳ್ಳುವ ಮುನ್ನ ಮಾಹಿತಿ ಹಂಚಿಕೊಂಡ ಶುಭಾಂಶು ಶುಕ್ಲಾ, “ಬಾಹ್ಯಾಕಾಶದಲ್ಲಿ ತಿನ್ನಲು ಸಾಕಷ್ಟು ಆಹಾರವಿದೆ. ಮಾವಿನ ಮಕರಂದ, ಕ್ಯಾರೆಟ್ ಹಲ್ವಾ ಮತ್ತು ಹೆಸರು ಬೇಳೆ ಹಲ್ವಾವನ್ನು ಕೊಂಡೊಯ್ಯುತ್ತೇನೆ” ಎಂದು ತಿಳಿಸಿದ್ದಾರೆ


ದೇಶದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ಮಾರ್ಗದರ್ಶಕ ಎಂದು ಪರಿಗಣಿಸುತ್ತಿದ್ದು, ಕಾರ್ಯಾಚರಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ನನಗೆ ಸಲಹೆ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.

  • ಹಲವು ಬಾರಿ ಮುಂದೂಡಿಕೆಯ ಬಳಿಕ ಆಕ್ಸಿಯಮ್ -೪ ಮಿಷನ್ ಯಶಸ್ವಿ ಉಡಾವಣೆ
  • ಶುಭಾಂಶು ಶುಕ್ಲಾ ಅವರು “ ಕಮಾಲ್ ಕಿ ರೈಡ್” ಮೊದಲ ಮಾತಿಗೆ ಸಂತಸ
  • ಸಚಿವ ಡಾ. ಜಿತೇಂದ್ರ ಸಿಂಗ್ ಸೇರಿ ವಿವಿಧ ದೇಶಗಳ ರಾಯಬಾರಿಗಳ ಹರ್ಷ
  • ರಾಕೇಶ್ ಶರ್ಮಾ ಬಳಿಕ ಶುಭಾಂಶು ಶುಕ್ಲಾ ಗಗನಯಾನ
  • ೪೧ ವರ್ಷಗಳ ಬಳಿಕ ಮತ್ತೊಬ್ಬ ಭಾರತೀಯನ ಗಗನಯಾತ್ರೆ
  • ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್, ಪೊಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ
  • ಹಂಗೇರಿಯ ಟಿಬೋರ್ ಕಾಪು ಜೊತೆ ಶುಭಾಂಶು ಶುಕ್ಲಾ ಗಗನಯಾನ
  • ಎರಡು ವಾರಗಳ ಕಾರ್ಯಾಚರಣೆಯಲ್ಲಿ, ಗಗನಯಾತ್ರಿಗಳು ಇಸ್ರೋ ವಿನ್ಯಾಸಗೊಳಿಸಿದ ಏಳು ಪ್ರಯೋಗ

ಜೈ ಹಿಂದ್ ,ಜೈ ಭಾರತ್


“ನಾವು ಭೂಮಿಯ ಸುತ್ತ ಸುತ್ತುತ್ತಿದ್ದೇವೆ. ಇದು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಆರಂಭ. ಜೈ ಹಿಂದ್, ಜೈ ಭಾರತ್.”


ಆಕ್ಸಿಯಮ್ -೪ ಮಿಷನ್ ಯಶಸ್ವಿಯಾಗಿ ಭೂಮಿಯ ಕಕ್ಷೆಗೆ ಪ್ರವೇಶಿಸಿದ ಸ್ವಲ್ಪ ಸಮಯದ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಕಕ್ಷೆಯಿಂದ ಮಾತನಾಡಿದ ಮೊದಲ ಮಾತುಗಳಿವು.


ಫಾಲ್ಕನ್ ೯ ಮೇಲಿನ ಹಂತದಿಂದ ಬೇರ್ಪಟ್ಟ ನಂತರ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಪ್ರಸಾರವಾದ ಅವರ ಸಂದೇಶ ಇದಾಗಿದ್ದು ಕಮಾಲ್ ಕಿ ರೈಡ್ ಎಂದು ಉದ್ಗಾರ ತೆಗೆದಿದ್ದಾರೆ.


