ದೂರು ಸ್ವೀಕಾರ ಕೇಂದ್ರ ತೆರೆಯಿರಿ: ಎನ್.ಚಲುವರಾಯಸ್ವಾಮಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.25:
ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯತಿಯಲ್ಲಿ ಜನರ ದೈನಂದಿನ ದೂರುಗಳನ್ನು ಸ್ವೀಕರಿಸಿ ಕ್ರಮ ವಹಿಸಲು ದೂರು ಸ್ವೀಕಾರ ಕೇಂದ್ರವನ್ನು ತೆರೆಯುವಂತೆ ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆದೇಶಿಸಿದರು.


ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಸರ್ಕಾರದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಜನರ ಸಮಸ್ಯೆಗಳು ಜೀವಂತವಾಗಿಯೇ ಉಳಿದಿವೆ. ಇದಕ್ಕೆ ಯಾರು ಕಾರಣ ಎನ್ನುವುದರ ಆತ್ಮಾವಲೋಕನ ಆಗಬೇಕು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನರ ಎಲ್ಲಾ ಸಮಸ್ಯೆಗಳನ್ನು ಏಕ ಕಾಲಕ್ಕೆ ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅಕ್ರಮ ಸಕ್ರಮ ಸಮಸ್ಯೆ ಪರಿಹಾರಕ್ಕಾಗಿ ಎ ಖಾತೆ, ಬಿ ಖಾತೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ. ಯಾವುದೇ ದಾಖಲೆಗಳನ್ನು ಮಾರ್ಪಡಿಸಲು ಒಂದಷ್ಟು ಸಮಯ ಬೇಕಾಗುತ್ತದೆ. ಪಂಚಾಯತ್ ರಾಜ್, ಕಂದಾಯ ಮತ್ತು ನಗರಾಭಿವೃದ್ದಿ ಇಲಖೆಯಲ್ಲಿ ಸಾಕಷ್ಟು ಅಕ್ರಮ-ಸಕ್ರಮ ಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ನಾನು ಜಿಲ್ಲೆಯ ಜವಾಬ್ದಾರಿಯುತ ಸಚಿವನಾಗಿದ್ದು ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಜಿಲ್ಲೆಯಲ್ಲಿ 20 ಸಾವಿರ ರೆವಿನ್ಯೂ ಕೇಸ್ ಬಗೆಹರಿಸಲಾಗಿದೆ. ಕಳೆದ ಎಂಟು ತಿಂಗಳಿನಲ್ಲಿ ಪಾಂಡವಪುರ ಉಪ ವಿಭಾಗ ಒಂದರಲ್ಲಿಯೇ ಎಂಟು ಸಾವಿರ ಪಹಣಿ ತಿದ್ದುಪಡಿ, ಎಂಟು ಸಾವಿರ ಪೌತಿ ಖಾತೆಗಳನ್ನು ಮಾಡಲಾಗಿದೆ. ರೈತರು ತಮ್ಮ ತಮ್ಮ ಭೂದಾಖಲೆಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದ ಸಚಿವ ಎನ್.ಚಲುವರಾಯಸ್ವಾಮಿ ಜನರ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಆಗಲೇಬೇಕಾಗುತ್ತದೆಂದು ಎಚ್ಚರಿಸಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಶಾಶ್ವತರಲ್ಲ. ಒಬ್ಬರ ಅಧಿಕಾರದ ಅವಧಿಯಲ್ಲಿ ಆದ ಅಭಿವೃದ್ದಿ ಕಾಮಗಾರಿಗಳನ್ನು ಮತ್ತೊಬ್ಬರ ಅಧಿಕಾರದ ಅವಧಿಯಲ್ಲಿ ಮುಂದುವರಿಸಲೇ ಬೇಕಾಗುತ್ತದೆ. ಅಭಿವೃದ್ದಿಯಲ್ಲಿ ಪಕ್ಷ ರಾಜಕಾರಣ ಸಲ್ಲದು. ಕೆಲಸ ಮಾಡುವವರನ್ನು ಬೈಯ್ಯವುದು ಸಹಜ. ನಾವು ಅಭಿವೃದ್ದಿ ಕೆಲಸಗಳನ್ನು ಮಾಡಿದಷ್ಟು ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಅನುಭವ ನನಗಾಗಿದೆ. ವಿರೋಧಿಗಳ ಟೀಕೆಗೆ ಹೆದರಿ ಅಭಿವೃದ್ದಿ ಕೆಲಸದಿಂದ ಹಿಂಜರಿಯುವವನು ನಾನಲ್ಲ. ಸಿಕ್ಕಿರುವ ಅಧಿಕಾರದ ಅವಧಿಯನ್ನು ಪ್ರಾಮಾಣಿಕವಾಗಿ ಜನಸೇವೆಗೆ ಬಳಸುತ್ತೇನೆ ಎಂದ ಸಚಿವ ಎನ್.ಚಲುವರಾಯಸ್ವಾಮಿ ಕಳೆದ ಅವಧಿಯಲ್ಲಿ ರಾಜ್ಯದಲ್ಲಿ 3 ಜನ ಮುಖ್ಯಮಂತ್ರಿಗಳಿದ್ದರು. ನಮ್ಮ ಅಧಿಕಾರದ ಅವಧಿಯಲ್ಲಿ ನಾನು ತಂದಿರುವ ಅನುದಾನ ಮತ್ತು ಹಿಂದಿನ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ದಿಗೆ ತಂದಿರುವ ಅನುದಾನವನ್ನು ವಿಶ್ಲೇಷಿಸಲಿ ಎಂದು ಟೀಕೆಗಾರರಿಗೆ ಸವಾಲು ಹಾಕಿದರು.


ಪಂಚಾಯತ್ ರಾಜ್, ಇಲಾಖೆ, ಕಂದಾಯ ಮತ್ತು ಶಿಶು ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಫಲಾನುಭವಿ ಮಂಜೂರಾತಿ ಪತ್ರಗಳನ್ನು ವಿತರಿಸಿದರು.


ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್,ಜಿಲ್ಲಾಧಿಕಾರಿ ಡಾ.ಕುಮಾರ್, ಸಿ.ಇ.ಓ ಕೆ.ಆರ್.ನಂದಿನಿ, ಜಿಲ್ಲಾ ಅಪರ ಪೆÇಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಇ.ಓ ಕೆ.ಸುಷ್ಮಾ, ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.