ಗ್ರಾಮೀಣ ಪ್ರದೇಶದ ಪ್ರಗತಿಗೆ ಮುಂದಾಗಿ: ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.27:
ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ದತ್ತವಾಗಿರುವ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶದ ಪ್ರಗತಿಗೆ ಮುಂದಾಗುವಂತೆ ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.


ಅವರು ತಾಲೂಕು ಸಾರಂಗಿ ಗ್ರಾಮ ಪಂಚಾಯತಿ ಆವರಣದಲ್ಲಿ ಪಂಚಾಯತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದಿಯಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಹಿರಿದಾಗಿದೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಮಟ್ಟದಲ್ಲಿ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಗಳು ನಡೆದರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಗಳು ನಡೆಯುತ್ತವೆ. 2019 ರಲ್ಲಿಯೇ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಾರ್ಷಿಕ ನಾಲ್ಕು ಕೆಡಿಪಿ ಸಭೆಗಳನ್ನು ನಡೆಸಿ ಪ್ರಗತಿ ಪರಿಶೀಲನೆ ನಡೆಸುವ ಅಧಿಕಾರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರುಗಳಿಗೆ ನೀಡಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ತಮಗೆ ದತ್ತವಾಗಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಶ್ರಮಿಸಬೇಕು. ಕೆಲವು ಅಧಿಕಾರಿಗಳಿಗೆ ಗ್ರಾಮೀಣ ಮಟ್ಟದ ಕೆಡಿಪಿ ಸಭೆಗಳ ಬಗ್ಗೆ ಉದಾಸೀನ ಮನೋಭಾವ ಇದೆ. ಕೆಡಿಪಿ ಸಭೆಗಳಿಂದ ಏನಾಗುತ್ತದೆ ಎನ್ನುವ ವ್ಯತಿರಿಕ್ತ ಭಾವನೆ ಇದೆ. ಕೆಡಿಪಿ ಸಭೆಗಳಿಗೆ ಭಾಗವಹಿಸದ ಅಧಿಕಾರಿಗಳ ಬಗ್ಗೆ ಗ್ರಾ.ಪಂ ಅಧ್ಯಕ್ಷರುಗಳು ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸೇರಿದಂತೆ ಸರ್ಕಾರಕ್ಕೆ ವರದಿ ಮಾಡಬೇಕು. ಕೆಡಿಪಿ ಸಭೆಗಳು ನಿರಂತರವಾಗಿ ನಡೆಯುತ್ತಿದ್ದರೆ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಾರೆ. ಕೆಲಸ ಮಾಡದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ವಿರುದ್ದ ಕಾನೂನಾತ್ಮಕ ಚಾಟಿ ಬೀಸುವ ಕೆಲಸವನ್ನು ಗ್ರಾ.ಪಂ ಅಧ್ಯಕ್ಷರುಗಳು ಮಾಡಬೇಕು. ಕೆ.ಡಿ.ಪಿ ಸಭೆಯ ಮಹತ್ವದ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಅರಿವು ಮೂಡಿಸಿಕೊಂಡರೆ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆಂದ ಶಾಸಕ ಹೆಚ್.ಟಿ.ಮಂಜು ಸರ್ಕಾರದ ಅನುದಾನವನ್ನು ಗ್ರಾಮ ಪಂಚಾಯತಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕ ನೀತಿ ಅನುಸರಿಸಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳು ದೊರಕುವಂತೆ ಮಾಡಬೇಕೆಂದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಗುವ ಕೆಲಸಗಳಿಗೂ ಜನ ಕ್ಷೇತ್ರದ ಶಾಸಕರ ಬಳಿಗೆ ಬರುತ್ತಿದ್ದಾರೆ. ಇದು ತಪ್ಪಬೇಕಾದರೆ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಹೆಚ್ಚು ಸಕ್ರಿಯರಾಗಿರಬೇಕು. ಪಿ.ಡಿ.ಓ ಗಳ ನಿಯಂತ್ರಣಕ್ಕೆ ಅಧ್ಯುಕ್ಷರುಗಳು ಒಳಪಡದೆ ಕಾನೂನಿನ ಚೌಕಟ್ಟಿನಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿಸಬೇಕೆಂದು ಶಾಸಕ ಹೆಚ್.ಟಿ.ಮಂಜು ಕಿವಿಮಾತು ಹೇಳಿದರು.


ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾವತಿ ನವೀನ್, ಉಪಾಧ್ಯಕ್ಷ ಸಿ.ಎಸ್.ರಾಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಲೋಚನಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಎಸ್.ಎನ್.ಸೌಭಾಗ್ಯ, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಪಶು ಇಲಾಖೆ ವೈದ್ಯಾಧಿಕಾರಿ ಡಾ.ದೇವರಾಜು, ಪಿ.ಡಿ.ಓ ಬಳ್ಳೇಕೆರೆ ಗಣೇಶ್, ಗ್ರಾ.ಪಂ ಸದಸ್ಯರುಗಳಾದ ಎನ್.ರಮೇಶ್, ಕೆ.ಕೆ.ನಂಜೇಗೌಡ, ಗೌಡ ಆನಂದ ಕೆಂಪ, ಜೆ.ಎನ್.ಕಿಟ್ಟಿ, ಎಸ್.ಕೆ.ಬಸವರಾಜು, ಮಂಜೇಗೌಡ, ಹೇಮಾಕ್ಷಮ್ಮ, ಸಣ್ಣತಾಯಮ್ಮ, ಮಮತಾ, ಮೀನಾಕ್ಷಿ ಮುಖಂಡರುಗಳಾದ ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಕೊರಟೀಕೆರೆ ದಿನೇಶ್, ಅಘಲಯ ಅಜಯ್ ರಾಮೇಗೌಡ ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಹಲವರು ಹಲವರು ಸಭೆಯಲ್ಲಿದ್ದರು.