೧೯೮೪ ರಲ್ಲಿ ರಾಕೇಶ್ ಶರ್ಮಾ ಅವರ ಐಕಾನಿಕ್ ಮಿಷನ್ ನಂತರ ೪೧ ವರ್ಷಗಳ ನಂತರ ಭಾರತಕ್ಕೆ ಮಾನವ ಬಾಹ್ಯಾಕಾಶ ಹಾರಾಟಕ್ಕೆ ಐತಿಹಾಸಿಕ ಕ್ಷಣ ಇದಾಗಿದೆ.
ನೌಕೆಯಲ್ಲಿ ನಾಲ್ವರು ಭಾರತದ ಶುಕ್ಲಾ, ಅಮೆರಿಕದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಸೇರಿ ನಾಲ್ವರಿದ್ದಾರೆ.

ಪತ್ನಿಗೆ ಶುಭಾಂಶು ಭಾವುಕ ಸಂದೇಶ


ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು ಅಮೆರಿಕಾದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಪ್ರಯಾಣ ಬೆಳಸಿದ್ದು ಈ ಪ್ರಯಾಣಕ್ಕೂ ಮುನ್ನ ಅವರು ತಮ್ಮ ಪತ್ನಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ.


ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸುವ ಮುನ್ನ ತನ್ನ ಪತ್ನಿ ಕಾಮ್ನಾ ಶುಕ್ಲಾ ಅವರಿಗೆ ಬರೆದಿರುವ ವಿಶೇಷ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶುಭಾಂಶು ಅವರು, ನಾವು ೨೫ನೇ ತಾರೀಖಿನ ಮುಂಜಾನೆ ಈ ಗ್ರಹವನ್ನು ಬಿಡಲು ಯೋಜಿಸಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರವ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಮನೆಯಲ್ಲಿರುವ ಎಲ್ಲರಿಗೂ ಅವರ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಧನ್ಯವಾದಗಳು ಎಂದು ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿದ್ದಾರೆ.


ನನ್ನ ಜತೆ ಉತ್ತಮ ಒಡನಾಡಿಯಾಗಿದ್ದಕ್ಕೆ ನನ್ನ ಪತ್ನಿ (ಕಾಮ್ನಾ ಶುಕ್ಲಾ)ಗೆ ವಿಶೇಷ ಧನ್ಯವಾದ ಎಂದು ಅವರು ಭಾವನಾತ್ಮಕವಾಗಿ ಸಂದೇಶವನ್ನು ಕಳುಹಿಸಿದ್ದಾರೆ.


ಯಾವುದೇ ವ್ಯಕ್ತಿ ಒಬ್ಬಂಟಿಯಾಗಿ ಬಾಹ್ಯಾಕಾಶಕ್ಕೆ ಪ್ರಯಣಿಸುವುದಿಲ್ಲ.ನಾವು ಇದನ್ನು ಅನೇಕ ಜನರ ಹೆಗಲ ಮೇಲೆ ಕುಳಿತು ಮಾಡುತ್ತೇವೆ. ನಾನು ನಿಮಗೆಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಕುಟುಂಬದ ಸಂತಸ


ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪುತ್ತಿರುವ ಅವರ ಕುಟುಂಬ ಸಂತಸ ವ್ಯಕ್ತಪಡಿಸಿದ್ದು ಅವರ ತಾಯಿ ನಮ್ಮ ಸಂತಸಕ್ಕೆ ಪಾರವೇ ಇಲ್ಲ. ನನ್ನ ಸಂತಸವನ್ನು ಪದಗಳಲ್ಲಿ ವ್ಯಕ್ತಪಡಿಸಿಲು ಸಾಧ್ಯವಿಲ್ಲ. ಎಲ್ಲರೂ ನನ್ನ ಮಗನಿಗೆ ಶುಭ ಹಾರೈಸಿದ್ದಾರೆ ಎಂದು ಭಾವುಕವಾಗಿ ಹೇಳಿದ್ದಾರೆ.