
ನವದೆಹಲಿ:ಫೆ.25:– ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ಬಂಧನವನ್ನು ಖಂಡಿಸಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ರಾಜ್ಯದ ನೂರಾರು ಕಾರ್ಯಕರ್ತರು ದೆಹಲಿಗೆ ತೆರಳಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಫೆಬ್ರವರಿ 20 ರಂದು ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆನಗ್ನ ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ಹಿಂದೆ ಉದಯ್ ಭಾನು ಚಿಬ್ ಅವರ ಕೈವಾಡವಿದೆ ಎಂದು ಆರೋಪಿಸಿ ದೆಹಲಿ ಪೆÇಲೀಸರು ಅವರನ್ನು ಬಂಧಿಸಿದ್ದರು. ಇದನ್ನು “ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ನಡೆ” ಎಂದು ಟೀಕಿಸಿದ ಮಂಜುನಾಥ್ ಗೌಡ ಮತ್ತು ಕಾರ್ಯಕರ್ತರ ತಂಡ, ದೆಹಲಿಯ ಬೀದಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಫೆಬ್ರವರಿ 23 ಮತ್ತು 24 ರಂದು ನಡೆದ ಈ ಉಗ್ರರೂಪದ ಹೋರಾಟದಲ್ಲಿ ಕಾರ್ಯಕರ್ತರು ರೈಲು ಹಳಿಗಳ ಮೇಲೆ ನಿಂತು ‘ರೈಲು ರೋಕೋ’ ಚಳುವಳಿ ನಡೆಸಿದರು. ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕರ್ನಾಟಕದಿಂದ ಹೋದ ನೂರಾರು ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದರು. ರಾಷ್ಟ್ರೀಯ ಅಧ್ಯಕ್ಷರ ಬಿಡುಗಡೆಯಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ಯುವ ಕಾಂಗ್ರೆಸ್ ಎಚ್ಚರಿಸಿದೆ.



























