
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.14- ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಕಾಡಾನೆಗಳು ದಾಳಿ ಮಾಡಿ ಫಸಲು ನಾಶ ಮಾಡುತ್ತಿದ್ದೇವೆ ಇದನ್ನು ತಡೆಯಲು ಅರಣ್ಯ ಇಲಾಖೆಯ ಸಂಪೂರ್ಣ ವಿಫಲವಾಗಿದೆ ಎಂದು ರೈತರು ಉಪ ಅರಣ್ಯ ಸಂರಕ್ಷಣಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಗುಂಡ್ಲುಪೇಟೆ ಸರ್ಕಲ್ನಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ರೈತರು ಡಿಸಿಎಫ್ ಭೇಟಿ ಮಾಡಲು ಮುಂದಾದರು. ಅದರೆ ಅಲ್ಲಿನ ಸಿಬ್ಬಂದಿಗಳು ಸಾಹೇಬರು ಮೀಟಿಂಗ್ನಲ್ಲಿದ್ದಾರೆ ಎಂದು ಸುಮಾರು 3 ಗಂಟೆಗೂ ಹೆಚ್ಚು ಕಾಲ ರೈತರು ಕಾಯಿಸಿದ ಪರಿಣಾಮ ರೈತರು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಗಮಿಸಿ, ರೈತರ ಅಹವಾಲು ಸ್ವೀಕರಿಸಿ, ಕಚೇರಿಯಲ್ಲಿ ಕಾಡಾನೆ ತಡೆ ಬಗ್ಗೆ ಸಮಾಲೋಚನೆ ಮಾಡಿದರು.
ಇದಕ್ಕು ಮುನ್ನಾ ಮಾÁತನಾಡಿದ ಅಟ್ಟುಗೂಳಿಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ಚನ್ನಂಜಪ್ಪ, ಪುಣಜನೂರು ಅರಣ್ಯ ವಲಯ ವ್ಯಾಪ್ತಿಯ ಅಟ್ಟುಗೂಳಿಪುರ ಸುತ್ತಮುತ್ತಲಿನ ಜಮೀನುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಸುವರ್ಣವತಿ ಹಾಗೂ ಚಿಕ್ಕಹೊಳೆ ಜಲಾಶಯಕ್ಕೆ ನೀರು ಕುಡಿಯಲು ಬರುವ ಕಾಡಾನೆಗಳು ನಮ್ಮ ಜಮೀನುಗಳಿಗೆ ನುಗ್ಗಿ ಫಸಲುಗಳನ್ನು ಹಾನಿ ಮಾಡುತ್ತಿವೆ. ನಿನ್ನೆ ಕೆಜಿಆರ್ ಪ್ರಕಾಶ್ ಅವರಿಗೆಸೇರಿದ 7 ತೆಂಗಿನ ಸಸಿಗಳು, ಗಣೇಶ್ ಅವರ ಜಮೀನಿನಲ್ಲಿ ಮುಸುಕಿನ ಜೋಳ, ಹಾಗೂ ಕೆ.ಸಿ. ನಾಗಣ್ಣ ಮತ್ತು ಮಹದೇವಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಫಸಲು ನಾಶಪಡಿಸಿವೆ. ಈ ಸಂಬಂಧ ಅರಣ್ಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಅರಣ್ಯಾಧಿಕಾರಿಗಳು ನಮ್ಮ ಜಮೀನುಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ, ರೈಲ್ವ ಕಂಬಿಗಳನ್ನು ಅಳವಡಿಸಿಕೊಡುವ ಭರವಸೆ ನೀಡಿದ್ದರು. ಜೊತೆಗೆ 300 ಮೀಟರ್ಕ್ಕೊಂದು ಕ್ಯಾಮಾರ ಅಳವಡಿಸಿ, ಅವುಗಳ ಚಲನವಲನಗಳನ್ನು ಗಮನಿಸಿ, ಜಮೀನಿಗೆ ಬರದಂತೆ ತಡೆಯಲು ಕ್ರಮ ವಹಿಸುವುದಾಗಿ ತಿಳಿಸಿದ್ದರು. ಇಬ್ಬರು ಅರಣ್ಯ ಗಾರ್ಡ್ಗಳನ್ನು ನೀಡಿ, ಇವರೊಂದಿಗೆ ರೈತರು ಸಹಕಾರ ನೀಡಿ, ಪ್ರತಿನಿತ್ಯ ಗಸ್ತು ಮಾಡಿ ಕಾಡಾನೆಗಳು ಬರದಂತೆ ತಡೆಯಲು ಕ್ರಮ ವಹಿಸಲಾಗಿತ್ತು. ಅದರಂತೆ ಕಳೆದ 10 ದಿನಗಳಿಂದ ರೈತರ ಸಹಭಾಗಿತ್ವದಲ್ಲಿ ರಾತ್ರಿವೇಳೆಯಲ್ಲಿ ಕಾಡಾನೆಗಳನ್ನು ಕಾಯುತ್ತಿದ್ದೇವೆ. ಇತ್ತೀಚೆಗೆ ಬೇಡಗುಳಿಯಲ್ಲಿ ರೈತ ಮಹಿಳೆ, ರೈತರೊಬ್ಬರ ಮೇಲೆ ಹುಲಿ ದಾಳಿ ಮಾಡಿದ ಪರಿಣಾಮ ಕಾಡಿನೊಳಗೆ ರೈತರನ್ನು ಬಿಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ರೇಂಜರ್ ನಮ್ಮನ್ನು ಬಿಡುತ್ತಿಲ್ಲ. ಹೀಗಾಗಿ ನಮ್ಮ ಜಮೀನುಗಳಿಗೆ ಕಾಡಾನೆಗಳು ದಾಳಿ ಮಾಡಿವೆ ಎಂದು ದೂರಿದರು.
ಮತ್ತೋರ್ವ ರೈತ ಸಿದ್ದಯ್ಯನಪುರ ಡ್ರೈವರ್ಪಾಪಣ್ಣ ಮಾತನಾಡಿ, ಪುಣಜನೂರು ಅರಣ್ಯ ವಲಯ ಅಧಿಕಾರಿಯ ಬೇಜವಾಬ್ದಾರಿತನದಿಂದ ನಮ್ಮ ಜಮೀನುಗಳಿಗೆ ಕಾಡಾನೆಗಳು ಬರುತ್ತಿವೆ. ಇದರ ಬಗ್ಗೆ ಅನೇಕ ಬಾರಿ ತಿಳಿಸಿದರು ಸಹ ಉಡಾಫೆ ಉತ್ತರ ನೀಡುತ್ತಾರೆ.
ಜೊತೆಗೆ ರೈತರ ಸಹಭಾಗಿತ್ವದಲ್ಲಿ ಕಾಡಾನೆ ಓಡಿಸುವ ಕ್ಯಾಂಪ್ ಮಾಡಿದ್ದು, ಇದನ್ನು ಸಹ ಮಾಡದಂತೆ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳು ನಮ್ಮ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿ ರೈಲ್ವೆ ಕಂಬಿಗಳನ್ನು ಅಳವಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಪ್ರಕಾಶ್, ಮಹೇಶ್, ಸೋಮಶೇಖರ್, ಕೆಜಿಆರ್ ಪ್ರಸಾದ್, ಪೆರೈಯಸ್ವಾಮಿ ಮೊದಲಾದವರು ಇದ್ದರು.