
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.11: ತಾಲೂಕಿನ ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಾರೀ ಪ್ರಮಾಣದ ಲೋಪದೋಷಗಳಿದ್ದು ಇದರ ವಿರುದ್ದ ಸಹಕಾರ ಕಾಯ್ದೆ 64 ರ ಅಡಿಯಲ್ಲಿ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಸಂಘದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ರೈತಸಂಘದ ಮುಖಂಡ ಚೌಡೇನಹಳ್ಳಿ ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಸಹಕಾರ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿಬಂಧಕರು ಮತ್ತು ಪಾಂಡವಪುರದ ಸಹಾಯಕ ಉಪ ನಿಬಂಧಕರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿರುವ ಅವರು ಆರೋಪಗಳ ಮನವಿ ಪತ್ರಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಮಾತನಾಡಿದರು.
2021-22 ರ ಆಡಿಟ್ ವರದಿಯಂತೆ ಸಂಘ ವಿತರಿಸಿರುವ ಕೃಷಿಯೇತರ ಸಾಲ 29,90,000 ಆಡಳಿತ ಮಂಡಳಿಯ ಗಮನಕ್ಕೆ ಬಂದಿಲ್ಲ. ಆಡಿಟ್ ವರದಿಯಂತೆ 4,18,50,097 ರೂ ಸುಸ್ಥಿ ಸಾಲವಿದೆ. ಇದರಲ್ಲಿ 2023 ಕ್ಕೆ 26,38,637 ರೂ ವಸೂಲಿಯಾಗಿದ್ದು ಸಂಘದ ಲಭಾಂಶದಲ್ಲಿ ಯಾವುದೇ ಏರಿಕೆಯಾಗಿಲ್ಲ. ಸಂಘದ ಮೂಲಕ ಸಾಲ ಮಂಜೂರು ಮಾಡುವಾಗ ಮತ್ತು ವಸೂಲಾತಿ ಮಾಡುವಾಗ ಸಂಘದ ನಿಯಮಗಳನ್ನು ಪಾಲಿಸಿಲ್ಲ. ಈ ಬಗ್ಗೆ ನಾನು ಸಂಘದ ಒಬ್ಬ ಜವಾಬ್ದಾರಿಯುತ ಸದಸ್ಯನಾಗಿ 2022 ರಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸಹಕಾರ ಇಲಾಖೆಯ ಉಪ ನಿಬಂಧಕರು ಒಬ್ಬ ಅಧಿಕಾರಿಯಂತೆ ಕೆಲಸ ಮಾಡುವ ಬದಲು ಸೊಸೈಟಿಯ ಕಾರ್ಯದರ್ಶಿಯಂತೆ ಕೆಲಸ ಮಾಡುತ್ತಿದ್ದು ಅವ್ಯವಹಾರಗಳನ್ನು ಮುಚ್ಚಿ ಹಾಕುವ ತೇಪೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಾರಾಯಣಗೌಡ ಪೂರ್ವಾನುಮತಿಯಿಲ್ಲದೆ ಕೃಷಿಯೇತರ ಸಾಲಗಳಿಗೆ ಅತಿ ಹೆಚ್ಚು ಬಡ್ಡಿ ರಿಯಾಯತಿ ನೀಡಲಾಗಿದೆ. ಇದರಿಂದ ಸಂಘ ನಷ್ಟಕ್ಕೆ ಒಳಗಾಗಿದೆ. ಸುಸ್ಥಿ ಸಾಲ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳದೆ ಲೋಪಮಾಡಲಾಗಿದೆ ಎಂದು 14-12-2023ರ ಜ್ಞಾಪನಾ ಪತ್ರದಲ್ಲಿ ವರದಿ ಸಲ್ಲಿಸಿರುವ ಪಾಂಡವಪುರ ಉಪ ನಿಬಂಧಕರು 08-05-2025 ರ ಜ್ಞಾಪನಾ ಪತ್ರದಲ್ಲಿ ಕೃಷಿಯೇತರ ಸಾಲ ಭಾಗಾಂಶ ವಸೂಲಿಯಾಗಿದೆ ಎಂದು ಬರೆದಿದ್ದರೂ ವಸೂಲಾತಿಯ ಯಾವುದೇ ದಾಖಲೆಗಳನ್ನು ತನಿಖೆ ಮಾಡದೆ ಕರ್ತವ್ಯ ಲೋಪ ಮಾಡಿದ್ದಾರೆ. ನಿಯಮವನ್ನು ಉಲ್ಲಂಘಿಸಿ ಸೊಸೈಟಿಯ ಗುಮಾಸ್ತ ನರಸಿಂಹ ಎನ್ನುವವರಿಗೆ 02 ಲಕ್ಷ ರೂ ಸಾಲ ನೀಡಿದ್ದು ಇದರ ವಿರುದ್ದ ಕ್ರಮ ಜರುಗಿಸುವ ಬದಲು ಇದೀಗ ನರಸಿಂಹ ಅವರ ಸಾಲ ವಸೂಲಾತಿಯಾಗಿದೆ ಎಂದು ಹೇಳಿ ಆಡಳಿತ ಲೋಪವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿದೆ. ಸಂಘದ ಆಯುರ್ವೇದಿಕ್ ಔಷಧಿ ಖರೀದಿಯಲ್ಲಿ 10 ಲಕ್ಷ ರೂ ಸಂಘಕ್ಕೆ ನಷ್ಠವಾಗಿದೆ. ಔಷಧಿ ಖರೀಧಿ ಒಪ್ಪಂದ ಯಾರ ಕಡೆಯಿಂದ ಆಗಿದೆ. ಇದರ ಲೋಪಕ್ಕೆ ಜವಾಬ್ದಾರರು ಯಾರು ಎಂದು ತನಿಖೆ ನಡೆಸಿ ಕ್ರಮ ಜರುಗಿಸುವ ಬದಲು ಆಯುರ್ವೇದಿಕ್ ಔಷಧಿ ಸರಬರಾಜು ಮಾಡಿರುವವರ ವಿರುದ್ದ ಕೆ.ಆರ್.ಪೇಟೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಚೆಕ್ ಕೇಸ್ ಹಾಕಿ ವಿಚಾರಣೆ ನಡೆಯುತ್ತಿದೆ ಎಂದು ಷರಾ ಬರೆದು ತನಿಖೆಯ ವಿಷಯಾಂತರ ಮಾಡಲಾಗಿದೆ. 2009 ರಿಂದಲೂ ಸಂಘ ಲಾಭದಲ್ಲಿದೆ. ಆದರೆ ಲಾಭಾಂಶವನ್ನು ಷೇರುದಾರರಿಗೆ ಹಂಚಿಕೆ ಮಾಡುತ್ತಿಲ್ಲ. ಸಹಕಾರ ಸಂಘಗಳು ಉಳಿದರೆ ಮಾತ್ರ ರೈತರಿಗೆ ಸಹಕಾರಿಯಾಗುತ್ತವೆ.
ರೈತರ ಹಿತದೃಷ್ಠಿಯಿಂದ ಸಹಕಾರ ಸಂಘಗಳ ಕಾವಲಿಗೆ ರಾಜ್ಯ ಸರ್ಕಾರ ಸಹಕಾರ ಇಲಾಖೆಯನ್ನು ಸ್ಥಾಪಿಸಿ ಅದಕ್ಕೆ ಒಬ್ಬರು ಸಚಿವರು ಮತ್ತು ರಾಜ್ಯ ಮಟ್ಟದಿಂದ ಉಪ ವಿಭಾಗದ ಮಟ್ಟದ ವರೆಗೂ ಅನೇಕ ಹಂತದ ಅಧಿಕಾರಿಗಳನ್ನು ನೇಮಕ ಮಾಡಿದೆ. ಸಹಕಾರ ಸಂಘವನ್ನು ಕಾವಲು ಕಾಯಬೇಕಾದ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದರೆ ಸಹಕಾರ ಸಂಘಗಳು ಉಳಿದು ಬೆಳೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿರುವ ರೈತ ಮುಖಂಡ ನಾರಾಯಣಗೌಡ ಕಿಕ್ಕೇರಿ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘದ ಅವ್ಯವಹಾರಗಳ ಬಗ್ಗೆ ನಾನು ಈಗಾಗಲೇ ದಾಖಲೆ ಸಮೇತ ದೂರು ನೀಡಿದ್ದು ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿ ಸಂಘದ ಕಾರ್ಯಲೋಪಗಳ ಬಗ್ಗೆ ಸಮಗ್ರ ತನಿಖೆ ನೆಡಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.